ಶ್ರೀ ಸಂಸ್ಥಾನ ಗೌಡಪಾದಾಚಾರ್ಯ ಮಠದ 17ನೇ ಶಾಖಾಮಠ ನಿರ್ಮಾಣ

ಆತ್ರಾಡಿ : ಸಾರಸ್ವತ ಸಮಾಜದ ಆದ್ಯಪೀಠ ಗೋವಾದ ಕೈವಲ್ಯಪುರದಲ್ಲಿರುವ ಶ್ರೀ ಸಂಸ್ಥಾನ ಗೌಡಪಾದಾಚಾರ್ಯ ಮಠದೊಂದಿಗೆ ಸ್ವಸಮಾಜದ ಬಾಂಧವರು ನಿರಂತರ ನಿಕಟ ಸಂಪರ್ಕವನ್ನು ಬೆಳೆಸುವ ಉದ್ದೇಶದಿಂದ, ಶ್ರೀ ಮಠದ 17ನೇ ಶಾಖಾಮಠವನ್ನು ಆತ್ರಾಡಿ ಪರಿಕ ರಸ್ತೆಯಲ್ಲಿ ನಿರ್ಮಿಸಲಾಗಿದೆ.

ನೂತನ ಶಾಖಾ ಮಠವನ್ನು ಶ್ರೀ ಕೈವಲ್ಯ ಮಠಾಧೀಶ ಶ್ರೀಮದ್ ಶಿವಾನಂದ ಸರಸ್ವತಿ ಸ್ವಾಮೀ ಮಹಾರಾಜ್ ಡಿ.11ರಂದು ಸಂಜೆ 3ಗಂಟೆಗೆ ತಮ್ಮ ಆರಾಧ್ಯ ಮೂರ್ತಿ ಶ್ರೀ ಭವಾನೀ ಶಂಕರ ದೇವರಿಗೆ, ಆ ಮೂಲಕ ಸಾರಸ್ವತ ಸಮಾಜಕ್ಕೆ ಅರ್ಪಣೆ ಮಾಡಲಿದ್ದಾರೆ.

ಮುಖ್ಯ ಅಭ್ಯಾಗತರಾಗಿ ರಾಜ್ಯದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್, ಉಡುಪಿಯ ಶಾಸಕ ಕೆ.ರಘುಪತಿ ಭಟ್ ಮತ್ತು ಕಾಪು ಶಾಸಕ ಲಾಲಾಜಿ ಮೆಂಡನ್ ಹಾಗೂ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ.
ಇದಕ್ಕೆ ಪೂರ್ವಭಾವಿಯಾಗಿ ಶ್ರೀ ಸ್ವಾಮೀಜಿಯವರು ಡಿ.10ರಂದು ಸಂಜೆ ಶ್ರೀಮಠವನ್ನು ಪ್ರವೇಶಗೈಯ್ಯಲಿದ್ದಾರೆ.

ಈ ಪ್ರಯುಕ್ತ ಅವರನ್ನು ಸಂಜೆ 4.30 ಗಂಟೆಗೆ ಪರ್ಕಳ ಹೈಸ್ಕೂಲು ಬಳಿಯಿಂದ ಭವ್ಯವಾದ ಶೋಭಾಯಾತ್ರೆಯ ಮೂಲಕ ಶ್ರೀಮಠಕ್ಕೆ ಕರೆತರಲಾಗುತ್ತದೆ.


ಶ್ರೀ ಸ್ವಾಮೀಜಿ ಅವರು ಡಿ.17ರವರೆಗೆ ನೂತನ ಶಾಖಾ ಮಠದಲ್ಲಿ ಮೊಕ್ಕಾಂ ಇರಲಿದ್ದು, ಶ್ರೀ ಭವಾನೀ ಶಂಕರ ದೇವರ ಪೂಜೆ, ಶ್ರೀಗಳಿಗೆ ಭಿಕ್ಷಾ ಪ್ರದಾನ, ಪಾದ್ಯಪೂಜೆ ಇತ್ಯಾದಿಗಳು ನಡೆಯಲಿವೆ.

ಸುದ್ದಿಗೋಷ್ಠಿಯಲ್ಲಿ ಕೈವಲ್ಯ ಶಾಖಾ ಮಠದ ಅಧ್ಯಕ್ಷ ಸಂತೋಷ್ ವಾಗ್ಳೆ,ನಿಕಟಪೂರ್ವ ಅಧ್ಯಕ್ಷ ಶ್ರೀಶಾ ನಾಯಕ್ ಪೆರ್ಣಂಕಿಲ, ನರಸಿಂಗೆ ನರಸಿಂಹ ದೇವಸ್ಥಾನದ ಆಡಳಿತ ಮೊಕ್ತೇಸರ, ರಮೇಶ್ ಸಾಲ್ವಂಕಾರ್, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಬಂಟಕಲ್ಲಿನ ಆಡಳಿತ ಮೊಕ್ತೇಸರ ಶಶಿಧರ ವಾಗ್ಳೆ, ದುರ್ಗಾಪರಮೇಶ್ವರಿ ಸೊಸೈಟಿ ಪರ್ಕಳದ ಸಿಇಓ ನಿತ್ಯಾನಂದ ನಾಯಕ್,ಜಿಪಂ ಮಾಜಿ ಅಧ್ಯಕ್ಷ ಉಪೇಂದ್ರ ನಾಯಕ್ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply