ದೇಶಭಕ್ತರನ್ನೊಳಗೊಂಡಿರುವ ವಿಶ್ವದ ಅತೀ ದೊಡ್ಡ ಸ್ವಯಂ ಸೇವಕ ಸಂಘಟನೆ ಅರ್.ಎಸ್.ಎಸ್. -ಕುಯಿಲಾಡಿ ಸುರೇಶ್ ನಾಯಕ್

ಅರ್.ಎಸ್.ಎಸ್. ಸರಸಂಘ ಚಾಲಕರಾದ ಮೋಹನ್ ಭಾಗವತ್ ಅವರ ಸ್ಥಾನಕ್ಕೆ ದ್ರೌಪದಿ ಮುರ್ಮು ಅವರಂತಹ ಮಹಿಳೆಯನ್ನು ನೇಮಿಸಲಿ ಎಂದಿರುವ ಮಾಜಿ ಸಿ.ಎಂ. ಸಿದ್ಧರಾಮಯ್ಯ ಮೊದಲು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ನಕಲಿ ಗಾಂಧಿ ಕುಟುಂಬದ ಹೊರತಾದ ಅಭ್ಯರ್ಥಿಯನ್ನು ಸೂಚಿಸುವ ಎದೆಗಾರಿಕೆಯನ್ನು ತೋರುವುದು ಉತ್ತಮ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಲೇವಡಿ ಮಾಡಿದ್ದಾರೆ.

ಇತ್ತೀಚೆಗೆ ಚಡ್ಡಿ ಸುಡುವ ಅಭಿಯಾನ ಪ್ರಾರಂಭಿಸಿ ಚಡ್ಡಿ ಜಾರಿಸಿಕೊಂಡ ಸಿದ್ಧು ತನ್ನ ಒಣ ಪ್ರತಿಷ್ಠೆ ಪ್ರದರ್ಶನಗೈದ ರಾಜ್ಯಸಭಾ ಚುನಾವಣೆಯಲ್ಲಿಯೂ ತೀವ್ರ ಮುಖಭಂಗ ಅನುಭವಿಸಿರುವುದು ಬಟ್ಟಾಬಯಲಾಗಿದೆ.

ದೇಶಭಕ್ತರನ್ನೊಳಗೊಂಡಿರುವ ವಿಶ್ವದ ಅತೀ ದೊಡ್ಡ ಸ್ವಯಂ ಸೇವಕ ಸಂಘಟನೆ ಅರ್.ಎಸ್.ಎಸ್. ತತ್ವ ಸಿದ್ಧಾಂತಗಳ ಬಗ್ಗೆ ಎಳ್ಳಷ್ಟೂ ಅರಿಯದ ಸಿದ್ಧರಾಮಯ್ಯಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಥಮಿಕ ಶಿಕ್ಷಾ ವರ್ಗದ ತೀರಾ ಅವಶ್ಯಕತೆ ಇದೆ ಎಂದು ಅವರು ತಿಳಿಸಿದ್ದಾರೆ.

ಅಧಿಕಾರದ ದುರಾಸೆಯಿಂದ ದಲಿತ ನಾಯಕರಾದ ಪರಮೇಶ್ವರ್ ಸೋಲಿಗೆ ತಂತ್ರ ರೂಪಿಸಿ, ಮಲ್ಲಿಕಾರ್ಜುನ ಖರ್ಗೆಯೂ ಮುಖ್ಯಮಂತ್ರಿಯಾಗದಂತೆ ನೋಡಿಕೊಂಡ ಸಿದ್ಧರಾಮಯ್ಯ ಪ್ರಸಕ್ತ ಡಿ ಕೆ ಶಿವಕುಮಾರ್ ಜೊತೆಗಿನ ಮುಸುಕಿನ ಗುದ್ದಾಟದಲ್ಲಿ ಮೂಲೆಗುಂಪಾಗುವ ಭಯದಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡು ಕೇವಲ ಪ್ರಚಾರದಲ್ಲಿರಲು ಸದಾ ಪ್ರಧಾನಿ ಮೋದಿ ಹಾಗೂ ಆರ್.ಎಸ್.ಎಸ್. ಮಂತ್ರ ಪಠಿಸುತ್ತಿರುವುದು ಹಾಸ್ಯಾಸ್ಪದ.

ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲೂ ಅನಗತ್ಯ ಗುಲ್ಲೆಬ್ಬಿಸಿ ವಿವಾದ ಸೃಷ್ಠಿಸಿರುವ ಸಿದ್ದು ತನ್ನ ಅಧಿಕಾರಾವಧಿಯಲ್ಲಿ ಎಡಪಂತೀಯ ಚಿಂತನೆಗಳಿಗಷ್ಟೆ ಮಹತ್ವ ನೀಡಿರುವ ವಿಚಾರವನ್ನು ಮರೆಮಾಚಲು ವಿಫಲಯತ್ನ ನಡೆಸಿರುವುದು ಗುಟ್ಟಾಗಿ ಉಳಿದಿಲ್ಲ.

ಓರ್ವ ಬುಡಕಟ್ಟು ಜನಾಂಗದ ಸಮರ್ಥ ಮಹಿಳೆ ರಾಷ್ಟ್ರಪತಿಯಾಗುವುದನ್ನು ಸಹಿಸದ ಸಿದ್ಧರಾಮಯ್ಯ ಕೀಳು ಮನಸ್ಥಿತಿ ಅವರ ನಕಲಿ ಜಾತ್ಯಾತೀತತೆಯ ಮುಖವಾಡವನ್ನು ಅನಾವರಣಗೊಳಿಸಿರುವುದು ವಾಸ್ತವ.

ಸರಕಾರದ ಯಾವುದೇ ಪ್ರಗತಿಪರ ಯೋಚನೆ ಯೋಜನೆಗಳನ್ನು ಪೂರ್ವಾಪರ ವಿಮರ್ಷಿಸದೇ ಕೇವಲ ವಿರೋಧಕ್ಕಾಗಿಯೇ ವಿರೋಧಿಸಿ ತನ್ನ ಮೂಗಿನ ನೇರಕ್ಕೆ ಸಮರ್ಥಿಸಿಕೊಳ್ಳುವ ಸಿದ್ಧು ತನ್ನ ಪೊಳ್ಳು ವಾದಕ್ಕೆ ಕವಡೆ ಕಿಮ್ಮತ್ತಿಲ್ಲದಿರುವುದನ್ನು ಅರಿತರೆ ಒಳಿತು. ತಪ್ಪಿದರೆ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿಯಂತೆ ಬಿಜೆಪಿಯ ಸ್ಟಾರ್ ಪ್ರಚಾರಕರಾಗಿ ರಾಜ್ಯದಲ್ಲಿ ಕಾಂಗ್ರೆಸ್ ಅಧ:ಪತನದ ರೂವಾರಿಯಾಗುವುದಂತೂ ನಿಶ್ಚಿತ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply