ಸಚಿವ ಕೋಟ ಮನೆಗೆ ಪೇಜಾವರ ಶ್ರೀ ಭೇಟಿ , ಸಚಿವರಿಂದ ಗುರುಪೂಜೆ

ಶ್ರೀಗಳಿಂದ ಹೊಳಪು ಕ್ರೀಡಾಕೂಟ ಆಮಂತ್ರಣ ಪತ್ರಿಕೆ ಬಿಡುಗಡೆ* 

ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಮುಜರಾಯಿ ಮಂತ್ರಿ ಕೋಟ ಶ್ರೀನಿವಾಸ ಪೂಜಾರಿಯವರ ಆಹ್ವಾನದ ಮೇರೆಗೆ ಕೋಟದಲ್ಲಿರುವ ಅವರ ಮನೆಗೆ ಸೋಮವಾರ ಬೆಳಿಗ್ಗೆ ಭೇಟಿ ನೀಡಿದರು .ಶ್ರೀಗಳನ್ನು ಭಕ್ತಿಯಿಂದ ಬರಮಾಡಿಕೊಂಡ ಶ್ರೀನಿವಾಸ ಪೂಜಾರಿ ಶಾಂತಾ ದಂಪತಿ ಶ್ರೀಗಳ ಕಾಲಿಗೆ ನೀರೆರೆದು ತುಳಸಿ ಮಾಲಾರ್ಪಣೆಗೈದು ಬರಮಾಡೊಕೊಂಡರು .‌ ಮನೆಯ ದೇವರ ಕೋಣೆಯ ಮುಂಭಾಗ ಅಲಂಕೃತ ಪೀಠದಲ್ಲಿದ್ದ ಶ್ರೀ ರಾಮದೇವರ ಭಾವಚಿತ್ರಕ್ಕೆ ಪುಷ್ಪ ಮಾಲಾರ್ಪಣೆಗೈದು ಮಂಗಳಾರತಿ ಬೆಳಗಿದರು .

ಬಳಿಕ ನಡೆದ ಗುರುವಂದನಾ ಸಭೆಯಲ್ಲಿ ಪ್ತಸ್ತಾವನೆಯೊಂದಿಗೆ ಶ್ರೀಗಳನ್ನು ಸ್ವಾಗತಿಸಿದ ಸಚಿವರು 7 ವರ್ಷಗಳ ಹಿಂದೆ ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥ ಶ್ರೀಗಳು ಮನೆಗೆ ಭೇಟಿ ನೀಡಿ ಅನುಗ್ರಹಿಸಿದ್ದನ್ನು ಸ್ಮರಿಸಿಕೊಂಡು ಇದೀಗ ಶಿಷ್ಯ ಶ್ರೀಗಳೂ ಗುರುಗಳ ಮಹದಾಶಯಗಳ ದಾರಿಯಲ್ಲಿ ಸಾಗುತ್ತಾ ಸಮಸ್ತ ಹಿಂದೂ ಸಮಾಜವನ್ನು ಸಂಘಟಿಸುವ ಕಾರ್ಯದಲ್ಲಿ ಅತ್ಯಂತ ಸಕ್ರಿಯರಾಗಿ ತಿರುಗಾಡುತ್ತಾ ಇರುವುದು ಅತೀವ ಸಂತಸದ ಸಂಗತಿ.

 

ಶ್ರೀಗಳ ಆಗಮನದಿಂದ ಕುಚೇಲನ ಮನೆಗೆ ಕೃಷ್ಣ ಬಂದಂತಾಗಿದೆ . ತಮ್ಮ ಇಡೀ ಕುಟುಂಬಕ್ಕೆ ಇದರಿಂದ ಹೃದಯ ತುಂಬಿ ಬಂದಿದೆ . ರಾಮನ ಕಾರ್ಯದಲ್ಲಿ ತೊಡಗಿಕೊಂಡ ಶ್ರೀಗಳು ಅಯೋಧ್ಯೆ ಮಂದಿರ ನಿರ್ಮಾಣ ಟ್ರಸ್ಟ್ ನಲ್ಲಿ ದಕ್ಷಿಣ ಭಾರತದ ಏಕೈಕ ಪ್ರತಿನಿಧಿ ಎನ್ನುವುದು ನಮಗೆಲ್ಲ ಹೆಮ್ಮೆಯ ಸಂಗತಿ ಎಂದರು .

ಹಾರ ಫಲಪುಷ್ಪ ಗುರುಕಾಣಿಕೆ ಸಹಿತ ಗುರುವಂದನೆ ಯನ್ನು ಪೂಜಾರಿ ಮನೆಮಂದಿ ಸಲ್ಲಿಸಿದರು . ಇದೇ ಸಂದರ್ಭ ಮಾರ್ಚ್ 13 ರಂದು ನಡೆಯಲಿರುವ ದಕ ಉಡುಪಿ ಉಭಯ ಜಿಲ್ಲೆಗಳ ಪಂಚಾಯತ್ ಸದಸ್ಯರ ಹೊಳಪು ಕ್ರೀಡಾಕೂಟದ ಆಂಮತ್ರಣ ಪತ್ರಿಕೆಯನ್ನು ಶ್ರೀಗಳು ಬಿಡುಗಡೆಗೊಳಿಸಿದರು .ಸಂದೇಶ ನೀಡಿದ ಶ್ರಿಗಳು , ರಾಮನ ಕಾರ್ಯದಲ್ಲಿ ಸಮಗ್ರ ಹಿಂದು ಸಮಾಜ ಮೈಕೊಡವಿ ಉತ್ಸಾಹದಿಂದ ತೊಡಗಿಕೊಳ್ಳಬೇಕು . ಅನ್ಯ ಮತೀಯ ರಿಂದ ಹಿಂದೂ ಸಮಾಜ ಎದುರಿಸುತ್ತಿರುವ ಸವಾಲುಗಳನ್ನು ಸಂಘಟಿತರಾಗಿ ಎದುರಿಸಬೇಕಾಗಿದೆ . ಪ್ರೀತಿಯ ಹೆಸರಿನಲ್ಲಿ ನಮ್ಮ ಮನೆಯ ಹುಡುಗ ಹುಡುಗಿಯರನ್ನು ಅನ್ಯಮತೀಯರು ವಂಚಿಸುತ್ತಿರುವುದರ ವಿರುದ್ಧ ಹಿಂದೂ ಪೋಷಕರು ಅತ್ಯಂತ ಎಚ್ಚರಿಕೆ ವಹಿಸಬೇಕೆಂದರು.

ಹೊಳಪು ಕ್ರೀಡಾಕೂಟ ಯಶಸ್ವಿಯಾಗಲೆಂದು ಹಾರೈಸಿದ ಶ್ರೀಗಳು ಸಚಿವ ಪೂಜಾರಿಯವರು ಮಂತ್ರಿಯಾಗಿ ಇಡೀ ಸಮಾಜದ ಒಳಿತಿಗೆ ಟೊಂಕ ಕಟ್ಟಿಕೊಂಡು ಶ್ರಮಿಸುತ್ತಿರುವುದು ಅತ್ಯಂತ ಶ್ಲಾಘನೀಯ ಎಂದರು .

ಉದ್ಯಮಿ , ಸಾಮಾಜಿಕ ಧುರೀಣ ಆನಂದ್ ಸಿ ಕುಂದರ್ , ಜಿ ಪಂ ಅಧ್ಯಕ್ಷ ದಿನಕರ ಬಾಬು , ಬಿ ಎನ್ ಶಂಕರಪೂಜಾರಿ, ಮಧುಸೂದನ ಬಾಯರಿ, ರಾಮದೇವ ಐತಾಳ, ಶ್ರೀರಮಣ ಉಪಾಧ್ಯಾಯ, ಅಚ್ಯುತ ಅಮೀನ್ ಕಲ್ಮಾಡಿ, ಅನೇಕ ಗ್ರಾಮ‌ಪಂಚಾಯತ್ ಅಧ್ಯಕ್ಷರು , ಸದಸ್ಯರು ಜಿ.‌ಪಂ ತಾಲೂಕು ಪಂಚಾಯತ್ ಸದಸ್ಯರು ಹಾಗೂ ಪೂಜಾರಿಯವರ ಕುಟುಂಬಸ್ಥರು ಉಪಸ್ಥಿತರಿದ್ದರು . ವಾಸುದೇವ ಭಟ್ ಪೆರಂಪಳ್ಳಿ ಸಚಿವರ ಆಪ್ತರಾದ ಹರೀಶ್ ಶೆಟ್ಟಿ ಕೋಟ , ಪ್ರಕಾಶ್ , ರಂಜಿತ್ ಅಶೋಕ್ , ವಿವೇಕ್ ಸುಬ್ರಾಯ ಆಚಾರ್ಯ ಮೊದಲಾದವರು ಸಹಕರಿಸಿದರು .

ಶಬರಿಯನ್ನು ಕಂಡಂತಾಯ್ತು…!!! :ಮನೆಯಲ್ಲಿ ರಾಮನಿಗೆ ಮಂಗಳಾರತಿ ಬೆಳಗಿದ ಬಳಿಕ ಸಚಿವ ಕೋಟ ತಮ್ಮ ಮಾತೃಶ್ರೀ 90 ರ ಹರೆಯದ ಲಚ್ಚಿ ಪೂಜಾರ್ತಿಯವರ ಮೂಲಕ ಅಯೋಧ್ಯೆ ಮಂದಿರ ನಿರ್ಮಾಣಕ್ಕೆ ನಿಧಿ ಸಮರ್ಪಿಸಿದರು. ಇದರಿಂದ ಸಂತೋಷಗೊಂಡ ಶ್ರೀಗಳು ಶಬರಿಯ ದರ್ಶನವಾದಂತಾಯ್ತು ಎಂದು ಲಚ್ಚಿ ಯಮ್ಮನಿಗೆ ಶಾಲು ಹೊದೆಸಿ ಅಭಿನಂದಿಸಿದರು.

 
 
 
 
 
 
 
 
 
 
 

Leave a Reply