ಇತಿಹಾಸ: ಚತುರಸ್ರಾಕಾರದ ಶಿಲಾಮಯ ಗರ್ಭಗುಡಿ. ದ್ವಿತಲದ ರಚನೆ ಷಡ್ವರ್ಗ ಕ್ರಮ ದಲ್ಲಿ ನಿರ್ಮಿಸಲಾಗಿದೆ. ಈ ಶಿಲಾಮಯ ಗರ್ಭಗುಡಿಯು ಪುರಾತನ ರಚನೆಯಾಗಿದೆ.
ಮೂಲಸ್ಥಾನ ಮೂರ್ತಿಗಿಂತಲೂ ಪುರಾತನ ಎಂಬುದು ಪ್ರತ್ಯಕ್ಷಕ್ಕೆ ಸ್ಪಷ್ಟವಾಗುತ್ತದೆ. ಮೂಲಸ್ಥಾನ ಸನ್ನಿಧಾನವು ಶಿಲಾಪ್ರತಿಮೆ ಯಾಗಿದೆ. ಹದಿಮೂರನೇ ಶತಮಾನದ ನಿರ್ಮಿತಿ ಎಂಬುದು ಇತಿಹಾಸ ತಜ್ಞ ಡಾ.ಪಿ. ಗುರುರಾಜ ಭಟ್ಟರ ಅಭಿಪ್ರಾಯ.
ದ್ವಿಬಾಹು ಮೂರ್ತಿಯು ಆಕರ್ಷಕವಾಗಿದೆ. ಪ್ರಭಾವಳಿಯನ್ನು ಹೊಂದಿದೆ. ಸಮಭಂಗ ದಲ್ಲಿ ನಿಂತ ಪ್ರತಿಮೆಯ ಎಡಕೈ ಕಟಿ ಅವಲಂಬಿತವಾಗಿದೆ. ಬಲಕೈಯಲ್ಲಿ ವಜ್ರ (ನಾಗಾಂಡ ಅಥವಾ ಪದ್ಮ) ಹಿಡಿದು ಕೊಂಡಂತಿದೆ. ಬಲಿ ಮೂರ್ತಿಯು ಮಯೂರ ವಾಹನವಾಗಿದ್ದು ಸುಂದರ ವಾಗಿದೆ ಹದಿನಾಲ್ಕನೇ ಶತಮಾನದ ರಚನೆ ಎಂದು ಗುರುರಾಜ ಭಟ್ಟರು ಮಾಡಿದ ಕಾಲ ನಿರ್ಣಯ.
ಗರ್ಭಗುಡಿ: ಪೂರ್ವಾಭಿಮುಖವಾಗಿರುವ ಗರ್ಭಗುಡಿಯ ಅಧಿಷ್ಠಾನವು ಪಾದಬಂಧ ಕ್ರಮದಲ್ಲಿದೆ.ಭಿತ್ತಿಯು ಶಾಸ್ತ್ರೀಯ ಕ್ರಮದ ನಿರ್ಮಿತಿ. ಭಿತ್ತಿಯು ಭಿತ್ತಿಸ್ತಂಭ, ಘನದ್ವಾರ ಗಳಿಂದ ಅಲಂಕೃತ ವಾಗಿದೆ.
ಪ್ರಸ್ತರ(ಕೆಳಗಿನ ಛಾವಣಿ)ವು ಶಿಲಾಮಯ ವಾಗಿದೆ. ಗ್ರೀವವು( ಷಡ್ವರ್ಗ ಕ್ರಮದಲ್ಲಿ ನಾಲ್ಕನೇ ಹಂತ , ಮೇಲಿನ ಹಾಗೂ ಕೆಳಗಿನ ಛಾವಣೆಗಳ ನಡುವಿನ ಕುತ್ತಿಗೆಯಂತಹ ಭಾಗ) ಭಿತ್ತಿಯ ರಚನೆಗೆ ಪೂರಕವಾಗಿದೆ. ಗ್ರೀವದ ದಿಕ್ಕುಗಳಲ್ಲಿ ಪೂರ್ವಾಧಿಯಾಗಿ ಪರಾವಾಸುದೇವ, ದಕ್ಷಿಣಾ ಮೂರ್ತಿ, ನರಸಿಂಹ,ಸ್ಕಂದ ಪ್ರತಿಮೆಗಳಿವೆ.ಇವು ಶಾಸ್ತ್ರೀಯವಾಗಿ ಇರುವಂತಹುದು.
ಗರ್ಭಗುಡಿಯ ಸುತ್ತಲೂ ಹನ್ನೆರಡು ಶಿಲಾ ಸ್ತಂಭಗಳು ಇರುತ್ತವೆ. ಮೂಲ ನಿರ್ಮಾಣ ದಲ್ಲಿ ಹಾಗೆಯೇ ಇದ್ದವುಗಳನ್ನೆ ಮತ್ತೆ ಅಳವಡಿಸಲಾಗುವುದು. ಈಗಾಗಲೆ ಗರ್ಭಗುಡಿ,ತೀರ್ಥಮಂಟಪ ಹಾಗೂ ಅಗ್ರಸಭೆಯ ಪುರಾತನ ನಿರ್ಮಿತಿಗಳನ್ನು ಬಿಚ್ಚಿತೆಗೆದು ಗರ್ಭಗುಡಿಗೆ ಷಡಾಧಾರ ಸ್ಥಾಪನೆಯಂತಹ ಮೂಲಸ್ಥಾನ ದೇವರ ಪ್ರತಿಮೆ ಪ್ರತಿಷ್ಠೆಗೆ ಪೂರ್ವಭಾವೀಯಾದ ಧಾರ್ಮಿಕ ವಿಧಿ ನಡೆದು ಮರುನಿರ್ಮಾಣ ಕಾರ್ಯ ಆರಂಭವಾಗಿದೆ.
ಭಿನ್ನಗೊಂಡ ಶಿಲೆಯ ಭಾಗಗಳನ್ನು ಹೊಸ ತಾಗಿ ನಿರ್ಮಿಸಿ ಮರುಜೋಡಣೆಯ ಕಾರ್ಯ ನಡೆಯುತ್ತಿದೆ.
ತೀರ್ಥಮಂಟಪ: ದೇವಾಲಯ ನಿರ್ಮಾಣ ದ ಊರ್ಧ್ವಮುಖ ರಚನೆಯಂತೆ ಗರ್ಭಗುಡಿ ನಿರ್ಮಾಣವಾದರೆ ತಿರ್ಯನ್ಮುಖ (ಸರಳ ರೇಖೆಯಂತಹ ರಚನೆ ಅಂದರೆ ಗರ್ಭ ಗುಡಿಯ ಮುಂಭಾಗದ ರಚನೆಗಳು) ನಿರ್ಮಿತಿಯಲ್ಲಿ ತೀರ್ಥಮಂಟಪವು ಎರಡನೇ ಹೆಜ್ಜೆ.
ತೀರ್ಥಮಂಟಪವು ಏಕತಲದ ರಚನೆ, ಅಧಿಷ್ಠಾನವು ಪಾದಬಂಧ ಕ್ರಮದಲ್ಲಿದೆ.
ಮುಖಮಂಟಪ ಎಂಬ ವಿಸ್ತಾರವಾದ ನಿರ್ಮಿತಿಗಳಿಲ್ಲ. ಪ್ರವೇಶದ್ವಾರ ಶಿಲೆಯ ದ್ದನ್ನೇ ಉಳಿಸಿಕೊಳ್ಳಲಾಗುವುದು.
ಮುಂಭಾಗ ಪ್ರಧಾನಬಲಿ ಪೀಠ, ಧ್ವಜಸ್ತಂಭ .ಧ್ವಜಸ್ತಂಭದ ಮುಂದೆ ಶಿಲೆಯ ಇಷ್ಷತ್ತೈದು – ಮೂವತ್ತು ಅಡಿ ಎತ್ತರದ ದೀಪಸ್ತಂಭವಿದೆ. ದ್ವಜಸ್ತಂಭದ ತುದಿಯಲ್ಲಿ ನವಿಲಿನ ಆಕೃತಿಯ ಧ್ವಜದೇವರ ಮೂರ್ತಿ ಇದೆ.
ಹೊರಾಂಗಣವನ್ನು ದಾಟಿದರೆ ಗೋಪುರ ಅಥವಾ ಮರ್ಯಾದಾ ಇದೆ.ಎರಡು ಬದಿಗೂ ತೆರೆದುಕೊಂಡಂತಹ ವಿಶಾಲವಾದ ಚಾವಡಿ, ಮರದ ದೊಡ್ಡ ಕಂಬಗಳನ್ನು ಅಳವಡಿಸ ಲಾಗಿದೆ.
ಸಾಕ್ಷೀಶ್ವರ: ಹೊರ ಅಂಗಣದ ಉತ್ತರ ಬದಿಯಲ್ಲಿ ಜೀರ್ಣಗೊಂಡ ಗುಡಿಯೊಂದಿದೆ. ದೀರ್ಘ ಚತುರಸ್ರ ಆಕಾರದ ಗುಡಿಯು ಪ್ರಾಸಾದ ಮಂಟಪ ಸಹಿತದ ನಿರ್ಮಾಣ ವಾಗಿದೆ.
ಶಿಲೆಯ ಹಾಸುಕಲ್ಲಿನ ಭಿತ್ತಿ ಇದೆ.ಇದು ದೊಡ್ಡ ಪಾಣಿಪೀಠದಲ್ಲಿರುವ ಸಣ್ಣಲಿಂಗವುಳ್ಳ ಸಾಕ್ಷೀಶ್ವರ ದೇವರ ಸನ್ನಿಧಿ. ವಡಭಾಂಡೇಶ್ವ ರಕ್ಕೆ ಬಂದು ಸಮುದ್ರ ಸ್ನಾನಮಾಡಿ ಬಲರಾಮದೇವರ ದರ್ಶನ ಮಾಡಿದ ಸಾಕ್ಷಿಗಾಗಿ ಸಾಕ್ಷೀಶ್ವರ ದೇವರ ಲಿಂಗವಿರುವ ದೊಡ್ಡ ಪಾಣಿಪೀಠದಲ್ಲಿರುವ ಸಣ್ಣದೊಂದು ಪಾಣಿಪೀಠವನ್ನು ಲಿಂಗಕ್ಕೆ ಪ್ರದಕ್ಷಿಣೆಯಾಗಿ ತಿರುಗಿಸುವ ವಿಶಿಷ್ಟ ಪದ್ಧತಿಯೊಂದು ಇಲ್ಲಿ ರೂಢಿಯಲ್ಲಿದೆ. ಎರಡನೇ ಹಂತದಲ್ಲಿ ಈ ಗುಡಿಯ ಜೀರ್ಣೋದ್ಧಾರ ನಡೆಯುತ್ತದೆ.
• ಬಲರಾಮ ದೇವರು ಸಂತಾನ, ಸಮೃದ್ಧಿ,ಸುಖ ದಾಂಪತ್ಯಭಾಗ್ಯವನ್ನು ಕರುಣಿಸುತ್ತಾರೆ ಎಂಬುದು ನಂಬಿಕೆ.
•ಧೈರ್ಯಗುಂದಿದಾಗ, ಸಾಹಸದ ಕರ್ತವ್ಯಗಳಿಗೆ ಬಲರಾಮ ದೇವರ ಸ್ಮರಣೆ ಜನಜನಿತ.
• ಕ್ಷೇತ್ರದಲ್ಲಿ ಷಷ್ಠಿ ಮಹೋತ್ಸವವು ವಿಜೃಂಭಣೆಯಿಂದ ನೆರವೇರುತ್ತದೆ. ಉರುಳು ಸೇವೆ ನಡೆದು ಬಂದಿದೆ.
• ಮೊಗವೀರರು ವಿಶೇಷವಾಗಿ ನಂಬುವ ದೇವರು ಬಲರಾಮ.
• ಶ್ರಾವಣ ಹುಣ್ಣಿಮೆಯಂದು ಮೀನುಗಾರಿಕೆಗೆ ಕಡಲಿಗೆ ಇಳಿಯುವ ಮೊದಲು ಸಮುದ್ರಪೂಜೆ ಹಾಗೂ ಬಲರಾಮದೇವರಿಗೆ ಪೂಜೆ, ಬಬ್ಬರ್ಯ ದೈವಕ್ಕೆ ಪ್ರಾರ್ಥನೆ ಸಲ್ಲಿಸುವ ಸಂಪ್ರದಾಯವಿದೆ.
• ಘಟ್ಟದ ಮೇಲಿನಿಂದ ಶ್ರೀಕೃಷ್ಣ ದರ್ಶನಕ್ಕೆ ಉಡುಪಿಗೆ ಬರುವ ಭಕ್ತರು ಕೃಷ್ಣನ ಅಣ್ಣ ಎಂಬ ನಂಬಿಕೆಯಿಂದ ವಡಭಾಂಡೇಶ್ವರದ ಬಲರಾಮನ ದರ್ಶನಕ್ಕೆ ಬರುತ್ತಾರೆ.
•ವಡಭಾಂಡೇಶ್ವರವು ಪಿತೃಕಾರ್ಯಗಳಿಗೆ ಪ್ರಶಸ್ತ ಕ್ಷೇತ್ರ ಎಂದೂ ನಂಬಲಾಗಿದೆ.
ಬಿನ್ನಹ: ಸರ್ವ ಇಷ್ಟಾರ್ಥ ಸಿದ್ಧಿಯ ಕ್ಷೇತ್ರ, ಪುರಾಣ,ಚರಿತ್ರೆ ಹಾಗೂ ದಟ್ಟವಾದ ಜಾನಪದ ಹಿನ್ನೆಲೆಯಿರುವ ವಡಭಾಂಡೇಶ್ವರದ ಶ್ರೀ ಬಲರಾಮ ದೇವರ ದೇವಾಯತನದ ಜೀರ್ಣೋದ್ಧಾರ ಎಂಬ ಪುನಾರಚನೆಯ ಕೆಲಸ ನಡೆಯುತ್ತಿದೆ. ಸಂಕಲ್ಪದಂತೆ ಕಾಮಗಾರಿ ನಡೆಯುತ್ತಿದೆ.ಮರುನಿರ್ಮಾಣ ಕಾರ್ಯವು ಪೂರ್ತಿಯಾದಾಗ ಈ ಸಾಹಸ ಹಾಗೂ ಇಚ್ಛಾಶಕ್ತಿಯ ಜೀರ್ಣೋದ್ಧಾರವು ಇತಿಹಾಸವಾಗಿ ದಾಖಲಾಗಲಿದೆ. ಬನ್ನಿ….ಬಲರಾಮನ ಸನ್ನಿಧಿಯ ಜೀರ್ಣೋದ್ಧಾರ ಕಾರ್ಯವು ಯಥಾಸಾಂಗವಾಗಿ ನೆರವೇರಲು ತನು – ಮನ – ಧನಗಳಿಂದ ಸಹಕರಿಸಿರಿ ಎಂಬುದು ಬಿನ್ನಹ.
ಅಧ್ಯಕ್ಷರು ಮತ್ತು ಸರ್ವಸದಸ್ಯರು
ಜೀರ್ಣೋದ್ಧಾರ ಸಮಿತಿ, ಅಭಿವೃದ್ಧಿ ಟ್ರಸ್ಟ್, ಬ್ರಹ್ಮಕಲಶೋತ್ಸವ ಸಮಿತಿ
ಶ್ರೀ ವಡಭಾಂಡೇಶ್ವರ ಬಲರಾಮ ದೇವಸ್ಥಾನ, ವಡಭಾಂಡೇಶ್ವರ, ಮಲ್ಪೆ