ಪತ್ರಕರ್ತರ ಸಮ್ಮೇಳನಕ್ಕೆ ಸಿಎಂ ಸಮ್ಮತಿ

37ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನ ಜ. 9 ಮತ್ತು 10 ರಂದು ನಡೆಯಲಿದ್ದು, ಸಮ್ಮೇಳನ ಉದ್ಘಾಟನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕೃತವಾಗಿ ಸಮ್ಮತಿಸಿದ್ದಾರೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ತಿಳಿಸಿದ್ದಾರೆ.

ಹೇಳಿಕೆ ನೀಡಿರುವ ಅವರು, ಈ ಹಿಂದೆ ಈ ಸಮ್ಮೇಳನ ಡಿ. 23 ಮತ್ತು 24ಕ್ಕೆ ನಿಗದಿಯಾಗಿತ್ತು. ಆದರೆ ಮುಖ್ಯಮಂತ್ರಿಗಳಿಗೆ ಕಾರ್ಯಬಾಹುಲ್ಯದಿಂದಾಗಿ ಡಿಸೆಂಬರ್ ಅಂತ್ಯದಲ್ಲಿ ಬೇಡ. ಜನವರಿ ಮೊದಲ ವಾರದಲ್ಲಿ ಸಮ್ಮೇಳನ ಹಮ್ಮಿಕೊಳ್ಳಿ. ಶೀಘ್ರದಲ್ಲೇ ದಿನಾಂಕ ಖಾತ್ರಿ ಪಡಿಸುವುದಾಗಿ ಸಿಎಂ ಅವರೇ ಕಳೆದ ವಾರ ಭೇಟಿ ಮಾಡಿದ ಸಂಘದ ಪದಾಧಿಕಾರಿಗಳಿಗೆ ಸೂಚಿಸಿದ್ದರು.

ಆದರೆ ಮತ್ತೆ ಶುಕ್ರವಾರ ಭೇಟಿ ಮಾಡಿದ ರಾಜ್ಯ ಘಟಕದ ಪದಾಧಿಕಾರಿಗಳಿಗೆ ಅಂತಿಮವಾಗಿ ಜ. 9 ಮತ್ತು 10ರಂದು ಸಮ್ಮೇಳನಕ್ಕೆ ಒಪ್ಪಿದ್ದಾರೆ ಎಂದವರು ತಿಳಿಸಿದ್ದಾರೆ.

ಉದ್ದೇಶಿತ ಸಮ್ಮೇಳನ ವಿಜಯಪುರದ ಕಂದಗಲ್ ಹಣಮಂತರಾಯ ರಂಗಮಂದಿರದಲ್ಲಿ ಎರಡು ದಿನಗಳ ಕಾಲ ನಡೆಯಲಿದೆ.

ಜ. 9 ರಂದು ಬೆಳಗ್ಗೆ 6 ಗಂಟೆಗೆ ರಾಜ್ಯದ ಮೂಲೆ-ಮೂಲೆಗಳಿಂದ ಆಗಮಿಸಿದ ಪ್ರತಿನಿಧಿಗಳ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ.

ಬೆಳಗ್ಗೆ 10 ಗಂಟೆಗೆ ಕಮೀಟಿ ಸಭೆ ನಡೆಯಲಿದೆ. ಬಳಿಕ 11 ಗಂಟೆಗೆ 2021-22 ನೇ ಸಾಲಿನ ಸಂಘದ 89ನೇ ಸರ್ವ ಸದಸ್ಯರ ಮಹಾಸಭೆ ಕಂದಗಲ್ ಹಣಮಂತರಾಯ ರಂಗಮಂದಿರದಲ್ಲಿ ನಡೆಯಲಿದೆ.

ಈ ಸಭೆಯಲ್ಲಿ ಭಾಗವಹಿಸಿ, ವಿಷಯ ಪ್ರಸ್ತಾಪಿಸಲಿಚ್ಛಿಸುವ ಸದಸ್ಯರು ವಿಷಯ ಸೂಚಿಯನ್ನು ಡಿ. 30ರೊಳಗಾಗಿ ರಾಜ್ಯ ಸಂಘದ ವಿಳಾಸಕ್ಕೆ ಲಿಖಿತವಾಗಿ ಕಳುಹಿಸಿಕೊಡಬೇಕು. ಮೇಲಾಗಿ ಈ ಸಭೆಯಲ್ಲಿ ಭಾಗವಹಿಸುವ ಸದಸ್ಯರಿಗೆ 2022-23ನೇ ಸಾಲಿನ ಗುರುತಿನ ಚೀಟಿ ಕಡ್ಡಾಯವಾಗಿದೆ ಎಂದವರು ತಿಳಿಸಿದ್ದಾರೆ.

ಸಮ್ಮೇಳನ ಉದ್ಘಾಟನೆ : ಬಳಿಕ ಮಧ್ಯಾಹ್ನ 1 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಮ್ಮೇಳನ ಉದ್ಘಾಟಿಸಲಿದ್ದಾರೆ. ಬಳಿಕ ಸಿಎಂ ಜೊತೆಗೆ ಭಾಗವಹಿಸುವ ಸಚಿವರು ಹಾಗೂ ಶಾಸಕರು ಪತ್ರಕರ್ತರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಸಂಜೆ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ.

ಜ. 10 ರಂದು ಎರಡು ಗೋಷ್ಠಿಗಳು ನಡೆಯಲಿವೆ. ಗೋಷ್ಠಿಗಳ ಬಳಿಕ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದೊಂದಿಗೆ ಸಮ್ಮೇಳನ ಸಮಾರೋಪಗೊಳ್ಳಲಿದೆ ಎಂದು ರಾಜ್ಯಾಧ್ಯಕ್ಷ ಶಿವಾನಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply