ಉಡುಪಿ: ಉಡುಪಿ ನಗರದಲ್ಲಿ ಜಿಲ್ಲಾಡಳಿತದ ಆದೇಶ ಮೀರಿಯೂ ವ್ಯಾಪಾರ ನಡೆಸುತ್ತಿದ್ದ ಕೆಲವು ಅಂಗಡಿಗಳಿಗೆ ನಗರಸಭೆ ಅಧಿಕಾರಿಗಳ ತಂಡ ದಾಳಿ ನಡೆಸಿ ದಂಡ ವಿಧಿಸಲಾಗಿದೆ.
ಇಂದು ಬೆಳಗ್ಗೆಯಿಂದ ಸಂಜೆಯವರೆಗೆ ರಥಬೀದಿ, ಮಸೀದಿ ರಸ್ತೆ, ಕೆಎಂ ಮಾರ್ಗ, ಮಣಿಪಾಲದಲ್ಲಿ ವ್ಯಾಪಾರ ನಡೆಸುತ್ತಿದ್ದ ಬಟ್ಟೆ ಸೇರಿದಂತೆ ಇತರ ಸುಮಾರು 30 ಅಂಗಡಿಗಳಿಗೆ, ಮಳಿಗೆಗಳಿಗೆ ದಾಳಿ ನಡೆಸಿದ ಅಧಿಕಾರಿಗಳ ತಂಡ, 80,500 ರೂ. ದಂಡ ವಸೂಲಿ ಮಾಡಿದೆ.
ಈಗಾಗಲೇ ಜಿಲ್ಲಾಡಳಿತ ಅಗತ್ಯ ವಸ್ತುಗಳ ಖರೀದಿ ಹೊರತು ಪಡಿಸಿ ಯಾವುದೇ ಅಂಗಡಿಗಳು ತೆರೆಯದಂತೆ ಆದೇಶ ನೀಡಿತ್ತು, ಆದರೂ ಕೆಲವೊಂದು ಅಂಗಡಿಯವರು ವ್ಯಾಪಾರ ನಡೆಸುತ್ತಿರುವುದು ಕಂಡುಬಂದಿದೆ. ಅದರಂತೆ ದಾಳಿ ನಡೆಸಿ, ಕನಿಷ್ಠ 2000ರೂ.ನಿಂದ ಗರಿಷ್ಠ 10ಸಾವಿರ ರೂ.ವರೆಗೆ ದಂಡ ವಿಧಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತ ಡಾ.ಉದಯ ಶೆಟ್ಟಿ ಮಾಹಿತಿ ನೀಡಿದ್ದಾರೆ.