ಶ್ರೀಸಿದ್ಧಿವಿನಾಯಕನ ಪರಮಭಕ್ತ ಗ್ಯಾಬ್ರಿಯಲ್ ನಜ್ರೆತ್ರವರ ಬಹುದಿನಗಳ ಕನಸು ನನಸು –
ಶಿರ್ವ:-ಊರಿಗೆ ಹಿತವನ್ನು ಬಯಸಿ ಗ್ಯಾಬ್ರಿಯಲ್ರವರಿಗೆ ಪ್ರೇರಣೆ ನೀಡಿ ಶಿರ್ವದಲ್ಲಿ ನೆಲೆನಿಂತ ಜಗತ್ತಿನ ದೊಡ್ಡ ನಾಯಕ ಸಿದ್ಧಿವಿನಾಯಕ ಎಂದು ಉಡುಪಿ ಶ್ರೀಪಲಿಮಾರು ಮಠದ ಹಿರಿಯ ಯತಿಗಳಾದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ನುಡಿದರು.
ಅವರು ಗುರುವಾರ ಶಿರ್ವ-ಮೂಡುಬೆಳ್ಳೆ ಕ್ರಾಸ್ ರಸ್ತೆಯ ಜಂಕ್ಷನ್ನಲ್ಲಿ ಶ್ರೀಸಿದ್ದಿವಿನಾಯಕನ ಪರಮಭಕ್ತ ವಿಶ್ರಾಂತ ಉದ್ಯಮಿ ಗ್ಯಾಬ್ರಿಯಲ್ ನಜ್ರೆತ್ರವರು ತಮ್ಮ ಸ್ವಂತ ಜಮೀನಿನಲ್ಲಿ ತಮ್ಮ ಮಾತಾಪಿತರ ಸವಿನೆನಪಿಗಾಗಿ ಅಂದಾಜು ಒಂದುವರೆ ಕೋಟಿಗೂ ಅಧಿಕ ರೂ.ವೆಚ್ಚದಲ್ಲಿ ನಿರ್ಮಿಸಿದ ಶ್ರೀಸಿದ್ದಿವಿನಾಯಕ ದೇವಾಲಯದ ಪ್ರತಿಷ್ಠಾ ಕಾರ್ಯಕ್ರಮದ ಶುಭಾವಸರದಲ್ಲಿ ದೇವಳಕ್ಕೆ ಆಗಮಿಸಿ ಶ್ರೀಸಿದ್ದಿವಿನಾಯಕನಿಗೆ ಆರತಿ ಬೆಳಗಿಸಿ ಆಶೀರ್ವಚನ ನೀಡುತ್ತಾ, ಶಿಲಾಮಯ ವಿನಾಯಕ ಶಿರ್ವದಲ್ಲಿ ಸ್ಥಿರವಾಗಿ ನೆಲೆಯಾಗಿದ್ದಾನೆ.
ಲೋಕದ ಸಂಕಷ್ಟವನ್ನು ದೂರಮಾಡಿ, ಸೂರ್ಯಚಂದ್ರರಿರುವಷ್ಟು ಕಾಲ ಆರೋಗ್ಯವಂತರಾಗಿ ಬದುಕುವ ಸ್ಥಿತಿ ನಿರ್ಮಾಣವಾಗಲಿ. ಗ್ಯಾಬ್ರಿಯಲ್ರವರ ಈ ಕಾರ್ಯಕ್ಕೆ ಸಮಸ್ತ ಸಮಾಜದ ಪರವಾಗಿ ಅಭಿನಂದಿಸಿ ಹರಸಿದರು. ಶ್ರೀಮಠದ ಕಿರಿಯ ಯತಿಗಳಾದ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.
ಶ್ರೀಸಿದ್ಧಿವಿನಾಯಕನ ಪರಮಭಕ್ತ ಗ್ಯಾಬ್ರಿಯಲ್ ನಜ್ರೆತ್
ಮೇ ತಿಂಗಳ ಆರಂಭದಲ್ಲಿ ನಡೆಯಬೇಕಾಗಿದ್ದ ದೇವಳದ ಪ್ರತಿಷ್ಠಾ ಮಹೋತ್ಸವ ಕೋವಿಡ್ ಲಾಕ್ಡೌನ್ ನಿಂದ ಮುಂದೂಡಲ್ಪಟ್ಟಿದ್ದು, ಜುಲೈ 14ರಿಂದ 16ರ ವರೆಗೆ ಕೋವಿಡ್ ನಿಯಮ ಪಾಲನೆಯೊಂದಿಗೆ ಸರಳವಾಗಿ ನೆರವೇರುತ್ತಿದೆ.