ಮಂಗಳೂರು ನಗರದ ಶಕ್ತಿನಗರ ಬಳಿಯ ಖಾಸಗಿ ನರ್ಸಿಂಗ್ ಸಂಸ್ಥೆಯ ಹಾಸ್ಟೆಲ್ನಲ್ಲಿ ಕಲುಷಿತ ಆಹಾರ ಸೇವನೆಯಿಂದ 137 ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿರುವ ಪ್ರಕರಣದ ಹಿನ್ನಲೆ ಖಾಸಗಿ ಕಾಲೇಜು ಹಾಸ್ಟೆಲ್ನಲ್ಲಿ ವಿದ್ಯಾರ್ಥಿಗಳ ಪೋಷಕರು, ಆಡಳಿತ ಮಂಡಳಿ ಹಾಗೂ ಪೊಲೀಸ್ ಇಲಾಖೆ ನಡುವೆ ಸಭೆ ನಡೆಯಿತು.
ಸಭೆಯಲ್ಲಿ ಹಾಸ್ಟೆಲ್ ಆಹಾರ ಸೇವಿಸಿದ ನಂತರ ಮಕ್ಕಳು ಅಸ್ವಸ್ಥಗೊಂಡು ಆಸ್ಪತ್ರೆಗಳಿಗೆ ದಾಖಲಾಗಿದ್ದಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದರು. ಹಾಸ್ಟೆಲ್ನಲ್ಲಿನ ಆಹಾರ, ನೀರು ಮತ್ತು ಸೌಲಭ್ಯಗಳ ಗುಣಮಟ್ಟ ಸಮಸ್ಯೆ ಬಗ್ಗೆ ಪೋಷಕರು ಪ್ರಸ್ತಾಪಿಸಿದ್ದು, ಫೆ. 5 ರಂದು ಹಲವು ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದರೂ ಸರಿಯಾದ ಸಮಯಕ್ಕೆ ಪೋಷಕರಿಗೆ ಮಾಹಿತಿ ಆಡಳಿತ ಮಂಡಳಿ ವಿಫಲವಾಗಿದೆ ಎಂದು ಆರೋಪಿಸಿದರು.
ಈ ಕುರಿತು ಮಾತನಾಡಿದ ಪ್ರಾಂಶುಪಾಲರಾದ ಶಾಂತಿ ಲೋಬೋ , “ಫೆಬ್ರವರಿ 6 ರಂದು ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿದ್ದರು, ಆದರೆ ಕೆಲವು ವಿದ್ಯಾರ್ಥಿಗಳು ಮಾತ್ರ ವಾಂತಿ ಮತ್ತು ಸುಸ್ತುವಿನಿಂದ ಬಳಲುತ್ತಿದ್ದು 20 ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದ್ದು, ಸಂಜೆಯೇ 20 ವಿದ್ಯಾರ್ಥಿಗಳನ್ನು ಡಿಸ್ಚಾರ್ಜ್ ಮಾಡಲಾಗಿತ್ತು”.
ಆದರೆ ಇದಾದ ಬಳಿಕ ರಾತ್ರಿ ಮತ್ತೆ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪರಿಸ್ಥಿತಿ ಸರಿಪಡಿಸುವವರೆಗೆ ಕಾಲೇಜು ತಾತ್ಕಾಲಿಕವಾಗಿ ಮುಚ್ಚಲಾಗುವುದು. ಪಾಲಕರು ಎತ್ತಿರುವ ಎಲ್ಲಾ ಸಮಸ್ಯೆ ಗಂಭೀರವಾಗಿ ಪರಿಗಣಿಸಿ ಇವೆಲ್ಲವನ್ನು ಸರಿಪಡಿಸುವವರೆಗೆ ಕಾಲೇಜು ತೆರೆಯುವುದಿಲ್ಲ. ಹೆಚ್ಚಿನ ವಿದ್ಯಾರ್ಥಿಗಳು ಚೇತರಿಸಿಕೊಂಡ ನಂತರ ಡಿಸ್ಚಾರ್ಜ್ ಆಗಿದ್ದಾರೆ. 20 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮಾತ್ರ ಇನ್ನು ಆಸ್ಪತ್ರೆಯಲ್ಲಿದ್ದು ಅವರ ಆರೋಗ್ಯ ಸ್ಥಿರವಾಗಿದೆ ವಿದ್ಯಾರ್ಥಿಗಳ ಆಸ್ಪತ್ರೆ ವೆಚ್ಚವನ್ನು ಭರಿಸುವುದಾಗಿ ಆಡಳಿತ ಮಂಡಳಿ ತಿಳಿಸಿದೆ ಎಂದು ಹೇಳಿದ್ದಾರೆ.
ವೈದ್ಯಕೀಯ ತಂಡ, ವೈದ್ಯರು ಹಾಸ್ಟೆಲ್ಗೆ ಭೇಟಿ ನೀಡಿ ಆಹಾರ, ನೀರಿನ ಮಾದರಿಗಳನ್ನು ತೆಗೆದುಕೊಂಡು ವರದಿಗಾಗಿ ಎಫ್ಎಸ್ಎಲ್ಗೆ ಕಳುಹಿಸಿದ್ದಾರೆ. ಪರಿಸ್ಥಿತಿಯ ಬಗ್ಗೆ ನಿಕಟವಾಗಿ ಮೇಲ್ವೀಚಾರಣೆ ನಡೆಸಲು ವೈದ್ಯಕೀಯ ತಂಡಕ್ಕೆ ಜಿಲ್ಲಾಡಳಿತ ಸೂಚನೆ ನೀಡಿದೆ.