ಕಾರು-ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ಸಾವು

ಕಾರು-ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಪರಿಣಾಮವಾಗಿ ಒಂದೇ ಕುಟುಂಬದ ಐವರು ಮೃತ ಹೊಂದಿದ ಘಟನೆಯೊಂದು ಕಣ್ಣೂರು ಜಿಲ್ಲೆಯ ಚೆರುಕುನ್ನು ಸಮೀಪದ ಪುನ್ನಚೇರಿ ಎಂಬಲ್ಲಿ ನಡೆದಿದೆ. ಸೋಮವಾರ ರಾತ್ರಿ (ಎ.29) ಈ ದಾರುಣ ಘಟನೆ ನಡೆದಿದೆ.

ಕಾರು ಚಾಲನೆ ಮಾಡುತ್ತಿದ್ದ ಕಾಸರಗೋಡು ಕಾಳೀಚನಡುಕ್ಕಂನ ಸಾಸ್ತಂಪಾರದ ಕೆ.ಎನ್‌.ಪದ್ಮಕುಮಾರ್‌ (59), ಭೀಮಾನಡಿಯ ಚೂರಿಕಟ್ಟೆಯ ಸುಧಾಕರನ್‌ (52) , ಸುಧಾಕರನ್‌ ಅವರ ಪತ್ನಿ ಅಜತಾ (35), ಅವರ ತಂದೆ ಕೊಜುಮ್ಮಲ್‌ ಕೃಷ್ಣನ್‌(65) ಮತ್ತು ಅಜಿತಾ ಅವರ ಸಹೋದರ ಅಜಿತ್‌ ಅವರ ಮಗ ಆಕಾಶ್‌ (9) ಮೃತ ಹೊಂದಿದ್ದಾರೆ.

ಈ ಘಟನೆಯಲ್ಲಿ ನಾಲ್ವರು ಸ್ಥಳದಲ್ಲೇ ಮೃತ ಹೊಂದಿದ್ದು, ಬಾಲಕ ಆಕಾಶ್‌ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆಯೇ ಸಾವಿಗೀಡಾಗಿದ್ದಾನೆ.

ಚೆರುಕುನ್ನು ಬಳಿಯ ಪುನ್ನಚೇರಿಯ ಪೆಟ್ರೋಲ್‌ ಪಂಪ್‌ ಬಳಿ ಈ ಅಪಘಾತ ನಡೆದಿದೆ. ಹಿಂಬದಿಯಿಂದ ಬಂದ ಲಾರಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ನಿಯಂತ್ರಣ ತಪ್ಪಿದ್ದು, ಎದುರುಗಡೆಯಿಂದ ಬರುತ್ತಿದ್ದ ಮತ್ತೊಂದು ಲಾರಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಭೀಕರ ಅಪಘಾತ ಸಂಭವಿಸಿದೆ.

ಮಂಗಳೂರಿನಿಂದ ಗ್ಯಾಸ್‌ ಸಿಲಿಂಡರ್‌ ತುಂಬಿದ ಲಾರಿಯು ಬರುತ್ತಿತ್ತು. ಇತ್ತ ಸುಧಾಕರನ್‌ ಮತ್ತು ಅವರ ಕುಟುಂಬ ಸದಸ್ಯರು ತಮ್ಮ ಮಗ ಸೌರವ್‌ನನ್ನು ಕೋಝಿಕೋಡ್ನಲ್ಲಿರುವ ಶಿಕ್ಷಣ ಸಂಸ್ಥೆಗೆ ಸೇರಿಸಿ, ನಂತರ ಕಾಸರಗೋಡಿಗೆ ಹಿಂತಿರುಗುತ್ತಿದ್ದರು.

ಅಪಘಾತದ ತೀವ್ರತೆ ಎಷ್ಟಿತ್ತೆಂದರೆ ಕಾರಿನೊಳಗೆ ಸಿಲುಕಿದ್ದವರನ್ನು ಕಾರಿನ ಗಾಜು ಒಡೆದು ಹೊರಗೆ ತೆಗೆಯಲು ಯತ್ನಿಸಿ ನಂತರ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಅಪಘಾತ ಮಾಡಿದ ಲಾರಿಗಳ ಇಬ್ಬರು ಚಾಲಕರನ್ನು ಕನ್ನಪುರಂ ಪೊಲೀಸರು ಬಂಧಿಸಿದ್ದಾರೆ.

 
 
 
 
 
 
 
 
 
 
 

Leave a Reply