ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮೊದಲು ಬಿಜೆಪಿ ಪಕ್ಷವು ಬಡ ಗೃಹಿಣಿಯರ ಕಣ್ಣೀರನ್ನು ಒರೆಸಲು ಕೇಂದ್ರದಲ್ಲಿ ಬಿಜೆಪಿ ಯನ್ನು ಅಧಿಕಾರಕ್ಕೆ ತನ್ನಿ.ಮೋದಿಯವರು ಪ್ರಧಾನಿಯಾದರೆ ಸೌದೆ ಒಲೆ ಬೆಂಕಿಯನ್ನು ಊದಿ ಬಡ ಮಹಿಳೆಯರು ಕಣ್ಣೀರು ಸುರಿಸುವುದು ನಿಲ್ಲುತ್ತದೆ.ಹೊಗೆ ರಹಿತ ಬದುಕು ಅವರದಾಗುತ್ತದೆ ಎಂದೆಲ್ಲಾ ದೊಡ್ಡದಾಗಿ ಆಶ್ವಾಸನೆ ನೀಡಿ,ಬಣ್ಣದ ಮಾತುಗಳ ಮೂಲಕ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಅಂದು ಒಲೆ ಉರಿದಾಗ ಮಾತ್ರ ಬರುತ್ತಿದ್ದ ಕಣ್ಣೀರನ್ನು ಇಂದು ನಿರಂತರ ಸುರಿಯುವಂತೆ ಮಾಡಿದೆ.ಎಂದು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಗೀತಾ ವಾಗ್ಳೆ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಅಧಿಕಾರಕ್ಕೆ ಬಂದಂದಿನಿಂದ ಅಡುಗೆ ಅನಿಲದ ಬೆಲೆಯನ್ನು ನಿರಂತರವಾಗಿ ಏರಿಸುತ್ತಿರುವ ಕೇಂದ್ರ ಸರ್ಕಾರವು ಬಡ ಗೃಹಿಣಿಯರಲ್ಲಿ ರಕ್ತ ಕಣ್ಣೀರನ್ನು ಬರಿಸುತ್ತಿದೆ. ಮೊದಲೇ ದಿನಬಳಕೆಯ ಬಹುತೇಕ ವಸ್ತುಗಳ ಬೆಲೆಗಳು ಗಗನಕ್ಕೆ ತಲುಪಿರುವಾಗ ಈ ಬಿಸಿಯನ್ನು ಬಡ ಹಾಗೂ ಮಧ್ಯಮ ವರ್ಗದ ಮಹಿಳೆಯರು ಸಹಿಸುವುದಾದರೂ ಹೇಗೆ? ಎಂದವರು ಪ್ರಶ್ನಿಸಿದ್ದಾರೆ. ಅಚ್ಛೇ ದಿನ್ ತರುತ್ತೇವೆ ಎಂಬ ಬಿಜೆಪಿಯವರು ನೀಡಿದ ಪೊಳ್ಳು ಭರವಸೆಯನ್ನೇ ಸತ್ಯವೆಂದು ಭಾವಿಸಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಮತದಾರರ ಬದುಕನ್ನೇ ದುಸ್ತರ ಮಾಡಿದ ಬಿಜೆಪಿಯನ್ನು ದೇವರೂ ಕ್ಷಮಿಸಲಾರ.ಬಡವರ ಯಾವ ಆಕ್ರೋಶ, ಆಕ್ರಂದನ ಕ್ಕೂ ಕಿವಿಗೊಡದ ಕೇಂದ್ರಸರ್ಕಾರ ಮತ್ತು ಬಿಜೆಪಿ ಪಕ್ಷವು ಯಾವ ರಾಜ್ಯದಲ್ಲಿ ಯಾವ ಸರ್ಕಾರವನ್ನು ಆಪರೇಷನ್ ಕಮಲ ಮಾಡಿ ಬೀಳಿಸಬೇಕೆನ್ನುವ ಚಿಂತನೆಯಲ್ಲೇ ತೊಡಗಿರುವುದು ದೊಡ್ಡ ದುರಂತ.ಎಂದವರು ಹೇಳಿದ್ದಾರೆ.ಸನ್ಮಾನ್ಯ ನರೇಂದ್ರ ಮೋದಿಯವರೇ,ನಮಗೆ ನಿಮ್ಮ ಅಚ್ಛೇ ದಿನ್ ಬೇಡ.ನಮಗೆ ಆ ಮೊದಲ ದಿನಗಳೇ ಸಾಕು..ಎರಡು ಹೊತ್ತಿನ ಊಟವನ್ನು ಸುಲಭವಾಗಿ ಮಾಡುವಷ್ಟು ಸೌಲಭ್ಯ ಒದಗಿಸಿ.ದಿನ ಬಳಕೆಯ ವಸ್ತುಗಳ,ಹಾಗೂ ಅಡುಗೆ ಅನಿಲದ ಬೆಲೆಯನ್ನು ಇಳಿಸಿ.ಬಡವರ ಬದುಕಿನೊಂದಿಗೆ ಚೆಲ್ಲಾಟವಾಡುವ ನಿಮ್ಮ ಕಾಯಕವನ್ನು ನಿಲ್ಲಿಸಿ. ಇನ್ನಾದರೂ ಎಚ್ಚೆತ್ತುಕೊಂಡು ಜನಸಾಮಾನ್ಯರ ಕಷ್ಟವನ್ನು ಅರಿಯುವ ಕನಿಷ್ಠ ಪ್ರಯತ್ನವನ್ನಾದರೂ ಮಾಡಿ.ಗ್ಯಾಸ್ ಬೆಲೆಯನ್ನು ಇಳಿಸುವ ಮೂಲಕ ಜನ ಸಾಮಾನ್ಯರನ್ನು ಬದುಕಲು ಬಿಡಿ.ಎಂದು ಗೀತಾ ವಾಗ್ಳೆ ಹೇಳಿದ್ದಾರೆ.