ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ(KUWJ) ಚುನಾವಣೆ ಫಲಿತಾಂಶವನ್ನು ಅಧಿಕೃತವಾಗಿ (ಚುನಾವಣಾ ತಕರಾರು ಅರ್ಜಿಯನ್ನು ಹೈಕೋರ್ಟ್ ಸೋಮವಾರ ವಜಾ ಮಾಡಿತ್ತು)ಮಂಗಳವಾರ ಕೆಯುಡಬ್ಲ್ಯೂಜೆ ಸಭಾಂಗಣದಲ್ಲಿ ಮುಖ್ಯ ಚುನಾವಣಾಧಿಕಾರಿ ಸು.ತ.ರಾಮೇಗೌಡ ಮತ್ತು ಸಹಾಯಕ ಚುನಾವಣಾಧಿಕಾರಿ ಎನ್.ರವಿಕುಮಾರ್ ಘೋಷಣೆ ಮಾಡಿದರು.
ಕೆಯುಡಬ್ಲ್ಯೂಜೆ ಅಧ್ಯಕ್ಷರಾಗಿ ಶಿವಾನಂದ ತಗಡೂರು ಅವರು ಮೊದಲಿಗೆ ಅಧಿಕಾರ ಸ್ವೀಕಾರ ಮಾಡಿದರು. ಬಳಿಕ ಉಪಾಧ್ಯಕ್ಷರಾಗಿ ಪುಂಡಲೀಕ ಭೀ ಬಾಳೋಜಿ, ಭವಾನಿಸಿಂಗ್ ಠಾಕೂರ್, ಪ್ರಧಾನ ಕಾರ್ಯದರ್ಶಿಯಾಗಿ ಜಿ.ಸಿ.ಲೋಕೇಶ್, ಕಾರ್ಯದರ್ಶಿಗಳಾಗಿ ಮತ್ತಿಕೆರೆ ಜಯರಾಂ, ನಿಂಗಪ್ಪ ಚಾವಡಿ, ಸೋಮಶೇಖರ ಕೆರಗೋಡು ಅವರು ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಎಲ್ಲಾ ಸದಸ್ಯರ ಸಹಕಾರದಿಂದ ಚುನಾವಣೆ ಸುಸೂತ್ರವಾಗಿ ನಡೆಯಲು ಸಾಧ್ಯವಾಗಿದ್ದು, ಅದಕ್ಕಾಗಿ ಬೆಂಬಲ ಮತ್ತು ಸಹಕಾರ ಕೊಟ್ಟ ಎಲ್ಲರನ್ನೂ ಅಭಿನಂದಿಸಿದರು.
ಚುನಾವಣಾ ಪ್ರಕ್ರಿಯೆಯು ಕಾರ್ಮಿಕ ಇಲಾಖೆ ಮೇಲುಸ್ತುವಾರಿಯಲ್ಲಿ ಸಂಘದ ನಿಯಮಾವಳಿ ಪ್ರಕಾರ ಪಾರದರ್ಶಕವಾಗಿ ನಡೆದಿದೆ ಎನ್ನುವುದನ್ನು ಹೈಕೋರ್ಟ್ ಎತ್ತಿ ಹಿಡಿದಿರುವುದು ಸಂಘದ ಘನತೆಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ ಚುನಾವಣಾಧಿಕಾರಿಗಳಾದ ಸು.ತ.ರಾಮೇಗೌಡ ಮತ್ತು ಎನಗ.ರವಿಕುಮಾರ್ ಅವರನ್ನು ಸನ್ಮಾನಿಸಲಾಯಿತು.