ಗೋಕರ್ಣ ಪರ್ತಗಾಳಿ ಶ್ರೀ ಶ್ರೀ ವಿದ್ಯಾಧಿರಾಜ ತೀರ್ಥ ಸ್ವಾಮೀಜಿಯವರು ವಿಧಿವಶ

ಶ್ರೀಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೊತ್ತಮ್ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಧಿರಾಜ ತೀರ್ಥ ಸ್ವಾಮೀಜಿಯವರು ಇಂದು ಬೆಳಿಗ್ಗೆ ಹೃದಯಸ್ತಂಭನದಿಂದ ಹರಿಪಾದ ಸೇರಿದರು.

*****

ಶ್ರೀಮನ್ಮಧ್ವಾಚಾರ್ಯರ ಸಿದ್ಧಾಂತವನ್ನು ಅನುಸರಿಸುತ್ತಿರುವ ಗೌಡಸಾರಸ್ವತ ಬ್ರಾಹ್ಮಣ ಸಮಾಜದ ಪ್ರಮುಖ ಪೀಠಗಳಲ್ಲಿ ಒಂದಾದ ಶ್ರೀ ಗೋಕರ್ಣ ಪರ್ತಗಾಳೀ ಜೀವೋತ್ತಮ ಮಠವು ಶ್ರೀನಾರಾಯಣತೀರ್ಥರಿಂದ ಪ್ರವರ್ತಿತವಾದಂತಹ ಮಠ.

ಶ್ರೀರಾಮ ಹಾಗೂ ಶ್ರೀವೀರವಿಠ್ಠಲ ದೇವರನ್ನು ಮಠದ ಪ್ರಧಾನ ದೇವರಾಗಿ ಪೂಜಿಸುತ್ತಾ ಬಂದಿರುವ ಶ್ರೀಜೀವೋತ್ತಮಮಠವನ್ನು ಶ್ರೀಜೀವೋತ್ತಮ ತೀರ್ಥರು, ಶ್ರೀಇಂದಿರಾಕಾಂತ ತೀರ್ಥರು, ಶ್ರೀದ್ವಾರಕಾನಾಥ ತೀರ್ಥರೆ ಮೊದಲಾದ ಮಹಾಯತಿಗಳು ಅಲಂಕರಿಸಿದ್ಧಾರೆ. ಶ್ರೀವಿದ್ಯಾಧಿರಾಜ ತೀರ್ಥರು ಅಧುನಾ ಶ್ರೀಗೋಕರ್ಣಪರ್ತಗಾಳಿ ಮಠದ ಪೀಠಾಧೀಶರು. 

ಶ್ರೀಜೀವೋತ್ತಮತೀರ್ಥರು, ಶ್ರೀಪೂರ್ಣಪ್ರಜ್ಞತೀರ್ಥರು, ಶ್ರೀಪದ್ಮನಾಭತೀರ್ಥರು, ಶ್ರೀಇಂದಿರಾಕಾಂತತೀರ್ಥರ ತರುವಾಯ ಶ್ರೀಮಠದ ಪರಂಪರೆಯಲ್ಲಿ ಐವತ್ತಕ್ಕೂ ಹೆಚ್ಚಿನ ಚಾತುರ್ಮಾಸಗಳನ್ನು ಆಚರಿಸಿರುವ ಶ್ರೀವಿದ್ಯಾಧಿರಾಜತೀರ್ಥರದು ಶ್ರೀಮಠದ ಪರಂಪರೆಯಲ್ಲಿ ಅತ್ಯಂತ ವಿಶಿಷ್ಟವಾದಂತಹ ಸಾಧನೆ. ಶ್ರೀಸೇನಾಪುರ ಲಕ್ಷ್ಮೀನಾರಾಯಣಾಚಾರ್ಯ ದಂಪತಿಗಳ ಸುಪುತ್ರರಾಗಿ ಉಡುಪಿಯ ಸಮೀಪದ ಗಂಗೊಳ್ಳಿಯಲ್ಲಿ ಜನಿಸಿದ ಶ್ರೀಗಳ ಪೂರ್ವಾಶ್ರಮದ ಹೆಸರು ಶ್ರೀರಾಘವೇಂದ್ರಾಚಾರ್ಯರು. ಶ್ರೀದ್ವಾರಕಾನಾಥ ತೀರ್ಥರಿಂದ 1967ರ ಫೆಬ್ರವರಿ 26ರಂದು ಸಂನ್ಯಾಸದೀಕ್ಷೆಯನ್ನು ಸ್ವೀಕರಿಸಿದ ಶ್ರೀರಾಘವೇಂದ್ರಾಚಾರ್ಯರು ಶ್ರೀವಿದ್ಯಾಧಿರಾಜ ತೀರ್ಥರಾದರು.

 1973ರಲ್ಲಿ ಶ್ರೀದ್ವಾರಕಾನಾಥತೀರ್ಥರು ಪರಂಧಾಮವನ್ನು ಸೇರುವವರೆಗೂ ತಮ್ಮಗುರುಗಳ ಬಳಿಯಲ್ಲಿ ಅಧ್ಯಯನ ನಡೆಸಿದ ಶ್ರೀವಿದ್ಯಾಧಿರಾಜರು 1973ರ ಏಪ್ರಿಲ್ 5ರಂದು ಶ್ರೀಮಠದ ಅಧಿಕಾರವನ್ನು ಸ್ವೀಕರಿಸಿದರು. ಪೀಠಾರೋಹಣದ ನಂತರ ಶಾಖಾಮಠಗಳ ಜೀರ್ಣೋದ್ಧಾರ, ದೇಗುಲಗಳ ನಿರ್ಮಾಣ, ಮೂಲಮಠದ ನವೀಕರಣ, ದಾಮೋದರ ಕುಂಡವೂ ಸೇರಿದಂತೆ ಅನೇಕ ಹಿಮಾಲಯದ ದುರ್ಗಮ ಪ್ರದೇಶಗಳ ಸಂದರ್ಶನ, ಗಂಗೋತ್ರಿಯಿಂದ ಗಂಗಾಸಾಗರ ಸಂಗಮದವರೆಗಿನ ಯಾತ್ರೆ, ಗಂಡಕೀ ಯಾತ್ರೆಯೂ ಸೇರಿದಂತೆ ಅಷ್ಟೋತ್ಕೃಷ್ಟ ವೈಷ್ಣವಕ್ಷೇತ್ರ ಸಂದರ್ಶನ (ಪಾದಯಾತ್ರೆಯಲ್ಲಿ) ಯಜ್ಞ, ಕೋಟಿ ಶ್ರೀರಾಮನಾಮ ಯಜ್ಞ, ಶತಕೋಟಿ ರಾಮನಾಮ ಯಜ್ಞ,ಮಹಾವಿಷ್ಣುಯಾಗ ಮೊದಲಾದ ಯಾಗಗಳ ನೇತೃತ್ವ. 

ಅಯೋಧ್ಯ, ಮಥುರಾ, ಕಂಚಿ ಮೊದಲಾದ ಸಪ್ತ ಮೋಕ್ಷದಾಯಕ ಕ್ಷೇತ್ರಗಳ ಸಂದರ್ಶನ, ಬದರೀಕ್ಷೇತ್ರದಲ್ಲಿ ಚಾತುರ್ಮಾಸ ಹೀಗೆ ಹಲವು ಹತ್ತು ವೈಷ್ಣವಕಾರ್ಯಗಳಲ್ಲಿ ಸದಾ ತತ್ಪರರಾದ ಶ್ರೀಸ್ವಾಮಿಗಳು ಆಸೇತು ಹಿಮಾಲಯ (ನೇಪಾಳದೇಶವೂ ಸೇರಿದಂತೆ) ಭಾರತವನ್ನು ಸಂಚರಿಸಿರುವ ಶ್ರೀಗಳು 4-7-1998ರಲ್ಲಿ ಉಡುಪಿಯ ಸಮೀಪದ ಕಲ್ಯಾಣಪುರದಲ್ಲಿ ಮಾಧ್ವ ತತ್ತ್ವಜ್ಞಾನದ ಮೇರುಕೃತಿ ಶ್ರೀಜಯತೀರ್ಥರ ‘ಶ್ರೀಮನ್ನ್ಯಾಯಸುಧಾ’ಮಂಗಳಮಹೋತ್ಸವವನ್ನು ನೆರವೇರಿಸಿದರು. ಪಲಿಮಾರು,ಭಂಡಾರಕೇರಿ ಮಠಾಧೀಶರಾದ, ಮಾಧ್ವ ತತ್ತ್ವಜ್ಞಾನದ ಮಹಾವಿದ್ವಾಂಸರಾದ ಶ್ರೀವಿದ್ಯಾಮಾನ್ಯತೀರ್ಥ ಶ್ರೀಪಾದಂಗಳವರು ಈ ಮಂಗಳಮಹೋತ್ಸವದಲ್ಲಿ ಭಾಗವಹಿಸಿದ್ದರು. 

ಸಂಸ್ಕೃತಭಾಷೆಯಲ್ಲಿ ಅದ್ವಿತೀಯ ಪಾಂಡಿತ್ಯವನ್ನು ಹೊಂದಿರುವ ಶ್ರೀಗಳು ಮಾಧ್ವ ತತ್ತ್ವಜ್ಞಾನದ ಬಹುತೇಕ ಎಲ್ಲಾ ಮಹತ್ತ್ವದ ಕೃತಿಗಳನ್ನು ಆಳವಾಗಿ ಅಧ್ಯಯನ ಮಾಡಿರುವುದರೊಂದಿಗೆ ಸಂಸ್ಕೃತ ಕಾವ್ಯಗಳಾದ ಕುಮಾರಸಂಭವ, ಕೀರಾತಾರ್ಜುನೀಯ, ರಘುವಂಶ ಮೊದಲಾದವುಗಳ ಬಗ್ಗೆ ಸಹಾ ಅಸಾಧಾರಣವೈದುಷ್ಯವನ್ನು ಹೊಂದಿದ್ದಾರೆ. ಜ್ಯೋತಿಷ್ಯ, ಧರ್ಮಶಾಸ್ತ್ರ, ಆಗಮಶಾಸ್ತ್ರಗಳಲ್ಲಿಯೂ ಶ್ರೀಗಳ ಪಾಂಡಿತ್ಯ ಅಪೂರ್ವವಾದದ್ದು. ಬಹುತೇಕ ಮಾಧ್ವಮಠಾಧೀಶರೊಂದಿಗೆ ಅತ್ಯಂತ ಸೌಹಾರ್ದ ಸಂಬಂಧವನ್ನು ಹೊಂದಿರುವ ಶ್ರೀಗಳು ಶ್ರೀಜೀವೋತ್ತಮ ಮಠದ ಹಿಂದಿನ ಸ್ವಾಮಿಗಳ ಬಗ್ಗೆ ಗ್ರಂಥಗಳನ್ನು ಪ್ರಕಟಿಸಿದ್ದಾರೆ. 

ಹಳೆಯ ದಾಖಲೆಗಳ, ಗ್ರಂಥಗಳ ಸಂರಕ್ಷಣೆಯಲ್ಲಿ ಸ್ವಾಮಿಗಳಿಗೆ ವಿಶೇಷವಾದಂತಹ ಆಸಕ್ತಿ. 2017ರಲ್ಲಿ ಶ್ರೀಉದಯಭಟ್ ಶರ್ಮ ಎಂಬ ವಟುವಿಗೆ ಶ್ರೀವಿದ್ಯಾಧೀಶತೀರ್ಥರೆಂಬ ಆಶ್ರಮನಾಮದೊಂದಿಗೆ ಸಂನ್ಯಾಸದೀಕ್ಷೆ ನೀಡಿ ತಮ್ಮ ಉತ್ತರಾಧಿಕಾರಿಗಳಾಗಿ ನೇಮಿಸಿ ಮಾರ್ಗದರ್ಶನ ಮಾಡುತ್ತಿರುವ ಶ್ರೀಗಳು ಸಮಗ್ರಸಮಾಜದ ಒಂದು ಬಹುದೊಡ್ಡ ಆಸ್ತಿಯೆಂದರೆ ಅತಿಶಯೋಕ್ತಿಯಲ್ಲ~  ಡಾ.ಬಿ.ಎನ್. ವೇಣುಗೋಪಾಲ.

 

 

 
 
 
 
 
 
 
 
 
 
 

Leave a Reply