ಗಂಗೊಳ್ಳಿ: ಮದುವೆಗೆ ಧರಿಸಲು ಕೊಟ್ಟ ಚಿನ್ನಾಭರಣ ಹಿಂದಕ್ಕೆ ನೀಡದೆ ವಂಚನೆ

ವಿವಾಹ ಕಾರ್ಯಕ್ರಮಕ್ಕೆಂದು 4.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಪಡೆದು ಹಿಂತಿರುಗಿಸದೇ ಇರುವುದು ಮಾತ್ರವಲ್ಲದೆ ಅವುಗಳನ್ನು ಅಡವಿಟ್ಟು ಬಿಡಿಸಲು ನಾಲ್ಕು ಲಕ್ಷ ಮತ್ತೆ ಪಡೆದು ನಗ -ನಗದು ವಾಪಸ್ಸು ನೀಡದೆ ವಂಚಿಸಿರುವ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಗಿದೆ.

ಬೈಂದೂರಿನ ಮರವಂತೆ ಗ್ರಾಮದ ಮನ್ಸೂರ್ ಇಬ್ರಾಹಿಮ್ ಅವರ ಮನೆಗೆ ಕಳೆದ ಎರಡು ವರ್ಷಗಳ ಹಿಂದೆ ಆಪಾದಿತ ಅಬ್ಬಾಸ್ ಬಡಾಕೆರೆ ಎಂಬವನು ತನ್ನ ಸ್ನೇಹಿತರಾದ ನಾವುಂದದ ಸುಲೈಮಾನ್, ಗುಲ್ವಾಡಿಯ ಉಬೈದುಲ್ಲಾ ಎಂಬವರೊಂದಿಗೆ ಮನೆಗೆ ಬಂದಿದ್ದನು. ಇವರು ವಿವಾಹ ಕಾರ್ಯಕ್ರಮಕ್ಕೆ ಹೋಗಲು ಮನ್ಸೂರ್ ಇಬ್ರಾಹಿಮ್ ರವರ ಹೆಂಡತಿಯ ಮಕ್ಕಳ ಚಿನ್ನಾಭರಣ ಕೇಳಿ, ಒಂದು ದಿನದ ಕಾರ್ಯಕ್ರಮವನ್ನು ಮುಗಿಸಿ ನೀಡುವುದಾಗಿ ನಂಬಿಸಿದ್ದರು. ಅವರ ಮಾತನ್ನು ನಂಬಿದ ಮನ್ಸೂರ್ ಇಬ್ರಾಹಿಮ್ ರವರು ತಮ್ಮ ಹೆಂಡತಿಯ 4.50 ಲಕ್ಷ ರೂ. ಮೌಲ್ಯದ 12 ಪವನ್ ಚಿನ್ನಾಭರಣಗಳನ್ನು ನೀಡಿದ್ದರು.

ಆದರೆ ಆರೋಪಿಗಳು ನಿಗಧಿತ ಸಮಯದಲ್ಲಿ ಚಿನ್ನದ ಒಡವೆಗಳನ್ನು ಹಿಂತಿರುಗಿಸದೇ ಇದ್ದು ಈ ಬಗ್ಗೆ ವಿಚಾರಿಸಿದಾಗ ಚಿನ್ನಾಭರಣಗಳನ್ನು ವಿವಿಧ ಹಣಕಾಸು ಸಂಸ್ಥೆಯಲ್ಲಿ ಅಡವಿಟ್ಟಿರುವುದಾಗಿಯೂ ಒಂದು ತಿಂಗಳಿನಲ್ಲಿ ಬಿಡಿಸಿಕೊಡುವುದಾಗಿ ನಂಬಿಸಿದ್ದರು. ಆದರೆ ಆ ಬಳಿಕವೂ ಹಿಂತಿರುಗಿಸದೇ ಚಿನ್ನಾಭರಣ ಬಿಡಿಸಲು ನಾಲ್ಕು ಲಕ್ಷ ರೂಪಾಯಿ ಹಣದ ಬೇಡಿಕೆ ಇಟ್ಟು ಚಿನ್ನಾಭರಣವನ್ನು ಬಿಡಿಸಿ ಆರು ತಿಂಗಳಲ್ಲಿ ಒಟ್ಟಿಗೆ ನೀಡುವುದಾಗಿ ನಂಬಿಸಿ ನಾಲ್ಕು ಲಕ್ಷ ಹಣವನ್ನೂ ಪಡೆದುಕೊಂಡಿದ್ದರು. ಆದರೆ ಆ ಬಳಿಕ ಆರೋಪಿಗಳು ಹಣವನ್ನು ನೀಡದೆ, ಚಿನ್ನವನ್ನು ಹಿಂತಿರುಗಿಸದೇ ವಂಚಿಸಿದ್ದಾರೆ ಎಂಬುದಾಗಿ ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 
 
 
 
 
 
 
 
 
 
 

Leave a Reply