ಶಿರ್ವದಲ್ಲಿ 18ವರ್ಷದೊಳಗಿನ ಸೀಸನ್‌ಬಾಲ್ ಕ್ರಿಕೆಟ್ ಪಂದ್ಯಾಕೂಟ ಆರಂಭ  

ಕ್ರೀಡಾಕ್ಷೇತ್ರದಲ್ಲಿ ಸಾಧನೆಮಾಡಿದರೆ ಸ್ಪೋರ್ಟ್ಸ್ ಕೋಟಾದಲ್ಲಿ ಸರಕಾರದ ಉನ್ನತ ಹುದ್ದೆ – ಕಾಪು ಪೊಲೀಸ್ ವೃತ್ತನಿರೀಕ್ಷಕ ಪ್ರಕಾಶ್
ಶಿರ್ವ: ಪ್ರಸ್ತುತ ಜಂಜಾಟದ ಜೀವನದಲ್ಲಿ ಮನುಷ್ಯ ವ್ಯಾಯಾಮ ಮತ್ತು ಕ್ರೀಡೆಯಿಂದ ಮಾತ್ರ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ಗ್ರಾಮೀಣ ಪ್ರತಿಭೆಗಳು ಕ್ರೀಡಾಕ್ಷೇತ್ರದಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದರೆ ಸ್ಪೋರ್ಟ್ಸ್ ಕೋಟಾದಲ್ಲಿ ಸರಕಾರದ ಉನ್ನತ ಹುದ್ದೆಗಳನ್ನು ಏರಲು ಸಾಧ್ಯವಿದೆ ಎಂದು ಕಾಪು ಪೊಲೀಸ್ ವೃತ್ತನಿರೀಕ್ಷಕ ಪ್ರಕಾಶ್ ತಿಳಿಸಿದ್ದಾರೆ.
ಶಿರ್ವ ಹಿಂದೂ ಜೂನಿಯರ್ ಕಾಲೇಜು ಕ್ರೀಡಾಂಗಣದಲ್ಲಿ ಶಿರ್ವ ಹೆಚ್.ಜೆ.ಸಿ. ಕ್ರಿಕೆಟ್ ಅಕಾಡೆಮಿ, ಉಡುಪಿ ಜಿಲ್ಲಾ ಕ್ರಿಕೆಟ್ ಅಸೋಸಿಯೇಶನ್ ವತಿಯಿಂದ ಶಿರ್ವ ಶ್ಯಾಮ್‌ಸ್ಕೆರ್ ಕಿನ್ನಿಮೂಲ್ಕಿ ಆಲ್‌ರಾಯನ್ ಬಯೋಸೈಕಲ್ಸ್ ಸಂಸ್ಥೆಯ ಸಹಯೋಗದೊಂದಿಗೆ 8ದಿನಗಳ ಕಾಲ  ನಡೆಯುವ 18ವರ್ಷದೊಳಗಿನ ಸೀಸನ್‌ಬಾಲ್ ಕ್ರಿಕೆಟ್ ಪಂದ್ಯಾಕೂಟವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು. 
ಉಡುಪಿ ಜಿಲ್ಲಾ ಕ್ರಿಕೆಟ್ ಅಸೋಸಿಯೇಶನ್ ಕಾರ್ಯದರ್ಶಿ ಬಾಲಕೃಷ್ಣ ಪರ್ಕಳ ಮಾತನಾಡಿ,  ಕರಾವಳಿಯಲ್ಲಿ ಕ್ರೀಡಾಕ್ಷೇತ್ರದಲ್ಲಿ ಹೆಚ್ಚಿನ ಪ್ರತಿಭೆಗಳು ಮಿಂಚುತ್ತಿದ್ದು, ಪ್ರಸ್ತುತ ಕೊರೊನಾ ಕಾರಣದಿಂದಾಗಿ ಕ್ರೀಡಾಳುಗಳು ಅವಕಾಶವಂಚಿತರಾಗಿದ್ದಾರೆ. ಆದರೆ ಧೃತಿಗೆಡದೆ ನಿರಂತರ ಕ್ರೀಡಾ ಅಭ್ಯಾಸದಲ್ಲಿ ಯುವ ಕ್ರೀಡಾಳುಗಳು ತೊಡಗಿಕೊಳ್ಳಬೇಕು ಎಂದರು. 
ಇದೇ ಸಂದರ್ಭ ಸ್ಟೀಡ್ಸ್ ಸಂಸ್ಥೆಯ ಚೈನ್ ರಹಿತ ಆಧುನಿಕ ಹೊಸ ವಿನ್ಯಾಸದ ಬೈಸಿಕಲ್  ಪ್ರಪ್ರಥಮವಾಗಿ ಉಡುಪಿಯಲ್ಲಿ ಕಾಪು ಪೊಲೀಸ್ ವೃತ್ತನಿರೀಕ್ಷಕ ಪ್ರಕಾಶ್ ಬಿಡುಗಡೆ ಮಾಡಿ, ಸೈಕಲ್ ರೈಡ್ ಮಾಡಿದರು. ಶಿರ್ವ ಶ್ಯಾಮ್‌ಸ್ಕೆರ್ ಮಾಲೀಕ ಸುಧೀರ್ ಶೆಟ್ಟಿ ಅಟ್ಟಿಂಜೆ, ಸಿಯೇಸ್ ಇಂಜಿನಿಯರಿಂಗ್  ಇಂಡಿಸ್ಟ್ರಿಸ್ ಕಂಪೆನಿಯ ಮಾರ್ಕೆಟಿಂಗ್ ಮುಖ್ಯಸ್ಥ ಎಸ್.ವೆಂಕಟೇಶಲು ಶೇಷ, ಕಿನ್ನಿಮೂಲ್ಕಿ ಆಲ್‌ರಾಯನ್ ಬಯೋಸೈಕಲ್ಸ್ ಸಂಸ್ಥೆಯ ಮಾಲೀಕ ಮೊಹಮ್ಮದ್ ಆರೀಫ್,
ಶಿರ್ವ ಹಿಂದೂ ಜೂನಿಯರ್ ಕಾಲೇಜು ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಕುತ್ಯಾರು ಪ್ರಸಾದ್ ಶೆಟ್ಟಿ,  ನಿವೃತ್ತ ಮುಖ್ಯೋಪಾಧ್ಯಾಯ ರಾಜಗೋಪಾಲ್ ಕೆ, ಎಂಎಸ್‌ಆರ್‌ಎಸ್ ಕಾಲೇಜಿನ ಪ್ರಾಂಶುಪಾಲೆ ಡಾ.ನಯನ ಪಕ್ಕಳ, ಶಿರ್ವ ಹಿಂದೂ ಜೂನಿಯರ್ ಕಾಲೇಜು ಮುಖ್ಯಸ್ಥ ಭಾಸ್ಕರ್, ಸಚ್ಚಿದಾನಂದ ಹೆಗ್ಡೆ ಶಿರ್ವ, ಶಿರ್ವ ಹೆಚ್.ಜೆ.ಸಿ. ಕ್ರಿಕೆಟ್ ಅಕಾಡೆಮಿ ಮುಖ್ಯ ತರಬೇತುದಾರ ಸದಾನಂದ ಶಿರ್ವ ಸ್ವಾಗತಿಸಿದರು.
ಪ್ರಸಾದ್ ಶೆಟ್ಟಿ ಶಿರ್ವ ಕಾರ್ಯಕ್ರಮ ನಿರೂಪಿಸಿದರು. ಕ್ರಿಕೆಟ್ ತರಬೇತುದಾರ ರೆನ್‌ಟ್ರವೆರ್ ಡಯಾಸ್ ವಂದಿಸಿದರು. ಕ್ರಿಕೆಟ್ ಕ್ರೀಡಾ ಕೂಟದಲ್ಲಿ ಕರಾವಳಿಯ ಮೂರು ಜಿಲ್ಲೆಗಳ 12ತಂಡಗಳು ಭಾಗವಹಿಸುತ್ತಿವೆ.
 
 
 
 
 
 
 
 
 
 
 

Leave a Reply