ಕಾರ್ಕಳ : ತಾಲೂಕು ಪಂಚಾಯತ್ ಸಭೆಗೆ ತಡವಾಗಿ ಬಂದ ಅಧಿಕಾರಿಯನ್ನು ಸಭೆಯ ಮಧ್ಯದಲ್ಲೇ ಹೊರಕ್ಕೆ ಕಳುಹಿಸಿದ ಘಟನೆ ಕಾರ್ಕಳದಲ್ಲಿ ನಡೆಯಿತು.
ಇಂಧನ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ಅಧ್ಯಕ್ಷತೆಯಲ್ಲಿ ಕಾರ್ಕಳ ಮತ್ತು ಹೆಬ್ರಿ ತಾಲೂಕು ಪಂಚಾಯತ್ ಸಭೆ ಕಾರ್ಕಳ ತಾ.ಪಂ ಸಾಮರ್ಥ್ಯ ಸೌಧದಲ್ಲಿ ಇಂದು ನಡೆಯಿತು.
ಸಭೆ ಆರಂಭದ ವೇಳೆ ಜಲಜೀವನ್ ಮಿಷನ್ ಯೋಜನೆಗೆ ಸಂಬಂಧಿಸಿ ಸಚಿವರು ಮಾಹಿತಿ ಬಯಸಿ ಇಲಾಖೆಯಿಂದ ಮಾಹಿತಿ ನೀಡುವಂತೆ ಕೇಳಿದರು. ಆ ವೇಳೆ ಸಭೆಯಲ್ಲಿ ಆ ಇಲಾಖೆಗೆ ಸಂಬಂಧಿಸಿದ ಅಧಿಕಾರಿಯೆ ಇರಲಿಲ್ಲ. ಅಧಿಕಾರಿ ಗೈರು ಹಾಜರಾದ ಕುರಿತು ಸಿಟ್ಟಾದ ಸಚಿವರು ಉಳಿದ ಇಲಾಖೆಮ ಮಾಹಿತಿ ಕೇಳಲಾರಂಭಿಸಿದರು.
ಸಭೆ ನಡೆದ ತುಂಬಾ ಹೊತ್ತಿನ ಬಳಿಕ ಜಲಜೀವನ್ ಇಲಾಖೆಗೆ ಸಂಬಂಧಿಸಿದ ಅಧಿಕಾರಿ ಸಭೆಗೆ ಆಗಮಿಸಿದ್ದರು. ಅವರು ಸಭಾಂಗಣದ ಒಳಗೆ ಬರುವುದನ್ನು ಕಂಡ ಸಚಿವರು ಸಭೆಯಿಂದ ಹೊರಹೋಗುವಂತೆ ಸೂಚನೆ ನೀಡಿದರು.
ಸಭೆ ಮುಗಿದು ಹೊರಬರುವ ವೇಳೆಗೆ ಹೊರಗೆ ನಿಂತಿದ್ದ ಅಧಿಕಾರಿಯನ್ನು ಸಚಿವರು ತರಾಟೆಗೆ ತೆಗೆದುಕೊಂಡರು. ಸಭೆಯಲ್ಲಿ ಎಲ್ಲ ಇಲಾಖೆಯ ಅಧಿಕಾರಿಗಳಿಗೆ ಬದ್ಧತೆಯಿಂದ ಕೆಲಸ ಮಾಡುವಂತೆ ಸನ್ನಡತೆಯ ಪಾಠವನ್ನು ಭೋದಿಸಿದರು.