ಉಡುಪಿ : ಚೈಲ್ಡ್ ಲೈನ್-1098, ಉಡುಪಿ ಶ್ರೀಕೃಷ್ಣ ಬಾಲನಿಕೇತನ, ಕುಕ್ಕಿಕಟ್ಟೆ ಉಡುಪಿ ಮತ್ತು ಇಂಟರಾಕ್ಟ್ ಕ್ಲಬ್ ಇವರ ಸಹಯೋಗದೊಂದಿಗೆ ಕುಕ್ಕಿಕಟ್ಟೆಯ ಮುಚ್ಲುಕೋಡು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆವರಣದಲ್ಲಿ 153ನೇ ಗಾಂಧಿ ಜಯಂತಿಯ ಪ್ರಯುಕ್ತ ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ಕತ್ತರಿಸಿ ಮತ್ತು ತರಗೆಲೆ ಇತ್ಯಾದಿ ಕಸವನ್ನು ತೆರವುಗೊಳಿಸುವ ಮೂಲಕ ಸ್ವಚ್ಚಗೊಳಿಸಲಾಯಿತು.
ನಂತರ ಪೇಜಾವರ ಮಠಾಧೀಶರು ಮತ್ತು ಶ್ರೀಕೃಷ್ಣ ಸೇವಾಧಾಮ ಟ್ರಸ್ಟ್ನ ಅಧ್ಯಕ್ಷರಾದ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ಶ್ರಮದಾನದ ಮೂಲಕ ಸ್ವಚ್ಛತೆಯನ್ನು ನಡೆಸಿದ ಸರ್ವರನ್ನು ಉದ್ದೇಶಿಸಿ ಸ್ವಚ್ಛತೆಯ ಮಹತ್ವದ ಕುರಿತು ತಿಳಿಸಿದರು. ಅಲ್ಲದೇ ನಮ್ಮ ಸುತ್ತಮತ್ತಲಿನ ಪ್ರದೇಶವನ್ನು ಸದಾ ಸ್ವಚ್ಛವಾಗಿ ಇಡಬೇಕೆಂಬ ಕರೆಯನ್ನು ನೀಡಿದರು. ಈ ಮೂಲಕ ಪರಿಸರದ ಕುರಿತಾದ ಕಾಳಜಿಯು ನಮ್ಮ ಜೀವನದ ಭಾಗವಾಗಬೇಕೆಂದು ತಿಳಿಸಿ ಆಶೀರ್ವಚನ ನೀಡಿದರು.
ಅ.2ರಂದು ದೈವಾಧೀನರಾದ ದಿ. ರಬೀಂದ್ರ ನಾಯಕ್ ಇವರಿಗೆ ನುಡಿನಮನವನ್ನು ಅರ್ಪಿಸಲಾಯಿತು.
ಈ ಸ್ವಚ್ಚತಾ ಶ್ರಮದಾನದಲ್ಲಿ ಶ್ರೀಕೃಷ್ಣ ಬಾಲನಿಕೇತನದ ಉಪಾಧ್ಯಕ್ಷ ಫ್ರೊ.ಕಮಲಾಕ್ಷ, ಎಸ್ ವಿ ಭಟ್, ಮಟ್ಟಿ ಲಕ್ಷ್ಮೀನಾರಾಯಣ ರಾವ್, ಹೇಮಾರಾವ್, ದೇವಸ್ಥಾನದ ಆಡಳಿತ ಮಂಡಳಿಯ ರಘುರಾಮ ಆಚಾರ್ಯ, ಸುಬ್ರಹ್ಮಣ್ಯ ಭಟ್, ಚೈಲ್ಡ್ ಲೈನ್ ಸದಸ್ಯರು, ರೋಟರಿ ಉಡುಪಿಯ ರೋ. ಬಿ.ವಿ.ಲಕ್ಷ್ಮೀನಾರಾಯಣ, ರೋ.ಚಂದ್ರಶೇಖರ ಅಡಿಗ, ರೋ. ಜನಾರ್ಧನ ಭಟ್, ರೋ.ಸುಬ್ರಹ್ಮಣ್ಯ ಕಾರಂತ, ರೋ.ಗುರುರಾಜ ಭಟ್,ರೋ. ನಾರಾಯಣ ಭಟ್, ಶ್ರೀಕೃಷ್ಣ ಬಾಲನಿಕೇತನದ ಮಕ್ಕಳು ಮತ್ತು ಮಾತಾಜಿಯವರು ಭಾಗವಹಿಸಿದ್ದರು. ಶ್ರೀಕೃಷ್ಣ ಸೇವಾಧಾಮ ಟ್ರಸ್ಟಿನ ಕಾರ್ಯದರ್ಶಿ ರಾಮಚಂದ್ರ ಉಪಾಧ್ಯಾಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.