ಕುಂದಾಪುರ: ಕಳವು ಮಾಡಿ ಅಕ್ರಮ ಜಾನುವಾರು ಸಾಗಾಟದ ಆರೋಪಿ ಅಬೂಬಕ್ಕರ್ ಗುಲ್ವಾಡಿ ಗಡಿಪಾರು

 ಕುಂದಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಕಳವು, ಅಕ್ರಮ ಜಾನುವಾರು ಸಾಗಾಟ ಮತ್ತು ಹಿಂಸೆ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಯನ್ನು ಗಡಿಪಾರು ಮಾಡಿ ಕುಂದಾಪುರ ಉಪವಿಭಾಗಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಕುಂದಾಪುರ ಗ್ರಾಮಾಂತರ ಠಾಣಾ ಸರಹದ್ದಿನ ಗುಲ್ವಾಡಿ ಗ್ರಾಮದ ಕಾಂಡ್ಲಗದ್ದೆ ವಾಸಿ ಅಬ್ದುಲ್ ಬ್ಯಾರಿರವರ ಮಗ 43 ವರ್ಷ ಪ್ರಾಯದ ಅಬೂಬಕ್ಕರ್ ಎಂಬಾತನು ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಹಾಗೆಯೆ ತನ್ನ ಸಹಚರರೊಂದಿಗೆ ತಮ್ಮದೇ ಆದ ಒಂದು ತಂಡವನ್ನು ಕಟ್ಟಿಕೊಂಡು, ಕಳವು, ಅಕ್ರಮ ಜಾನುವಾರು ಸಾಗಾಟ ಮತ್ತು ಹಿಂಸೆ ಪ್ರಕರಣಗಳಲ್ಲಿ ಭಾಗಿಯಾಗಿದ್ದು.

ಈತನ ವಿರುದ್ದ 09 ಪ್ರಕರಣಗಳು ದಾಖಲಾಗಿರುತ್ತವೆ. ಆತನು ನ್ಯಾಯಾಲಯದಿಂದ ಜಾಮೀನು ಪಡೆದು ಕೊಂಡು ಹೊರ ಬಂದ ನಂತರವೂ ಕೂಡ ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಾರ್ವಜನಿಕ ಶಾಂತಿ ಸುವ್ಯವಸ್ಥೆಗೆ ಭಂಗ ತಂದಿರುತ್ತಾನೆ.

ಕುಂದಾಪುರ ಗ್ರಾಮಾಂತರ ಠಾಣಾ ಸರಹದ್ದು ಕೋಮು ಸೂಕ್ಷ್ಮ ಪ್ರದೇಶವಾಗಿದ್ದು ಈ ಬಗ್ಗೆ ಮೇಲಾಧಿಕಾರಿಯವರ ಆದೇಶದಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ಉಪನಿರೀಕ್ಷಕರು ದಂಡಾಧಿಕಾರಿಯವರು ಕುಂದಾಪುರ ಉಪವಿಭಾಗರವರಿಗೆ ಆತನ ವಿರುದ್ದ ಕರ್ನಾಟಕ ಪೊಲೀಸ್ ಕಾಯಿದೆ 1963 ಅಡಿಯಲ್ಲಿ ಗಡಿಪಾರು ಕ್ರಮ ತೆಗೆದುಕೊಳ್ಳುವಂತೆ ವರದಿಯನ್ನು ಪೊಲೀಸ್ ಅಧೀಕ್ಷಕರ ಮುಖಾಂತರ ಸಲ್ಲಿಸಿರುತ್ತಾರೆ.

ಸದ್ರಿ ವರದಿಯನ್ನು ಪರಿಶೀಲಿಸಿ ಉಪವಿಭಾಗದ ದಂಡಾಧಿಕಾರಿಯವರು ಕುಂದಾಪುರ ಉಪವಿಭಾಗರವರು ದಿನಾಂಕ 26/07/2022 ರಂದು ಅಬೂಬಕ್ಕರ್ ಎಂಬಾತನಿಗೆ 6 ತಿಂಗಳ ಕಾಲ ಗಡಿಪಾರು ಶಿಕ್ಷೆ ವಿಧಿಸಿ, ಜಮಖಂಡಿ ಉಪವಿಭಾಗಕ್ಕೆ ಗಡಿಪಾರು ಮಾಡಿ ಆದೇಶ ಹೊರಡಿಸಿರುತ್ತಾರೆ.

ಸದ್ರಿ ಆಸಾಮಿಯು 6 ತಿಂಗಳ ಒಳಗೆ ಸಂಬಂಧಪಟ್ಟ ಪ್ರಾಧಿಕಾರದ ಅನುಮತಿಯನ್ನು ಪಡೆಯದೆ ಕುಂದಾಪುರ ಪೊಲೀಸ್ ಉಪವಿಭಾಗದಲ್ಲಿ ಯಾವುದೇ ಕಾರಣಕ್ಕೂ ಕಂಡು ಬಂದಲ್ಲಿ ಕುಂದಾಪುರ ಗ್ರಾಮಾಂತರ ಠಾಣಾ ಪೊಲೀಸ್ ಉಪನಿರೀಕ್ಷಕರಿಗೆ ಸದ್ರಿಯವರನ್ನು ಕರ್ನಾಟಕ ಪೊಲೀಸ್ ಕಾಯ್ದೆ ಕಲಂ:61 ರಂತೆ ದಸ್ತಗಿರಿ ಮಾಡುವಂತೆ ಆದೇಶವನ್ನು ಹೊರಡಿಸಿರುತ್ತಾರೆ.

 
 
 
 
 
 
 
 
 
 
 

Leave a Reply