ಉಡುಪಿ : ಆಚಾರ್ಯ ಮಧ್ವರ ಅವತಾರ ಭೂಮಿ ಪಾಜಕಕ್ಷೇತ್ರಕ್ಕೆ ಭಾವಿ ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಆಗಮಿಸಿ ಸಂಸ್ಥಾನ ಪೂಜೆ ಹಾಗೂ ಮಧ್ವಾಚಾರ್ಯರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಶ್ರೀ ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಗಂಧೋಪಚಾರ ಸಹಿತ ವಿಶೇಷವಾಗಿ ಸತ್ಕರಿಸಿ ಶಾಲು ಹಾಕಿ ಗೌರವಿಸಿದರು.
ಕಾಣಿಯೂರು ಮಠದ ದಿವಾನರಾದ ರಘುಪತಿ ಆಚಾರ್ಯ ಮಾಲಿಕೆ ಮಂಗಳಾರತಿ ಮಾಡಿದರು.
ಈ ಸಂದರ್ಭದಲ್ಲಿ ಕಾಣಿಯೂರು ಮಠದಿಂದ ಪ್ರಕಟಗೊಂಡ ‘ಮಹಾಭಾರತ ಸಮಗ್ರ ಪಾತ್ರ ಪರಿಚಯ’ ಕೃತಿಯ ಆಂಡ್ರಾಯ್ಡ್ ಮೊಬೈಲ್ ವರ್ಷನ್ನನ್ನು ಭಾವಿ ಪರ್ಯಾಯ ಶ್ರೀಗಳು ಲೋಕಾರ್ಪಣೆ ಮಾಡಿ, ಸಾರ್ವಕಾಲಿಕ ತತ್ತ್ವಗಳನ್ನು ಪ್ರತಿನಿಧಿಸುವ ಈ ಪಾತ್ರಗಳ ಸರಿಯಾದ ಅರಿವು ಎಲ್ಲರಿಗೂ ಉಂಟಾಗಲಿ ಎಂಬ ಸದಿಚ್ಛೆಯಿಂದ ಶ್ರೀ ವಿದ್ಯಾವಲ್ಲಭ ತೀರ್ಥಶ್ರೀಪಾದರು ಮಹತ್ವದ ಈ ಕಾರ್ಯವನ್ನು ನಡೆಸಿದ್ದಾರೆ.
ಪ್ಲೇಸ್ಟೋರ್ ನಲ್ಲಿ ಲಭ್ಯವಿರುವ ಈ ಆಪ್ ನ್ನು ಆಸ್ತಿಕ ಜನರು ಉಪಯೋಗಿಸಿಕೊಳ್ಳುವಂತಾಗಲಿ ಎಂದು ಅನುಗ್ರಹಿಸಿದರು.
ವಿದ್ವಾಂಸ ಬೆ ನಾ ವಿಜಯೇಂದ್ರ ಆಚಾರ್ಯ,ಗಣಪತಿ ಭಟ್ ಕಡಂದಲೆ, ಗೋಪಾಲ ಆಚಾರ್ಯ, ಆನಂದತೀರ್ಥ ಆಚಾರ್ಯ ಮಠದ, ಉತ್ತರಾದಿಮಠದ ಪ್ರಕಾಶ ಆಚಾರ್ಯ.ಪಾಜಕದ ಅರ್ಚಕ ಮಾಧವ ಉಪಾಧ್ಯಾಯ ಮೊದಲಾದವರು ಉಪಸ್ಥಿತರಿದ್ದರು.