ಮೂರೂವರೆ ವರ್ಷಗಳಲ್ಲಿ ಅಯೋಧ್ಯೆ ಶ್ರೀರಾಮ ಮಂದಿರ ಸಾಕಾರ: ಪೇಜಾವರ ಶ್ರೀ

ಮುಂದಿನ ಮೂರೂವರೆ ವರ್ಷಗಳಲ್ಲಿ ಅಯೋಧ್ಯೆಯ ಶ್ರೀರಾಮಚಂದ್ರನ ಭವ್ಯ ಮಂದಿರ ಸಾಕಾರಗೊಳ್ಳುವ ವಿಶ್ವಾಸವಿದೆ ಎಂದು ಉಡುಪಿ ಪೇಜಾವರ ಮಠದ ಯತಿಗಳು ಹಾಗೂ ಅಯೋಧ್ಯೆಯ ವಿಶ್ವಸ್ಥ ಮಂಡಳಿಯ ವಿಶ್ವಸ್ಥರಲ್ಲಿ ಒಬ್ಬರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಮಂಗಳವಾರ ಪ್ರದೀಪಕುಮಾರ್ ಕಲ್ಕೂರ ಅವರ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳಲಿರುವ ಶ್ರೀರಾಮ ಮಂದಿರದ ಮಾಹಿತಿಗಳನ್ನು ಹಂಚಿಕೊಂಡರು. ನ.10 ಮತ್ತು 11ರಂದು ವಿಶ್ವ ಹಿಂದು ಪರಿಷತ್ ಮಾರ್ಗದರ್ಶಕ ಮಂಡಳಿ ಮತ್ತು ರಾಮ ಜನ್ಮ ಭೂಮಿ ಟ್ರಸ್ಟ್ ಸಭೆ ನಡೆದಿದೆ.

ಅಯೋಧ್ಯೆಯ ಪುಣ್ಯ ನೆಲದಲ್ಲಿ ಶ್ರೀರಾಮಚಂದ್ರನ ಭವ್ಯ ಮಂದಿರ ನಿರ್ಮಾಣ ಆಗಬೇಕು ಎಂಬುದು ಭಾರತೀಯರ ಶತಮಾನಗಳ ಕನಸು. ಭಾರತೀಯರ ಬಹು ಅಪೇಕ್ಷೆಯ ಫಲವಾಗಿ ಮತ್ತು ಹಲವರ ಬಲಿದಾನದಿಂದ ಶ್ರೀರಾಮಂದಿರದ ಕನಸು ನನಸಾಗುತ್ತಿದೆ ಎಂದು ಹೇಳಿದರು.

ಇನ್ನು ರಾಮಮಂದಿರದ ಕೆತ್ತನೆಯ ಕಾರ್ಯಗಳು ಸಾಗುತ್ತಿವೆ. ಮಂದಿರದ ಹಿಂದಿನ ವಿಸ್ತೀರ್ಣಕ್ಕೆ ಒಂದು ಅಂತಸ್ತು ಸೇರಿಕೊಂಡಿದೆ. ಮಂದಿರ ನಿರ್ಮಾಣ ಪ್ರದೇಶದ ಧಾರಣಾ ಸಾಮರ್ಥ್ಯವನ್ನು ವಿಶ್ಲೇಸುವ ಕಾರ್ಯವೂ ಪ್ರಗತಿ ಯಲ್ಲಿದೆ. ಅದಕ್ಕಾಗಿ ಸ್ವಲ್ಪ ಕಾಲಾವಕಾಶ ಬೇಕಾದೀತು. ಮಂದಿರದ ನಿರ್ಮಾಣ ಕಾರ್ಯವನ್ನು ಎಲ್ ಆಂಡ್ ಟಿ ಕಂಪೆನಿಗೆ ವಹಿಸಲಾಗಿದ್ದು, ಗುಣಮಟ್ಟವನ್ನು ಖಾತರಿ ಪಡಿಸುವ ಜವಾಬ್ದಾರಿಯನ್ನು ಟಾಟಾ ಕನ್ಸಲ್ಟೆನ್ಸಿಗೆ ನೀಡಲಾಗಿದೆ.

ಸರ್ವ ರಾಮಭಕ್ತರ ಪಾಲ್ಗೊಳ್ಳುವಿಕೆಯಲ್ಲಿ ಅಯೋಧ್ಯೆಯಲ್ಲಿ ಮಂದಿರ ಸಾಕಾರಗೊಳ್ಳಬೇಕು ಎಂಬುದು ಟ್ರಸ್ಟ್‌ನ ಆಸೆಯಾಗಿದ್ದು, ಅದಕ್ಕಾಗಿ ದೇಶದೆಲ್ಲೆಡೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ವಿಶ್ವ ಹಿಂದು ಪರಿಷತ್ ನೇತೃತ್ವದಲ್ಲಿ ರಾಮ ಭಕ್ತರಿಂದ ದೇಣಿಗೆ ಸಂಗ್ರಹ ಕಾರ್ಯ ನಡೆಯಲಿದೆ. ರೂ.10, ರೂ.100ರ ಕೂಪನ್ ಮತ್ತು ರೂ.2,000ದ ರಶೀದಿ ರೂಪದಲ್ಲಿ ದೇಣಿಗೆ ಸಂಗ್ರಹಿಸಲಾಗುವುದು ಎಂದು ಶ್ರೀ ಗಳು ತಿಳಿಸಿದರು.

ಮುಂದಿನ ಮಕರ ಸಂಕ್ರಾಂತಿಯ ದಿನದಿಂದ ನಂತರ 45 ದಿನಗಳ ಕಾಲ ದೇಶಾದ್ಯಂತ ಮಂದಿರಕ್ಕಾಗಿ ಕಾರ್ಯಕರ್ತರು ದೇಣಿಗೆ ಸಂಗ್ರಹಿಸಲಿದ್ದು, ಅದಕ್ಕಾಗಿ ವಿಶ್ವ ಹಿಂದು ಪರಿಷತ್ ಪ್ರಾದೇಶಿಕವಾಗಿ ಸಮಿತಿಗಳನ್ನು ರಚಿಸಲಿದೆ. ರಾಮ ಮಂದಿರ ನಿರ್ಮಾಣದೊಂದಿಗೆ ದೇಶದಲ್ಲಿ ರಾಮರಾಜ್ಯ ನಿರ್ಮಾಣಗೊಂಡು, ಬದುಕೇ ಭಗವಂತನ ಆರಾಧನೆಯಾಗಬೇಕು.

ಎಲ್ಲೆಡೆ ಸುಖ ಶಾಂತಿ ನೆಮ್ಮದಿ ನೆಲೆಗೊಳ್ಳಬೇಕು ಎಂಬುದು ಟ್ರಸ್ಟಿನ ಸದಾಶಯವಾಗಿದೆ ಎಂದು ಶ್ರೀಗಳು ಹೇಳಿದರು. ಹಾಗೆ ಉಡುಪಿಯ ಗುಂಡಿಬೈಲಿನ ಸುಬ್ರಹ್ಮಣ್ಯ ಭಟ್, ಕುಡುಪು ಕೃಷ್ಣರಾಜ ತಂತ್ರಿ, ಕೇರಳದ ಓರ್ವರಲ್ಲದೆ ಉತ್ತರ ಭಾರತ ಇಬ್ಬರು ವಾಸ್ತು ತಜ್ಞರ ತಂಡ ವಾಸ್ತು ವಿನ್ಯಾಸವನ್ನು ನಿರ್ಧರಿಸಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.

ಜೊತೆಗೆ ವಾಸ್ತು ಶಿಲ್ಪಿಗಳು ತಮ್ಮ ಸಲಹೆ ಸೂಚನೆಗಳನ್ನು ನ.20ರೊಳಗೆ ತಿಳಿಸಲು ಕೋರಲಾಗಿದೆ ಎಂದು ಶ್ರೀ ವಿಶ್ವಪ್ರಸನ್ನ ಸ್ವಾಮೀಜಿ ಹೇಳಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮಂದಿರದಲ್ಲಿ ಪ್ರತಿಷ್ಠಾಪಿಸುವ ಶ್ರೀರಾಮನ ಮೂರ್ತಿಗೆ ಬೆಳಗ್ಗಿನ ಸೂರ್ಯ ರಶ್ಮಿ ಬೀಳುವಂತೆ ವಿನ್ಯಾಸಗೊಳಿಸುವುದು ಮತ್ತು ಶ್ರೀರಾಮ ಚಂದ್ರನಿಗೆ ನಮಸ್ಕರಿಸುವ ಸಂದರ್ಭದಲ್ಲಿ ಪಾದ ಸ್ಪರ್ಶಿಸುವ ಅನುಭವ ಕೊಡುವ ತ್ರಿಡಿ ಇಂಪಾಕ್ಟ್ ಅಳವಡಿ ಸುವಂತೆ ಸಲಹೆ ನೀಡಿದ್ದು ಅದನ್ನು ಟ್ರಸ್ಟ್ ಪರಿಗಣಿಸಿದೆ ಎಂದು ಶ್ರೀಗಳು ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪಕುಮಾರ ಕಲ್ಕೂರ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

 
 
 
 
 
 
 
 
 
 
 

Leave a Reply