ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಅಂಬಲಪಾಡಿಯ ಮನೆಯ ಆವರಣದಲ್ಲಿ ಅವರ ತೀರ್ಥರೂಪರೂ ಮಹಾನ್ ವಿದ್ವಾಂಸರೂ ಆಗಿದ್ದ ಪಡುಮನ್ನೂರು ನಾರಾಯಣಾಚಾರ್ಯ ರಿಂದ ಪ್ರತಿಷ್ಠಾಪಿಸಲ್ಪಟ್ಟಿದ್ದ ಶ್ರೀ ಗುರುರಾಘವೇಂದ್ರ ಸ್ವಾಮಿಗಳ ವೃಂದಾವನ ಸನ್ನಿಧಿಯನ್ನು ನವೀಕರಿಸಲಾಗಿದ್ದು, ಅದರ ಸಮರ್ಪಣೆ ಮತ್ತು ಗುರುರಾಯರ ಮೃತ್ತಿಕಾ ವೃಂದಾವನ ಪುನಃ ಪ್ರತಿಷ್ಠಾ ಬ್ರಹ್ಮಕುಂಭಾಭಿಷೇಕವು ಗುರುವಾರ ಶ್ರೀ ಪಲಿಮಾರು ಮಠಾಧೀಶಾದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರಿಂದ ನೆರವೇರಿತು . ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು ಉಪಸ್ಥಿತರಿದ್ದರು .
ಉಡುಪಿಯ ಎರಡನೇ ಅತೀ ಹಳೆಯ ಗುರುರಾಯರ ಮೃತ್ತಿಕಾ ವೃಂದಾವನ ಎನಿಸಿರುವ ಈ ಸನ್ನಿಧಿಯನ್ನು 84 ವರ್ಷಗಳ ಹಿಂದೆ ಗೋವಿಂದಾಚಾರ್ಯರು ಜನಿಸಿದ ವರ್ಷವೇ ಪ್ರತಿಷ್ಠಾಪಿಸಿ ಲಾಗಿತ್ತು . ಇದೀಗ ಆಚಾರ್ಯರು ದಿವಂಗತರಾದ ವರ್ಷವೇ ನವೀಕರಣ ಮತ್ತು ಪುನಃಪ್ರತಿಷ್ಠೆಯು ನಡೆಯುತ್ತಿರುವುದು ಸೋಜಿಗವೆನಿಸಿದೆ .
ಇಲ್ಲಿನ ಶಿಲಾವೃಂದಾವನವು ಬೇರೆಡೆಗಿಂತ ತುಂಬ ಭಿನ್ನವಾಗಿದ್ದು ಸುಂದರವಾದ ಕೆತ್ತನೆಗಳಿಂದ ಕೂಡಿದ್ದು ನಾಲ್ಕು ಮುಖಗಳಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳು ಶ್ರೀ ಸೀತಾರಾಮಚಂದ್ರ ದೇವರು ,ಶ್ರೀ ಗೋಪಾಲಕೃಷ್ಣದೇವರು ಮತ್ತು ಶ್ರೀ ವೇದವ್ಯಾಸದೇವರ ಸುಂದರ ಬಿಂಬಗಳನ್ನು ಹೊಂದಿದೆ
ನೂತನ ಗುಡಿಯ ಸಮರ್ಪಣಾಪೂರ್ವಕ ಪುನಃಪ್ರತಿಷ್ಠಾ ಬ್ರಹ್ಮಕುಂಭಾಭಿಷೇಕವು ಸರಳವಾಗಿ ನಡೆಯಿತು. ವಿದ್ವಾನ್ ಪಾವಂಜೆ ವಾಸುದೇವ ಭಟ್ಟರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಪಲಿಮಾರು ಮಠದ ಉಭಯ ಯತಿಗಳು ಬ್ರಹ್ಮಕುಂಭಾಭಿಷೇಕಗೈದು ಶ್ರೀ ಮಠದ ಪಟ್ಟದ ದೇವರ ಪೂಜೆ ನೆರವೇರಿಸಿ, ಭಿಕ್ಷೆ,ಗುರುಪೂಜೆ ಸ್ವೀಕರಿಸಿ ಅನುಗ್ರಹ ಸಂದೇಶ ನೀಡಿದರು
ಗೋವಿಂದಾಚಾರ್ಯರ ಸುಪುತ್ರ ವಿನಯಭೂಷಣ ಆಚಾರ್ಯ ತಮ್ಮ ತೀರ್ಥರೂಪರ ಸದಿಚ್ಛೆಯಂತೆ ಈ ಕಾರ್ಯವನ್ನು ನೆರವೇರಿಸಲಾಗಿದೆ ಎಂದರು . ರಮಾ ಆಚಾರ್ಯ, ಯಾಸ್ಕ ಆಚಾರ್ಯ, ವಿದ್ವಾಂಸರಾದ ರಾಮನಾಥ ಆಚಾರ್ಯ, ಹೆರ್ಗ ರವೀಂದ್ರ ಭಟ್ , ಕುತ್ಪಾಡಿ ಕೃಷ್ಣರಾಜ ಭಟ್ , ಮುದರಂಗಡಿ ಶ್ರೀಶಭಟ್ , ಉದ್ಯಮಿ ಬಾಲಾಜಿ ರಾಘವೇಂದ್ರ ಆಚಾರ್ಯ , ಸಿವಿಲ್ ಇಂಜಿನಿ ಯರ್ ಗಳಾದ ರಮೇಶ್ ರಾವ್ ಬೀಡು ಶೈಲೇಶ್ , ಕಾಷ್ಠ ಶಿಲ್ಪಿ ಬಳ್ಕೂರು ಗೋಪಾಲಾಚಾರ್ಯ ಮೊದಲಾದವರು ಉಪಸ್ಥಿತರಿದ್ದರು .