ಉಡುಪಿ. ನಮ್ಮ ಸನಾತನ ಪರಂಪರೆಯ ಮಹಾತ್ಮರ ಬದುಕಿನಲ್ಲಿ ಸಂಭವಿಸಿದ ಕೆಲ ಘಟನೆಗಳನ್ನು ಊಹಿ ಸಲೂ ಸಾದ್ಯವಿಲ್ಲ. ಕಲ್ಪನೆಗೂ ಮೀರಿದ್ದು. ಅಂದು ಕಣ್ಣೆದುರಲ್ಲೇ ನಡೆದ ಆ ಪವಾಡವನ್ನು ಇಲ್ಲಿ ತೆರೆದಿಡು ತ್ತಿದ್ದೇನೆ.. 1990ನೇ ಇಸವಿ ರಾಮನವಮಿ ಉತ್ಸವದ ಸಂದರ್ಭ..
ಆ ಕ್ಷಣವನ್ನು ನೆನೆದರೆ ಈಗಲೂ ಮೈ ಜುಂ ಎನ್ನುತ್ತದೆ.. ಹಿರಿಯಡಕ ಸಮೀಪದ ಶಿರೂರು ಮೂಲ ಮಠದಲ್ಲಿ ವರ್ಷಂಪ್ರತಿ ಜರಗುವ ಶ್ರೀರಾಮನವಮಿ ಪೂಜೆ ಮತ್ತು ರಥೋತ್ಸವ ಯಾವಾಗಲೂ ಶ್ರೀಸೋದೆವಾದಿರಾಜ ಮಠದ ಶ್ರೀವಿಶ್ವೋತ್ತಮತೀರ್ಥರ ಹಾಗೂ ಶ್ರೀಶಿರೂರುಮಠದ ಶ್ರೀ ಲಕ್ಷ್ಮೀವರತೀರ್ಥರ ದಿವ್ಯ ಉಪಸ್ಥಿತಿಯಲ್ಲಿ ಬಹು ವೈಭವದಿಂದ ಜರಗುತ್ತಿತ್ತು.
ಶ್ರೀರಾಮನವಮಿ ಉತ್ಸವದಂದು ರಾತ್ರಿ ಎರಡೂ ಮಠದ ಪಟ್ಟದದೇವರಿಗೆ ಹಾಗೂ ಶಿರೂರಿನ ಶ್ರೀಪಟ್ಟಾಭಿರಾಮ ದೇವರಿಗೆ, ಶ್ರೀಮುಖ್ಯಪ್ರಾಣ ವರಿಗೆ , ಶ್ರೀವಾದಿರಾಜರಿಗೆ, ಭೂತರಾಜರಿಗೆ ರಂಗಪೂಜೆ ಸಹಿತ ವಿಶೇಷ ಪೂಜೆ ಜರಗುತ್ತದೆ. ನಂತರ ರಾತ್ರಿಯ ರಥೋತ್ಸವಕ್ಕೆ ಮುಖ್ಯಪ್ರಾಣದೇವರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಇರಿಸಿ ರಥದ ಬಳಿ ಕೊಂಡೊಯ್ಯಲಾಗುತ್ತದೆ. ಶಿರೂರಿನಲ್ಲಿ ರಥೋತ್ಸವವನ್ನು ಮಠದ ಮುಂಭಾಗದಲ್ಲಿರುವ ಒಣಗದ್ದೆಯಲ್ಲಿ ನಡೆಸಲಾಗುವುದು.
ಗದ್ದೆಯ ಆರಂಭದಿಂದ ಗದ್ದೆಯ ಕೊನೆಯವರೆಗೆ ಸುಮಾರು ಇನ್ನೂರು ಮೀಟರ್ ದೂರ ರಥವನ್ನು ಎಳೆದು ಕೊಂಡು ಹೋಗಿ ಮತ್ತೆ ಪುನಃ ಅಲ್ಲಿಂದ ತಿರುಗಿಸಿ ಯಥಾ ಸ್ಥಾನಕ್ಕೆ ತರುವುದು ಶಿರೂರಿನ ರಥೋತ್ಸವದ ಪದ್ಧತಿ. ಆ ದಿನಗಳಲ್ಲಿ ದೊಂದಿದೀಪ, ಇಲಾಲಿಯ ದೀಪ ಹಾಗೂ ಗ್ಯಾಸ್ ಲೈಟ್ ಗಳು ಉತ್ಸವದ ಬೀದಿಗೆ ಬೆಳಕು ನೀಡುತ್ತಿದ್ದವು. ರಥ ಸಾಗುವ ದಾರಿಯಲ್ಲಿ ವಿದ್ಯುಶ್ಶಕ್ತಿಯ ದಾರಿ ದೀಪಗಳು ಇರಲ್ಲಿಲ್ಲ.
ರಥ ಸಾಗುವ ಗದ್ದೆಯ ಮಣ್ಣಿನ ನೆಲವನ್ನು ಪೂರ್ಣ ಪ್ರಮಾಣದಲ್ಲಿ ಸಮತಟ್ಟು ಮಾಡಲು ಅಲ್ಲಿನ ಕಾರ್ಮಿಕರು ಹಗಲಿರುಳು ಶ್ರಮಿಸುತ್ತಿದ್ದರು. ಆದರೂ ಅಲ್ಲಲ್ಲಿ ಪೈರಿನ ಗುತ್ತಿಗಳು ಸಣ್ಣಪುಟ್ಟ ಹೊಂಡಗಳು ಹಾಗೆಯೇ ಉಳಿದು ಬಿಡುತ್ತಿದ್ದವು. ಹೀಗಾಗಿ ಕೆಲವೊಮ್ಮೆ ರಥ ಸಾಗುವಾಗ ಅದರ ವೇಗವು ಹೆಚ್ಚು ಕಡಿಮೆಯಾಗುತ್ತಿತ್ತು. ಒಮ್ಮೊಮ್ಮೆ ರಥವು ಎಡವಿದಂತೆ ಬಾಸವಾಗುತ್ತಿತ್ತು.
ರಥದ ಹಗ್ಗ ಹಿಡಿದು ಗೋವಿಂದಾ ಎನ್ನುತ್ತಿರುವ ಮಂದಿಗೆ ಪೈರಿನ ಗುತ್ತಿಗಳು, ಮುರುಟಿದ ಒಣ ಮುಳ್ಳುಗಳು, ಕಲ್ಲುಗಳು ಕಾಲಿಗೆ ಚುಚ್ಚುತ್ತಿರುತ್ತವೆ. ಇದೆಲ್ಲಾ ಹಳ್ಳಿಯ ರಥೋತ್ಸವದಲ್ಲಿ ಮಾಮೂಲು. ಶಿರೂರಿನ ರಥೋತ್ಸವ ಕೂಡಾ ಇದಕ್ಕೇನು ಹೊರತಾಗಿರಲಿಲ್ಲ. ಅಂದು ರಾತ್ರಿ ರಥೋತ್ಸವಕ್ಕೆ ಪೂರ್ವದಲ್ಲಿ ಶ್ರೀವಿಶ್ವೋತ್ತಮತೀರ್ಥರು ಶಿರೂರು ಶ್ರೀಪಾದರನ್ನು ಬಳಿಗೆ ಕರೆದು”ಇನಿ ರಥೋತ್ಸವ ಆನಗ ಅಮಸರ ಅಂಪುಣ ಬೋತ್ರಿ ಮೆಲ್ಲಪೋಯಿ.
ಜಾದೋನಾ ಸ್ವಲ್ಪ ತೊಂದ್ರೆದೋ ಸೂಚನೆ ಉಂಡು ”ಅಂತ ತುಳು ಭಾಷೆಯಲ್ಲಿ ಹೇಳಿದರು.(ಇಂದು ರಥೋತ್ಸ ವ ನಡೆಸುವಾಗ ಅವಸರ ಬೇಡ.ಏನೋ ತೊಂದರೆ ಆಗುವ ಅಶುಭ ಸೂಚನೆ, ಕಾಣ್ತಾ ಇದೆ ಎಂದು ಪಿಸುಗುಟ್ಟಿ ದರು.) ಗುರುಗಳ ಮಾತು ಕೇಳಿ ಶಿರೂರು ಶ್ರೀಪಾದರು ಬೆಚ್ಚಿಬಿದ್ದರು. ಒಂದಿಬ್ಬರು ಆತ್ಮೀಯರನ್ನು ಕರೆದು ಸೋದೆ ಶ್ರೀಯವರು ಹೇಳಿದ ವಿಷಯ ತಿಳಿಸಿ ಎಚ್ಚರಿಕೆಯಿಂದ ಇರುವಂತೆ ತಿಳಿಸಿದರು.
ಶ್ರೀಮುಖ್ಯಪ್ರಾಣದೇವರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಉತ್ಸವ ಬೀದಿಗೆ ತಂದು ರಥದಲ್ಲಿ ಕುಳ್ಳಿರಿಸಿದ ನಂತರಶ್ರೀಶಿರೂರು ಶ್ರೀಪಾದರು ಮಂಗಳಾರತಿ ಸಲ್ಲಿಸಿದರು. ಪೂಜ್ಯ ಶ್ರೀವಿಶ್ವೋತ್ತಮತೀರ್ಥರೂ ಕೂಡಾ ಆರತಿ ಬೆಳಗಿದರು. ಗದ್ದೆಯಲ್ಲಿ ಶಿರೂರಿನ ಧೀರ ಮುಖ್ಯಪ್ರಾಣದೇವರ ರಥೋತ್ಸವ ಆರಂಭವಾಯಿತು.
ಹಳ್ಳಿಯ ಸಾಂಪ್ರದಾಯಿಕ ವಾದ್ಯ, ಡೋಲು, ಕೊಳಲುಗಂಟೆ ತಾಳ ಶಂಖನಾದವು ರಥೋತ್ಸವಕ್ಕೆ ಇನ್ನಷ್ಟು ಸಂಭ್ರಮ ನೀಡುತ್ತಿದ್ದವು. ಶ್ರೀವಿಶ್ವೋತ್ತಮ ಶ್ರೀಪಾದರು ರಥ ಸಾಗುತ್ತಿರುವಾಗ ಮಾತು ಮಾತಿಗೆ ಜಾಗೃತೆ, ”ಮೆಲ್ಲ ಪೋಯಿ, ಅಮಸರ ಬೋತ್ರಿ” (ಮೆಲ್ಲನೆ ರಥ ಸಾಗಲಿ, ಅವಸರ ಮಾಡದಿರಿ) ಎಂದು ಸಾರಿ ಸಾರಿ ತುಳು ಭಾಷೆಯಲ್ಲಿ ಹೇಳುತ್ತಿದ್ದರು.
ಹೆಚ್ಚಾಗಿ ರಥೋತ್ಸವದ ಸಂದರ್ಭದಲ್ಲಿ ಸದಾ ಹರಿ ಸ್ಮರಣೆಯಲ್ಲೇ ನಿರತರಾಗಿರುತ್ತಿದ್ದ ಸೋದೆ ಶ್ರೀಪಾದರು ಅಂದು ರಥ ಸಾಗುತ್ತಿರುವಾಗ ಪ್ರತಿಯೊಬ್ಬರನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ರಥದ ಅಕ್ಕಪಕ್ಕ ಆಗ್ಗಾಗೆ ಇಣುಕಿ ನೋಡುತ್ತಿದ್ದರು. ಸುಮಾರು ನೂರುಮಂದಿ ಭಕ್ತರು ರಥದ ಹಗ್ಗವನ್ನು ಹಿಡಿದು ಗೋವಿಂದಾ, ಜೈ ಶ್ರೀರಾಮ, ಜೈಮುಖ್ಯಪ್ರಾಣ ಎಂದು ಭಕ್ತಿಪರವಶರಾಗಿ ಹರಿನಾಮ ಸ್ಮರಣೆಯಲ್ಲಿ ಮುಳುಗಿದ್ದರು.
ಆದರೆ ಶ್ರೀ ವಿಶ್ವೋತ್ತಮರಿಗೆ ಆತಂಕದ ಪೂರ್ವಸೂಚನೆ ದೊರಕಿತ್ತು. ಹಾಗಾಗಿ ಚಡಪಡಿಸುತ್ತಿದ್ದರು. ರಥವು ಸ್ವಲ್ಪ ವೇಗ ಪಡೆದುಕೊಂಡಿತು. ಇನ್ನೊಂದು ಕೊನೆಯನ್ನು ತಲುಪಲು ಐವತ್ತು ಅಡಿ ಬಾಕಿ ಇತ್ತು. ತಕ್ಷಣ ರಥದ ಹಗ್ಗತೊರೆದು ಬದಿಗೆ ಸರಿದ ಶ್ರೀವಿಶ್ವೋತ್ತಮತೀರ್ಥರು “ರಥವನ್ನು ನಿಲ್ಲಿಸಿ ನಿಲ್ಲಿಸಿ”ಎಂದು ಗಟ್ಟಿಯಾಗಿ ಹೇಳಲು ಆರಂಭಿಸಿದರು. ರಥದ ಹಗ್ಗ ಹಿಡಿದಿದ್ದ ಭಕ್ತರೆಲ್ಲರಿಗೂ ಶ್ರೀಪಾದರ ಆತಂಕ ಕಂಡು ಆಶ್ಚರ್ಯವಾಯಿತು.
ಶ್ರೀಪಾದರು ಪದೇಪದೇ ಹೇಳುವುದನ್ನು ಕಂಡು ಹೆದರಿದ ಮಂದಿ ಹಗ್ಗವನ್ನು ತೊರೆದು ರಥದಿಂದ ದೂರ ಸರಿದರು. ಆದರೆ ರಥ ವೇಗದಿಂದ ಸಾಗುತ್ತಲೇ ಇತ್ತು. ಕೆನಲಿ ಕೆಂಪಾಗಿದ್ದ ಶ್ರೀಪಾದರು ಎರಡೂ ಕೈಯನ್ನು ಮೇಲಕ್ಕೆತ್ತಿ ಏನನ್ನೋ ತೋರಿಸುತ್ತಿದ್ದರು. ರಾತ್ರಿಯ ಕತ್ತಲೆಗೆ ಶ್ರೀಪಾದರು ಏನನ್ನು ತೋರಿಸುತ್ತಿದ್ದಾರೆ ಎಂದು ಯಾರಿಗೂ ಅರಿವಾಗಲೇ ಇಲ್ಲ.
ರಥದ ಹಿಂಬದಿಯಿಂದ ರಥವನ್ನು ನಿಯಂತ್ರಿಸುತ್ತಿದ್ದ ಮಠದ ಸಿಬ್ಬಂದಿಗಳು ತಕ್ಷಣ ರಥ ನಿಲ್ಲಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದರು. ಸಾದ್ಯವಾಗಲಿಲ್ಲ. ಆ ನಿಮಿಷದಲ್ಲೇ ರಥದ ಬಳಿ ಓಡಿ ಬಂದ ಶ್ರೀಶಿರೂರು ಶ್ರೀಪಾದರು ರಥದ ಚಕ್ರಕ್ಕೆ ಅಡ್ಡ ಇರಿಸುವ ದೊಡ್ಡ ಬಡಿಗೆಯನ್ನು ತಾವೇ ಎಳೆದುಕೊಂಡು ತಂದು ಚಕ್ರದ ಅಡ್ಡಕ್ಕೆ ಇರಿಸಿದರು. ರಥವು ಒಂದು ಹತ್ತು ಅಡಿ ಸಾಗಿ ಕಿರ್ರ್ ಎನ್ನುತ್ತಾ ನಿಂತಿತು.
ಒಂದೆರಡು ನಿಮಿಷ ಉತ್ಸವದ ಗದ್ದಲ ಸಂಪೂರ್ಣ ಮರೆಯಾಗಿ ಸೂಜಿ ಬಿದ್ದರೂ ಸದ್ದು ಕೇಳುವಂತಹ ಮೌನ ಅಲ್ಲಿ ನೆಲೆಸಿತ್ತು. ಎಲ್ಲರೂ ಸೋದೆ ಶ್ರೀಪಾದರನ್ನೇ ಕಣ್ಣಲಿ ಕಣ್ಣಿಟ್ಟು ನೋಡುತ್ತಿದ್ದರು. ಸೋದೆ ಶ್ರೀಪಾದರು ದೀಪದ ಬೆಳಕನ್ನು ಎತ್ತರಕ್ಕೆ ಹಿಡಿಯುವಂತೆ ಹೇಳಿದರು. ದೀಪದ ಬೆಳಕು ಎತ್ತರಕ್ಕೆ ಏರುತ್ತಿದ್ದಂತೆ ಸಂಭವನೀಯ ಆಪತ್ತಿನ ಸಂಗತಿ ಕಣ್ಣೆದುರಲ್ಲೇ ಇರುವುದನ್ನು ಕಂಡು ಎಲ್ಲರೂ ಒಂದುಕ್ಷಣ ದಿಗ್ಭ್ರಾಂತರಾದರು.
ಅದೇನಾಗಿತ್ತೆಂದರೆ ಹಿರಿಯಡಕ ವಿದ್ಯುತ್ ಕೇಂದ್ರದಿಂದ ಸರಬರಾಜಾಗುತ್ತಿದ್ದ ಹೈ ವೋಲ್ಟೇಜಿನ ಎರಡು (ಸರ್ವೀಸ್ ವಯರ್) ದಪ್ಪಗಿನ ದೊಡ್ಡ ತಂತಿಗಳು ರಥ ಸಾಗುತ್ತಿದ್ದ ಒಣಗದ್ದೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ಹಾದು ಹೋಗಿದ್ದವು. ಭೂಮಿಯಿಂದ ಸುಮಾರು 18 ಅಡಿ ಎತ್ತರದಲ್ಲಿದ್ದ ಈ ತಂತಿಗಳು 30 ಅಡಿ ಎತ್ತರದ ರಥವನ್ನು ಸಂಪರ್ಕಿಸಲು ಕೇವಲ ಒಂದು ಅಡಿ ಮಾತ್ರ ಬಾಕಿ ಇತ್ತು.
ಕತ್ತಲೆಯಲ್ಲಿ ಅಷ್ಟೊಂದು ಎತ್ತರದಲ್ಲಿದ್ದ ಅಪಾಯಕಾರಿ ತಂತಿಗಳು ಇತರೇ ಯಾರ ದೃಷ್ಟಿಗೂ ಗೋಚರವಾಗಲಿಲ್ಲ. ಸ್ಥಳೀಯರಿಗೂ ಕಾಣಲ್ಲಿಲ್ಲ. ಆದರೆ ಶ್ರೀವಿಶ್ವೋತ್ತಮರ ದಿವ್ಯದೃಷ್ಟಿಗೆ ಹೈ ವೋಲ್ಟಿನ ಜ್ವಾಲಾಸುರ ಕಂಡಿದ್ದ. ಆ ಜ್ವಾಲಾಸುರನ ಒಂದು ಎಳೆ ತಾಗಿದರೂ ಸಾಕು. ಉತ್ಸವಕ್ಕೆ ಬಂದಿದ್ದ ಅಷ್ಟೂ ಮಂದಿಯನ್ನು ಏಕಕಾಲದಲ್ಲಿ ಆಪೋಶನ ತೆಗೆದುಕೊಳ್ಳುವಷ್ಟು ಸಾಮರ್ಥ್ಯ ಅದಕ್ಕಿತ್ತು.
ಆತಂತಿಗಳಲ್ಲಿ ಗರಿಷ್ಠ ಮಟ್ಟದ ವಿದ್ಯುತ್ತಿನ ಪ್ರವಾಹವೇ ಹರಿಯುತ್ತಿತ್ತು. ಊಹಿಸಲೂ ಸಾದ್ಯವಾಗದಂತಹ ಮಹಾ ದುರಂತವೊಂದು ಶ್ರೀಮುಖ್ಯಪ್ರಾಣದೇವರ ಪ್ರೇರಣೆಯಿಂದಾಗಿ ಪೂಜ್ಯ ಗುರುಗಳಾದ ಶ್ರೀವಿಶ್ವೋತ್ತಮತೀರ್ಥರ ಕೃಪೆಯಿಂದ ದೂರ ಸರಿಯಿತು. ರಥದ ಮುಂಭಾಗದ ಒಂದಡಿ ದೂರದಲ್ಲಿದ್ದ ಹೈ ಟೆನ್ಷನ್ ಸರ್ವೀಸ್ ವಯರು ಗಳನ್ನು ಕಂಡಾಗ ಎಲ್ಲರ ದಿಗಿಲು ಹಾರಿ ಹೋಗಿತ್ತು. ರಥವನ್ನು ಬಹಳ ನಾಜೂಕಿನಿಂದ ಪಕ್ಕಕ್ಕೆ ಎಳೆದು ತಂದು ಪಚ್ಚೆಡ ಸೇವೆ ನಡೆಸಲಾಯಿತು.
ನಂತರ ರಥೋತ್ಸವ ಮುಂದುವರಿದು ರಥವು ಮತ್ತೆ ಯಥಾಸ್ಥಾನಕ್ಕೆ ಮರಳಿತು. ಅಂದು ರಾತ್ರಿ ಉತ್ಸವದ ಕೊನೆಯಲ್ಲಿ ಗುರುಗಳಾದ ಪರಮಪೂಜ್ಯ ಶ್ರೀವಿಶ್ವೋತ್ತಮತೀರ್ಥ ಶ್ರೀಪಾದರಿಗೆ ಮಾಲಿಕಾ ಮಂಗಳಾರತಿ ಸಹಿತ ಫಲಪುಷ್ಪ ಕಾಣಿಕೆಗಳನ್ನು ಅರ್ಪಿಸಲಾಯಿತು. ಶಿರಸಾಷ್ಟಾಂಗ ದಂಡ ಪ್ರಣಾಮಗಳನ್ನು ಸಲ್ಲಿಸಿದ ಶ್ರೀಶಿರೂರು ಶ್ರೀಪಾದರು ಪೂಜ್ಯಗುರುಗಳ ಅಸದೃಶ ಮಹಿಮೆ ಕಂಡು ಆನಂದಭಾಷ್ಪ ಸುರಿಸಿದರು. ಗದ್ಗದಿತರಾಗಿದ್ದ ಶಿರೂರು ಶ್ರೀಯವರಿಗೆ ಗಂಟಲು ಕಟ್ಟಿದಂತಾಗಿ ಮಾತೇ ಹೊರಡಲಿಲ್ಲ.
ಶ್ರೀಶಿರೂರುಶ್ರೀಪಾದರ ಪ್ರೀತಿ ಅಭಿಮಾನಕ್ಕೆ ಸಂತಸ ಪಟ್ಟ ಶ್ರೀವಿಶ್ವೋತ್ತಮತೀರ್ಥರು ಶಿರೂರು ಶ್ರೀಪಾದರನ್ನು ಅನುಗ್ರಹಿಸಿ ಹೇಳಿದರು. “ನೀವು ಶ್ರೀಮುಖ್ಯಪ್ರಾಣ ದೇವರ ನಿತ್ಯಆರಾಧಕರು, ಉಪಾಸನೆ ಮುಂದುವರಿಸಿ. ಶ್ರೀಮುಖ್ಯಪ್ರಾಣದೇವರು ಸದಾ ನಿಮ್ಮೊಡನೆಯೇ ಇರುತ್ತಾರೆ” ಎಂದು ಶಿರೂರು ಶ್ರೀಪಾದರ ಶಿರದಲ್ಲಿ ಮಂತ್ರಾ ಕ್ಷತೆ ಇಟ್ಟು ಅನುಗ್ರಹಿಸಿದ್ದರು. ಶ್ರೀವಿಶ್ವೋತ್ತಮರ ಅಂದಿನ ಅನುಗ್ರಹದ ಮಾತುಗಳು ನಿಜವಾಯಿತು.. ಶ್ರೀಲಕ್ಷ್ಮೀವರತೀರ್ಥರು ತಮ್ಮ ಸನ್ಯಾಸ ಜೀವನದ ಕೊನೆಯ ಕೆಲವು ವರ್ಷ ಶಿರೂರಿನಲ್ಲೇ ನೆಲೆಸಿ ನಿರಂತರ ಪ್ರಾಣದೇವರ ಉಪಾಸನೆಯಲ್ಲೇ ಕಾಲ ಕಳೆದರು.
ಇವರ ಪೂಜಾ ಪ್ರಸಾದದಿಂದ ನೂರಾರು ಮಂದಿ ಸಂಕಷ್ಟಗಳಿಂದ ಮುಕ್ತರಾಗಿದ್ದರು. ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ ನಿರ್ಮಲ ನಿರಪೇಕ್ಷ ಸೇವೆಗೆ ಶಿರೂರಿನ ಶ್ರೀಮುಖ್ಯಪ್ರಾಣ ದೇವರು ತಮ್ಮ ಪಕ್ಕದಲ್ಲೇ ವೃಂದಾವನ ವನ್ನು ಕರುಣಿಸಿ ಶಾಶ್ವತ ಸಖ್ಯವನ್ನು ಅನುಗ್ರಹಿಸಿದರು. ತನ್ಮೂಲಕ ಶ್ರೀವಿಶ್ವೋತ್ತಮ ತೀರ್ಥಶ್ರೀಪಾದರ ವಚನವೂ ನೆರವೇರಿತು. ಎಂತಹ ತಪಃಶಕ್ತಿ.. ಏನೊಂದು ಸಿದ್ದಿ..