ಕುಂದಾಪುರ: ಪ್ರಾತಃ ಸ್ಮರಣೀಯರಾದ ಶ್ರೀ ವಿಶ್ವೋತ್ತಮತೀರ್ಥ ಶ್ರೀಪಾದರಿಂದ ಸ್ಥಾಪಿಸಲ್ಪಟ್ಟ “ಭಾವಿಸಮೀರ ಗುರುಕುಲದ”ದ ವಿದ್ಯಾರ್ಥಿಗಳಿಗೆ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರ ಅನುಗ್ರಹದಿಂದ ನಡೆಯುತ್ತಿರುವ ಶ್ರೀಮದನುವ್ಯಾಖ್ಯಾನ ಸಹಿತ ಶ್ರೀಮನ್ನ್ಯಾಯಸುಧಾ ಹಾಗೂ ಯುಕ್ತಿಮಲ್ಲಿಕಾ ಗ್ರಂಥಗಳ ಮಂಗಲ ಮಹೋತ್ಸವ ಹಾಗೂ ಭಾವಿಸಮೀರ ಶ್ರೀವಾದಿರಾಜ ಗುರುಸಾರ್ವಭೌಮರ ಜಯಂತ್ಯುತ್ಸಕ್ಕೆ ಕುಂಭಾಸಿಯ ಸೋದೆ ವಾದಿರಾಜ ಮಠದ ಆವರಣದಲ್ಲಿ ಶ್ರೀ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಉದ್ಘಾಟಿಸಿ ಅನುಗ್ರಹ ಸಂದೇಶ ನೀಡಿದರು.
ನಂತರ ವಿದ್ಯಾರ್ಥಿಗಳಾದ ಇಂದಿರೇಶ ಆಚಾರ್ಯ ಇಟಗಿ ಹಾಗೂ ಶ್ರೀನಿವಾಸ ಜೋಷಿ ಇವರ ಶಾಸ್ತ್ರಾನುವಾದ ಹಾಗೂ ಪರೀಕ್ಷೆ ನಡೆಯಿತು.
ಇದೇ ವೇಳೆ ಶ್ರೀಮದನುವ್ಯಾಖ್ಯಾನ ಸಹಿತ ಶ್ರೀಮನ್ನ್ಯಾಯಸುಧಾ ಹಾಗೂ ಯುಕ್ತಿಮಲ್ಲಿಕಾ ಗ್ರಂಥಗಳ ಮಂಗಲಮಹೋತ್ಸವದ ಅಂಗವಾಗಿ ವಿದ್ವಾಂಸರಾದ ಹರಿದಾಸ ಭಟ್ ಹಾಗೂ ಶ್ಯಾಮಸುಂದರಾಚಾರ್ಯ ಬಂಡಿ ಇವರಿಂದ ಮಧ್ವಮತದ ಹಿರಿಮೆ-ಗರಿಮೆಯ ಕುರಿತು ಸಂವಾದ, ಗುರುರಾಜರ ಮಾತಿನಲ್ಲಿ ಮಧ್ವರಾಜರು ಎಂಬ ವಿಷಯದಲ್ಲಿ ಮಂತ್ರಾಲಯ ವಾದಿರಾಜಾಚಾರ್ಯರಿಂದ ಹಾಗೂ ದಾಸಸಾಹಿತ್ಯಕ್ಕೆ ಗುರುರಾಜರ ಕೊಡುಗೆ ಎಂಬ ವಿಷಯದಲ್ಲಿ ಮಾನಕರಿ ಶ್ರೀನಿವಾಸಾಚಾರ್ಯರಿಂದ ಉಪನ್ಯಾಸ ನಡೆಯಿತು.
ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಸೋದೆ ವಾದಿರಾಜ ಮಠಾಧೀಶರಾದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಹಾಗೂ ಚಿತ್ರಾಪುರ ಮಠದ ಶ್ರೀವಿದ್ಯೇಂದ್ರ ತೀರ್ಥ ಶ್ರೀಪಾದರು ಉಪಸ್ಥಿತರಿದ್ದು ಅನುಗ್ರಹ ಸಂದೇಶ ನೀಡಿದರು.
ಶ್ರೀಮದನುವ್ಯಾಖ್ಯಾನ ಸಹಿತ ಶ್ರೀಮನ್ನ್ಯಾಯಸುಧಾ ಹಾಗೂ ಯುಕ್ತಿಮಲ್ಲಿಕಾ ಗ್ರಂಥಗಳ ಮಂಗಲಮಹೋತ್ಸವದ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾಜ್ ಕಮಲ್ ಹಾಗೂ ಸಂಗಡಿಗರಿಂದ ವೇಣುವಾದನ ನಡೆಯಿತು.