ಉಡುಪಿ: ಭಾರತೀಯ ಅಂಚೆ ಇಲಾಖೆ ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಮೊದಲಿನಿಂದಲೂ ಆದ್ಯತೆ ನೀಡುತ್ತ ಬಂದಿದೆ.ಈ ದಿನವನ್ನು ಸ್ಮರಣೀಯಗೊಳಿಸುವ ಇರಾದೆಯೊಂದಿಗೆ ವಿಶೇಷ ಅಂಚೆ ಚೀಟಿಗಳನ್ನು ಭಾರತೀಯ ಅಂಚೆ ಇಲಾಖೆ ಬಿಡುಗಡೆಗೊಳಿಸಿದೆ.
ಈ ವರ್ಷ ಅಂತರಾಷ್ಟ್ರೀಯ ಯೋಗ ದಿನವನ್ನು ಸ್ಮರಣೀಯಗೊಳಿಸುವ ಇರಾದೆಯೊಂದಿಗೆ ದೇಶದ ಸುಮಾರು 810 ಪ್ರಧಾನ ಅಂಚೆ ಕಚೇರಿಗಳಲ್ಲಿ ಯೋಗ ದಿನದ ಲಾಂಛನವಿರುವ ಸ್ಪೆಷಲ್ ಸ್ಟಾಂಪ್ ಕ್ಯಾನ್ಸಲೇಷನ್ (ವಿಶೇಷ ಅಂಚೆ ರದ್ದತಿ ಮೊಹರು) ನ ಸೇವೆಯನ್ನು ಗ್ರಾಹಕರಿಗೆ ಒದಗಿಸಿತ್ತು.
ಉಡುಪಿ ಅಂಚೆ ವಿಭಾಗದ ಉಡುಪಿ ಪ್ರಧಾನ ಅಂಚೆ ಕಚೇರಿ, ಮಣಿಪಾಲ ಪ್ರಧಾನ ಅಂಚೆ ಕಚೇರಿ,ಕುಂದಾಪುರ ಪ್ರಧಾನ ಅಂಚೆ ಕಚೇರಿಗಳಲ್ಲಿ ಅಂತರಾಷ್ಟ್ರೀಯ ಯೋಗ ದಿನದಂದು ಸಾವಿರಾರು ಅಂಚೆ ಪತ್ರಗಳಿಗೆ,ಎಲ್ಲ ವಿಧದ ಅಂಚೆ ಪರಿಕರಗಳಿಗೆ ಈ ಅಂಚೆ ಮೊಹರನ್ನು ಮುದ್ರಿಸಿದ್ದು ಇದಕ್ಕೆ ಯಾವುದೇ ಹೆಚ್ಚುವರಿ ಶುಲ್ಕ ಇರಲಿಲ್ಲ.ಸಾರ್ವಜನಿಕರು ಈ ದಿನವನ್ನು ಇನ್ನಷ್ಟು ಸ್ಮರಣೀಯಗೊಳಿಸುವ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಅಂಚೆ ಲಕೋಟೆ, ಕಾರ್ಡ್ ಗಳಲ್ಲಿ ಸ್ಪೆಷಲ್ ಕ್ಯಾನ್ಸಲೇಷನ್ ನ್ನು ಮುದ್ರಿಸಿ ಸಂಭ್ರಮಿಸಿದರು.
ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕ ನವೀನ್ ಚಂದರ್ ರವರ ನೇತ್ರತ್ವದಲ್ಲಿ ಸಹಾಯಕ ಅಂಚೆ ಅಧೀಕ್ಷಕರಾದ ಜಯರಾಮ ಶೆಟ್ಟಿ ಹಾಗು ಕೃಷ್ಣರಾಜ ವಿಠಲ ಭಟ್ ರವರು ಮಾಹೆ ವಿಶ್ವ ವಿದ್ಯಾಲಯ, ಮಣಿಪಾಲದ ಯೋಗ ವಿಭಾಗದ ಮುಖ್ಯಸ್ಥೆ ಡಾ.ಅನ್ನಪೂರ್ಣ ಆಚಾರ್ಯ ಅವರ ನಿವಾಸಕ್ಕೆ ತೆರಳಿ ಅವರಿಗೆ ಯೋಗದ ಲಾಂಛನವಿರುವ ಸ್ಪೆಷಲ್ ಕ್ಯಾನ್ಸಲೇಷನ್ ಮುದ್ರಿತ ಕವರ್ ಹಾಗು ಪೋಸ್ಟ್ ಕಾರ್ಡ್ ನೀಡಿ ಗೌರವಿಸಲಾಯಿತು. ಉಡುಪಿಯ ಹಿರಿಯ ಫಿಲಾಟಲಿಸ್ಟ್ ಕೃಷ್ಣಯ್ಯನರವರ ಮನೆಗೆ ತೆರಳಿ ಯೋಗ ದಿನದ ಸ್ಪೆಷಲ್ ಕ್ಯಾನ್ಸಲೇಷನ್ ಮಾಡಿದ ಕವರ್ ಮತ್ತು ಪೋಸ್ಟ್ ಕಾರ್ಡ್ ನೀಡಿ ಗೌರವಿಸಲಾಯಿತು.