ಕ್ರಾಂತಿ ಚಿತ್ರದ ಟ್ರೇಲರ್ ರಿಲೀಸ್ ಆದ ಖುಷಿಯಲ್ಲಿ ರಚಿತಾ ರಾಮ್ ನೀಡಿದ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಈಗ ಅಂದಿನ ಹೇಳಿಕೆ ಮತ್ತೆ ಮುನ್ನೆಲೆಗೆ ಬಂದಿದ್ದು, ರಚಿತಾ ರಾಮ್ ವಿರುದ್ಧ ದೂರು ದಾಖಲಾಗಿದೆ.
ಸ್ಯಾಂಡಲ್ವುಡ್ನಲ್ಲಿ ಸದ್ಯಕ್ಕೆ ‘ಕ್ರಾಂತಿ’ ಚಿತ್ರದ್ದೇ ಸುದ್ದಿ. ಜನವರಿ 26, ಗಣರಾಜ್ಯೋತ್ಸವದಂದು ಈ ಸಿನಿಮಾ ತೆರೆ ಕಾಣುತ್ತಿದೆ. ಚಿತ್ರತಂಡ ದೊಡ್ಡ ಮಟ್ಟಿಗೆ ಪ್ರಮೋಷನ್ ಕೆಲಸಗಳಲ್ಲಿ ಬಿಜಿಯಾಗಿದೆ. ಸಿನಿಮಾ ಬಿಡುಗಡೆಗೂ ಮುನ್ನ ಚಿತ್ರದ ಹಾಡುಗಳು ಭಾರೀ ಸದ್ದು ಮಾಡಿರುವುದು ಚಿತ್ರತಂಡದ ಖುಷಿಗೆ ಕಾರಣವಾಗಿದೆ. ಟ್ರೇಲರ್ ನೋಡಿದವರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಟಿಕೆಟ್ ಬುಕಿಂಗ್ ಸಹ ಶುರುವಾಗಿದ್ದು, ಕಡಿಮೆ ಅವಧಿಯಲ್ಲಿಯೇ ಬಿಕರಿಯಾಗಿವೆ.
ನಟ ದರ್ಶನ್ ಚಿತ್ರದ ಹಾಡುಗಳನ್ನು ಹೊಸಪೇಟೆ, ಮೈಸೂರು, ಹುಬ್ಬಳ್ಳಿಯಲ್ಲಿ ಬಿಡುಗಡೆ ಮಾಡಿ, ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಇದೆಲ್ಲದರ ಜತೆಗೆ ಹಲವು ವಿವಾದಗಳಿಂದಲೂ ಕ್ರಾಂತಿ ಸಿನಿಮಾ ಸುದ್ದಿಯಲ್ಲಿದೆ. ಹೊಸಪೇಟೆಯಲ್ಲಿ ದರ್ಶನ್ ಮೇಲೆ ಚಪ್ಪಲಿ ಎಸೆತ ಪ್ರಕರಣ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಸ್ಯಾಂಡಲ್ವುಡ್ನ ಬಹುತೇಕರು ದರ್ಶನ್ ಬೆಂಬಲಕ್ಕೆ ನಿಂತಿದ್ದರು. ಕಿಚ್ಚ ಸುದೀಪ್ ಸಹ ದರ್ಶನ್ ಪರವಾಗಿ ಮಾತನಾಡಿದ್ದರು.
ಹೀಗಿರುವಾಗ ಇತ್ತೀಚೆಗಷ್ಟೇ ಕ್ರಾಂತಿ ಚಿತ್ರದ ಟ್ರೇಲರ್ ಬಿಡುಗಡೆ ಆಗಿತ್ತು. ಆ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ನಟಿ ರಚಿತಾ ರಾಮ್ ಸೇರಿ ಇಡೀ ಚಿತ್ರತಂಡವೇ ಭಾಗವಹಿಸಿತ್ತು. ಈ ವೇಳೆ ಟ್ರೇಲರ್ ರಿಲೀಸ್ ಆದ ಖುಷಿಯಲ್ಲಿ ರಚಿತಾ ರಾಮ್ ನೀಡಿದ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಈಗ ಅಂದಿನ ಹೇಳಿಕೆ ಮತ್ತೆ ಮುನ್ನೆಲೆಗೆ ಬಂದಿದ್ದು, ರಚಿತಾ ರಾಮ್ ವಿರುದ್ಧ ದೂರು ದಾಖಲಾಗಿದೆ.
ಕ್ರಾಂತಿ ಚಿತ್ರದ ಟ್ರೇಲರ್ ಬಿಡುಗಡೆ ಸಂದರ್ಭದಲ್ಲಿ ರಚಿತಾ ಆಡಿದ ಮಾತನ್ನು ಖಂಡಿಸಿದ ಮದ್ದೂರಿನ ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಶಿವಲಿಂಗಯ್ಯ ದೂರು ನೀಡಿದ್ದಾರೆ. ಮಂಡ್ಯದ ಮದ್ದೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಗಣರಾಜ್ಯೋತ್ಸವದ ಬಗ್ಗೆ ಮಾತನಾಡಿರುವ ರಚಿತಾ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ದೂರಿನಲ್ಲಿ ಒತ್ತಾಯಿಸಿದ್ದಾರೆ.
”ಜನವರಿ 26 ಎಂದಾಕ್ಷಣ ಗಣರಾಜ್ಯೋತ್ಸವ ನೆನಪಿಗೆ ಬರುತ್ತದೆ. ಆದರೆ ಈ ವರ್ಷ ಗಣರಾಜ್ಯೋತ್ಸವ ಅಂತ ಮರೆತುಬಿಡಿ, ಅಂದು ‘ಕ್ರಾಂತಿ’ ಉತ್ಸವ ಅಷ್ಟೇ. 26ನೇ ತಾರೀಖು ನಮ್ಮ ‘ಕ್ರಾಂತಿ’ ಉತ್ಸವ ಬಿಡುಗಡೆ ಆಗುತ್ತಿದೆ. ಸಿನಿಮಾವನ್ನು ಬಂದು ನೋಡಿ ಎಂದು ನಾನು ನಿಮಗೆ ಆಹ್ವಾನ ಮಾಡುವುದಿಲ್ಲ. ಏಕೆಂದರೆ ಸಿನಿಮಾ ನೋಡಬೇಕು ಎಂದು ನೀವು ಈಗಾಗಲೇ ನಿರ್ಧಾರ ಮಾಡಿದ್ದೀರ” ಎಂದಿದ್ದರು.