ಹೆಬ್ರಿ : ಅಣ್ಣನನ್ನೇ ಕೊಂದ ತಮ್ಮ!

ಮದ್ಯದ ಅಮಲಿನಲ್ಲಿ ಜಗಳವಾಡಿ ತಮ್ಮನೇ ದೊಣ್ಣೆಯಿಂದ ಹೊಡೆದು ಅಣ್ಣನನ್ನು ಕೊಲೆಗೈದ ಘಟನೆ ಹೆಬ್ರಿಯ ನಾಲ್ಕೂರು ಗ್ರಾಮದ ಕಜ್ಕೆ ಅರಮನೆ ಜೆಡ್ಡು ಎಂಬಲ್ಲಿ ನಡೆದಿದೆ. 

ಅರಮನೆಜೆಡ್ಡು ನಿವಾಸಿ ಮಂಜುನಾಥ (35) ಮೃತ ವ್ಯಕ್ತಿಯಾಗಿದ್ದು ಆರೋಪಿ ವಿಶ್ವನಾಥ(30) ನನ್ನು ಪೊಲೀಸರು ಬಂಧಿಸಿದ್ದಾರೆ. ಅಣ್ಣ ತಮ್ಮಂದಿರು ಕೂಲಿ ಕೆಲಸ ಮಾಡಿಕೊಂಡಿದ್ದರು. ಮದುವೆಯಾಗಿದ್ದರೂ ಒಂದೇ ಮನೆಯಲ್ಲಿ ವಾಸವಿದ್ದು, ಕುಡಿದು ಬಂದು ಆಗಾಗ ಗಲಾಟೆ ಮಾಡುತ್ತಿದ್ದರು. ನಿನ್ನೆ ಮಧ್ಯರಾತ್ರಿ ವೇಳೆ ಮದ್ಯ ಸೇವಿಸಿ ಬಂದು ಅಣ್ಣ ತಮ್ಮಂದಿರು ಗಲಾಟೆ ಮಾಡಿಕೊಂಡಿದ್ದಾರೆ. 

ನನ್ನ ಪತ್ನಿ ಮನೆ ಬಿಟ್ಟು ಹೋಗಲು ನೀನೇ ಕಾರಣವೆಂದು ಹೇಳಿ ಅಣ್ಣ ಮಂಜುನಾಥ, ತಮ್ಮನ ಮೇಲೆ ತಗಾದೆ ತೆಗೆದಿದ್ದಾನೆ. ಕೋಪಗೊಂಡ ತಮ್ಮ ವಿಶ್ವನಾಥ ದೊಣ್ಣೆಯಿಂದ ತಲೆಗೆ ಹೊಡೆದಿದ್ದು ತೀವ್ರ ರಕ್ತಸ್ರಾವವಾಗಿ ಮಂಜುನಾಥ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 
 
 
 
 
 
 
 
 
 
 

Leave a Reply