ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ 60 ನೇ ವಾರ್ಷಿಕೋತ್ಸವದ ಆಚರಣೆ

ಮಣಿಪಾಲ, 19 ಮಾರ್ಚ್ 2022: ಕಸ್ತೂರ್ಬಾ ಆಸ್ಪತ್ರೆಯು ನಮ್ಮ ಸಮುದಾಯಕ್ಕೆ ಆರೋಗ್ಯ ಸೇವೆಯನ್ನು ಒದಗಿಸುವಲ್ಲಿ 60 ವರ್ಷಗಳನ್ನು ಪೂರೈಸುತ್ತಿದೆ. ಇದರ ಪ್ರಯುಕ್ತವಾಗಿ ಇಡೀ ವರ್ಷವು ರೋಗಿಯ ಕೇಂದ್ರೀಕೃತತೆಯು ಪ್ರಮುಖ ಅಂಶವಾಗಿದೆ, ಸಾರ್ವಜನಿಕರು, ಕಾರ್ಪೊರೇಟ್‌ಗಳು, ವೈದ್ಯರು ಮತ್ತು ಸಮಾಜಮುಖಿ ಚಟುವಟಿಕೆಗಳೊಂದಿಗೆ ತೊಡಗಿಸಿಕೊಳ್ಳುವುದು ಈ ಆಚರಣೆಯ ಭಾಗವಾಗಿರುತ್ತದೆ. “1962 ರಿಂದ ಯಾವಾಗಲೂ ರೋಗಿ ಮೊದಲು” ಎಂಬ ಘೋಷವಾಕ್ಯದೊಂದಿಗೆ ಕಾರ್ಯನಿರ್ವಹಿಸುತ್ತದೆ.
ಇದರ ಅಂಗವಾಗಿ ಮಣಿಪಾಲದ ಹೋಟೆಲ್ ಫಾರ್ಚೂನ್ ಇನ್ ವ್ಯಾಲಿ ವ್ಯೂನಲ್ಲಿ, ಉಡುಪಿ ಜಿಲ್ಲೆಯ ಹಿರಿಯ ನಿವೃತ್ತ ವೈದ್ಯರಿಗೆ ಡಾ ಟಿ ಎಂ ಎ ಪೈ ಆರೋಗ್ಯ ಸೇವಕ ಪ್ರಶಸ್ತಿಗಳನ್ನು ಮತ್ತು ವೈದ್ಯರ ಪ್ರಿವಿಲೇಜ್ ಕಾರ್ಡ್‌ನ ಉದ್ಘಾಟನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಶ್ರೀ ಕೂರ್ಮಾ ರಾವ್ ಮತ್ತು ಡಾ ಹೆಚ್ ಎಸ್ ಬಲ್ಲಾಳ್ ಅವರು ಜಂಟಿಯಾಗಿ ಪ್ರಿವಿಲೇಜ್ ಕಾರ್ಡ್ ಅನ್ನು ಬಿಡುಗಡೆ ಮಾಡಿದರು, ಇದನ್ನು ಎಲ್ಲಾ ರೆಫರ್ ಮಾಡುವ ವೈದ್ಯರಿಗೆ ನೀಡಲಾಗುತ್ತದೆ. ತಮ್ಮ ಉದ್ಘಾಟನಾ ಭಾಷಣದಲ್ಲಿ, ಶ್ರೀ ಕೂರ್ಮಾ ರಾವ್ ಎಂ, ಐಎಎಸ್, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲವು ಕರ್ನಾಟಕದಲ್ಲಿ ಮಾತ್ರವಲ್ಲದೆ ಜಾಗತಿಕವಾಗಿಯೂ ಕೈಗೆಟುಕುವ ದರದಲ್ಲಿ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸುತ್ತದೆ. ಅವರು ಕರ್ನಾಟಕ ಹಾಗೂ ನೆರೆಯ ಪ್ರದೇಶಗಳಿಗೆ ಗುಣಮಟ್ಟದ ಸೇವೆಗಳನ್ನು ಒದಗಿಸುವ ಪ್ರಯತ್ನವನ್ನು ಶ್ಲಾಘಿಸಿದರು. ಸಾಂಕ್ರಾಮಿಕ ರೋಗದ ಸಮಯದಲ್ಲಿ ಆರೋಗ್ಯ ಕಾರ್ಯಕರ್ತರ ಕೆಲಸಕ್ಕಾಗಿ ಅವರನ್ನು ಧನ್ಯವಾದ ತಿಳಿಸಿದರು. ಜಿಲ್ಲಾಡಳಿತದ ಎಲ್ಲಾ ಪ್ರಯತ್ನಗಳಲ್ಲಿ ಸದಾ ಬೆನ್ನೆಲುಬಾಗಿ ನಿಂತ ಮಾಹೆಯ ಆಡಳಿತ ಮಂಡಳಿಗೆ ಕೃತಜ್ಞತೆ ಸಲ್ಲಿಸಿದರು.

ನಂತರ ಉಡುಪಿ ಜಿಲ್ಲೆಯ ಐವರು ಹಿರಿಯ ಸಲಹೆಗಾರರಿಗೆ ಡಾ ಟಿ ಎಂ ಎ ಪೈ ಆರೋಗ್ಯ ಸೇವಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಕಳದಿಂದ ಡಾ.ಶೈಲಾ ಎಸ್.ನಾಯಕ್, ಹಾಗೂ ಡಾ.ಗಿರೀಶ್ ಶೆಣೈ, ಉಡುಪಿಯಿಂದ ಡಾ.ಕೃಷ್ಣದೇವ ಕಲ್ಕೂರ, ಮಂದಾರ್ತಿಯಿಂದ ಡಾ.ಎನ್.ಸುರೇಶ್ಚಂದ್ರ ಶೆಟ್ಟಿ, ಕುಂದಾಪುರದಿಂದ ಡಾ.ಅಂಪಾರ ವಸಂತಕುಮಾರ್ ಶೆಟ್ಟಿ ಪ್ರಶಸ್ತಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಹೆ ಮಣಿಪಾಲದ ಉಪಕುಲಪತಿಗಳಾದ ಲೆಫ್ಟಿನೆಂಟ್ ಜನರಲ್ (ಡಾ) ಎಂಡಿ ವೆಂಕಟೇಶ್, ನಮ್ಮ ಸಂಸ್ಥಾಪಕ ದಿವಂಗತ ಡಾ ಟಿಎಂಎ ಪೈ ಅವರ ಆಶಯಗಳನ್ನು ಸಾಧಿಸುವಲ್ಲಿ 60 ವರ್ಷಗಳ ಕಾಲ ಸಮಾಜಕ್ಕೆ ಸಲ್ಲಿಸಿದ ಅತ್ಯುತ್ತಮ ಸೇವೆ ಅದ್ಭುತ ಮತ್ತು ಅಸಾಧಾರಣವಾಗಿದೆ ಎಂದು ಹೇಳಿದರು. ಈ ಅವಿಶ್ವಸನೀಯ ಪ್ರಯಾಣದಲ್ಲಿ ಭಾಗಿಯಾದ ಎಲ್ಲರಿಗು ಧನ್ಯವಾದ ತಿಳಿಸಿದರು. ನಮ್ಮ ಆಸ್ಪತ್ರೆಯನ್ನು ಬೆಂಬಲಿಸುವ ವೈದ್ಯರ ಸೇವೆಗಾಗಿ ಕೃತಜ್ಞತಾಭಾವವಾಗಿ ಕಸ್ತೂರ್ಬಾ ಆಸ್ಪತ್ರೆಯು ಒಂದು ಸಣ್ಣ ಉಡುಗೊರೆಯಾಗಿ ಪ್ರಿವಿಲೇಜ್ ಕಾರ್ಡ್ ಅನ್ನು ಬಿಡುಗಡೆ ಮಾಡಿದೇ ಮತ್ತು ಈ ಪ್ರಿವಿಲೇಜ್ ಕಾರ್ಡ್‌ನೊಂದಿಗೆ ನಮ್ಮ ಆಸ್ಪತ್ರೆಗೆ ಭೇಟಿ ನೀಡಿದಾಗ ಕಾರ್ಡ್‌ದಾರರು ಮತ್ತು ಅವರ ಕುಟುಂಬವು ರಿಯಾಯಿತಿಯನ್ನು ಪಡೆಯುತ್ತದೆ ಎಂದು ತಿಳಿಸಿದರು.
ಡಾ.ಪಿಎಲ್‌ಎನ್‌ಜಿ ರಾವ್, ಸಹ-ಉಪ ಕುಲಪತಿ (ವೈದ್ಯಕೀಯ ಮತ್ತು ದಂತ ವಿಜ್ಞಾನ) MAHE, ಮಣಿಪಾಲ, ಆಸ್ಪತ್ರೆಯ 60ನೇ ವಾರ್ಷಿಕೋತ್ಸವದ ಅಂಗವಾಗಿ MAHE ಅವರು ಡಾ ಟಿಎಂಎ ಪೈ ಆರೋಗ್ಯ ಸೇವಕ ಪ್ರಶಸ್ತಿಯನ್ನು ಮೊದಲ ಬಾರಿಗೆ ಆಯೋಜಿಸಿದೆ ಮತ್ತು ಸ್ವೀಕರಿಸಿದವರನ್ನು ಅಭಿನಂದಿಸಿದರು. ಗ್ರಾಮೀಣ ಭಾಗದಲ್ಲಿ ಶಿಬಿರಗಳನ್ನು ರಚಿಸಿ ತೃತೀಯ ಹಂತದ ಚಿಕಿತ್ಸೆ ನೀಡುವ ಮೂಲಕ ಆರೋಗ್ಯ ಸೇವೆಯನ್ನು ಜನಸಾಮಾನ್ಯರಿಗೆ ತಲುಪಿಸುವುದು ಮಣಿಪಾಲ ಸಂಸ್ಥೆಯ ಉದ್ದೇಶವಾಗಿದೆ ಎಂದು ವಿವರಿಸಿದರು. ರೋಗಿಗಳು ಕುಟುಂಬ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಾರೆ ಮತ್ತು ಅಗತ್ಯವಿದ್ದಲ್ಲಿ ಅವರನ್ನು ಹತ್ತಿರದ ಆಸ್ಪತ್ರೆಗೆ ಕಳುಹಿಸುತ್ತಾರೆ, ಅಂದರೆ ತೃತೀಯ ಆರೈಕೆಯ ಆಸ್ಪತ್ರೆ ಮತ್ತು ಅಗತ್ಯವಿರುವ ಜನರ ನಡುವೆ ಪ್ರಮುಖ ಕೊಂಡಿಯಾಗಿ ಸೇವೆ ಸಲ್ಲಿಸುತ್ತಿರುವ ಕುಟುಂಬ ವೈದ್ಯರ ಶ್ರಮವನ್ನು ಶ್ಲಾಘಿಸಿದರು.

ಮಾಹೆ ಯ ಸಹ ಕುಲಪತಿ ಡಾ. ಹೆಚ್ ಎಸ್ ಬಲ್ಲಾಳ್ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಸಂಸ್ಥಾಪಕ ದಿವಂಗತ ಡಾ.ಟಿ.ಎಂ.ಎ.ಪೈ ಅವರು ದಾರ್ಶನಿಕ ವ್ಯಕ್ತಿಯಾಗಿದ್ದರು ಮತ್ತು 1962ರಲ್ಲಿ ಕಸ್ತೂರಬಾ ಆಸ್ಪತ್ರೆ ಮಣಿಪಾಲವನ್ನು ಸ್ಥಾಪಿಸಿದರು ಎಂದು ಹೇಳಿದರು. ಇದು ತೃತೀಯ ಆರೈಕೆ ಆಸ್ಪತ್ರೆಯಾಗಿದ್ದು ಅದು ಕರ್ನಾಟಕದ ಹಾಗು ನೆರೆಯ ರಾಜ್ಯಗಳ ಜನರ ಆರೋಗ್ಯ ಅಗತ್ಯತೆಗಳನ್ನು ಪೂರೈಸುತ್ತದೆ ಎಂದರು. ಮತ್ತು ಹಲವು ದಶಕಗಳಿಂದ ಉತ್ತಮ ಗುಣಮಟ್ಟದ ಆರೈಕೆಯನ್ನು ನೀಡುತ್ತಿರುವುದಕ್ಕಾಗಿ ವೈದ್ಯಕೀಯ ಸಿಬ್ಬಂದಿಯನ್ನು ಹೊಗಳಿದರು.
ಶ್ರೀ ಸಿ.ಜಿ.ಮುತ್ತನ, ಪ್ರಾದೇಶಿಕ ಕಾರ್ಯ ನಿರ್ವಹಣಾಧಿಕಾರಿ, ಪ್ರಿವಿಲೇಜ್ ಕಾರ್ಡ್‌ನ ಅವಲೋಕನವನ್ನು ನೀಡಿದರು. ಕೆಎಂಸಿ ಡೀನ್ ಡಾ ಶರತ್ ಕುಮಾರ್ ಸ್ವಾಗತಿಸಿ, ವೈದ್ಯಕೀಯ ಅಧೀಕ್ಷಕ ಡಾ ಅವಿನಾಶ್ ಶೆಟ್ಟಿ ವಂದಿಸಿದರು.
ಈ ಸಂದರ್ಭದಲ್ಲಿ ಮಾಹೆ ಮಣಿಪಾಲದ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ಮನರಂಜನಾ ಕಾರ್ಯಕ್ರಮ ನಡೆಯಿತು.

 
 
 
 
 
 
 
 
 
 
 

Leave a Reply