ಶಿರ್ವ -ಶ್ರೀಸಿದ್ದಿವಿನಾಯಕ ದೇವಳ ಲೋಕಾರ್ಪಣೆ

ಶ್ರೀಸಿದ್ಧಿವಿನಾಯಕನ ಪರಮಭಕ್ತ ಗ್ಯಾಬ್ರಿಯಲ್ ನಜ್ರೆತ್‌ರವರ ಬಹುದಿನಗಳ ಕನಸು ನನಸು –

ಶಿರ್ವ:-ಊರಿಗೆ ಹಿತವನ್ನು ಬಯಸಿ ಗ್ಯಾಬ್ರಿಯಲ್‌ರವರಿಗೆ  ಪ್ರೇರಣೆ ನೀಡಿ ಶಿರ್ವದಲ್ಲಿ ನೆಲೆನಿಂತ ಜಗತ್ತಿನ ದೊಡ್ಡ ನಾಯಕ ಸಿದ್ಧಿವಿನಾಯಕ ಎಂದು ಉಡುಪಿ ಶ್ರೀಪಲಿಮಾರು ಮಠದ ಹಿರಿಯ ಯತಿಗಳಾದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ನುಡಿದರು.

ಅವರು ಗುರುವಾರ ಶಿರ್ವ-ಮೂಡುಬೆಳ್ಳೆ ಕ್ರಾಸ್ ರಸ್ತೆಯ ಜಂಕ್ಷನ್‌ನಲ್ಲಿ  ಶ್ರೀಸಿದ್ದಿವಿನಾಯಕನ ಪರಮಭಕ್ತ ವಿಶ್ರಾಂತ ಉದ್ಯಮಿ ಗ್ಯಾಬ್ರಿಯಲ್ ನಜ್ರೆತ್‌ರವರು ತಮ್ಮ ಸ್ವಂತ ಜಮೀನಿನಲ್ಲಿ ತಮ್ಮ ಮಾತಾಪಿತರ ಸವಿನೆನಪಿಗಾಗಿ ಅಂದಾಜು ಒಂದುವರೆ ಕೋಟಿಗೂ ಅಧಿಕ ರೂ.ವೆಚ್ಚದಲ್ಲಿ ನಿರ್ಮಿಸಿದ ಶ್ರೀಸಿದ್ದಿವಿನಾಯಕ ದೇವಾಲಯದ ಪ್ರತಿಷ್ಠಾ ಕಾರ್ಯಕ್ರಮದ ಶುಭಾವಸರದಲ್ಲಿ  ದೇವಳಕ್ಕೆ ಆಗಮಿಸಿ ಶ್ರೀಸಿದ್ದಿವಿನಾಯಕನಿಗೆ ಆರತಿ ಬೆಳಗಿಸಿ ಆಶೀರ್ವಚನ ನೀಡುತ್ತಾ, ಶಿಲಾಮಯ ವಿನಾಯಕ ಶಿರ್ವದಲ್ಲಿ ಸ್ಥಿರವಾಗಿ ನೆಲೆಯಾಗಿದ್ದಾನೆ. 

ಲೋಕದ ಸಂಕಷ್ಟವನ್ನು ದೂರಮಾಡಿ, ಸೂರ್ಯಚಂದ್ರರಿರುವಷ್ಟು ಕಾಲ ಆರೋಗ್ಯವಂತರಾಗಿ ಬದುಕುವ ಸ್ಥಿತಿ ನಿರ್ಮಾಣವಾಗಲಿ. ಗ್ಯಾಬ್ರಿಯಲ್‌ರವರ ಈ ಕಾರ್ಯಕ್ಕೆ ಸಮಸ್ತ ಸಮಾಜದ ಪರವಾಗಿ ಅಭಿನಂದಿಸಿ ಹರಸಿದರು. ಶ್ರೀಮಠದ ಕಿರಿಯ ಯತಿಗಳಾದ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.

ಕನ್ನರ್ಪಾಡಿ  ಜ್ಯೋತಿಷ್ಯ ವಿದ್ವಾನ್ ಸಂದೀಪ್ ಉಪಾಧ್ಯಾಯ ನೇತೃತ್ವದಲ್ಲಿ ವೈದಿಕವೃಂದ, ದೇವಳದ ನಿಮಾತೃ ಗ್ಯಾಬ್ರಿಯಲ್ ನಜ್ರೆತ್, ದೇವಳ ನಿರ್ಮಾಣದ ಉಸ್ತುವಾರಿ ನಾಗೇಶ ಹೆಗ್ಡೆ ಉಭಯ ಶ್ರೀಗಳವರನ್ನು ಸ್ವಾಗತಿಸಿ ಪಾದಪೂಜೆ ನೆರವೇರಿಸಿದರು. ಈಸಂದರ್ಭದಲ್ಲಿ ಪಲಿಮಾರು ಮಠದ ಹಿರಿಯ ವೈದಿಕರಾದ ಗಿರೀಶ್ ಉಪಾಧ್ಯಾಯ, ಪಡುಬೆಳ್ಳೆ ಪರಶುರಾಮ ಭಟ್, ಭಜಕವೃಂದದವರು ಉಪಸ್ಥಿತರಿದ್ದರು.

ಶ್ರೀಸಿದ್ಧಿವಿನಾಯಕನ ಪರಮಭಕ್ತ ಗ್ಯಾಬ್ರಿಯಲ್ ನಜ್ರೆತ್‌

ಮೇ ತಿಂಗಳ ಆರಂಭದಲ್ಲಿ ನಡೆಯಬೇಕಾಗಿದ್ದ ದೇವಳದ ಪ್ರತಿಷ್ಠಾ ಮಹೋತ್ಸವ ಕೋವಿಡ್ ಲಾಕ್‌ಡೌನ್ ನಿಂದ ಮುಂದೂಡಲ್ಪಟ್ಟಿದ್ದು, ಜುಲೈ 14ರಿಂದ 16ರ ವರೆಗೆ ಕೋವಿಡ್ ನಿಯಮ ಪಾಲನೆಯೊಂದಿಗೆ ಸರಳವಾಗಿ ನೆರವೇರುತ್ತಿದೆ.  

ಬುಧವಾರ ಸಂಜೆ ಬಿಂಬಾಧಿವಾಸ, ವಾಸ್ತು, ಅಘೋರಹೋಮ, ಗುರುವಾರ ಪೂರ್ವಾಹ್ನ ತತ್ವಹೋಮ, ಶಕ್ತಿಯಾಗ, ಪೀಠಿಕಾಯಾಗ, ಬಿಂಬ ಪ್ರತಿಷ್ಠೆ, ರಾತ್ರಿ ಭದ್ರಮಂಡಲ ಪೂಜೆ, ಇತ್ಯಾದಿ  ಪ್ರತಿಷ್ಠಾ ಧಾರ್ಮಿಕ ಅನುಷ್ಠಾನಗಳು ಸಂಪನ್ನಗೊoಡವು. ಶುಕ್ರವಾರ ಪೂರ್ವಾಹ್ನ ಧಾರ್ಮಿಕ ಅನುಷ್ಠಾನಗಳು, ಗಣಹೋಮ, ಬ್ರಹ್ಮಕಲಶೋತ್ಸವ, ರಾತ್ರಿ ಮಹಾರಂಗ ಪೂಜೆ ಜರುಗಲಿದೆ.
 
 
 
 
 
 
 
 
 
 
 

Leave a Reply