ಸುಳ್ಳು ಕೇಸ್ ದಾಖಲಿಸಿ ವ್ಯಕ್ತಿಯ ಎನ್ ಕೌಂಟರ್ ಗೆ ಯತ್ನಿಸಿದ್ದ ಎಸ್ಸೈ

ಉಡುಪಿ: ಉಡುಪಿಯ ಗಂಗೊಳ್ಳಿಯಲ್ಲಿ ಪೊಲೀಸ್ ದೌರ್ಜನ್ಯದ ಘಟನೆಯೊಂದು ವರದಿಯಾಗಿದೆ. ನ್ಯಾಯಕ್ಕಾಗಿ ಸಂತ್ರಸ್ತ ಕುಟುಂಬ ಆಗ್ರಹಿಸಿದೆ. ಪೊಲೀಸ್ ಅಧಿಕಾರಿಯೋರ್ವ ದನ ಕಳ್ಳತನದ ಸುಳ್ಳು ಕೇಸ್ ಸೃಷ್ಟಿಸಿ ಸಂಘಪರಿವಾರದ ಜೊತೆಗೆ ಸೇರಿ ಅಮಾಯಕರನ್ನು ಸಿಲುಕಿಸಲು ಯತ್ನಿಸಿರುವ ಬಗ್ಗೆ ಆರೋಪಿಸಲಾಗಿದೆ.

ಗಂಗೊಳ್ಳಿಯ ಎಸ್ಸೈ ನಂಜ ನಾಯ್ಕ ವಿರುದ್ಧ ಹೈನುಗಾರಿಕೆ ಹಾಗೂ ಇಲೆಕ್ಟ್ರಿಶಿಯನ್ ವೃತ್ತಿ ಮಾಡುತ್ತಿರುವ ತ್ರಾಸಿಯ ಫ್ರಾನ್ಸಿಸ್ ಅಲ್ಮೇಡಾ ಗಂಭೀರವಾದಂತಹ ಆರೋಪವನ್ನು ಮಾಡಿದ್ದಾರೆ. ಅಲ್ಮೇಡಾ, ಗೆಳೆಯ ಮುಹಮ್ಮದ್ ಇಬ್ರಾಹಿಂಗೆ ಉಚಿತವಾಗಿ ಸಾಕಲು ನೀಡಿದ ದನವನ್ನು ಆತ ಕದ್ದುಕೊಂಡು ಹೋಗಿರುವುದಾಗಿ ಹೇಳಿಕೆ ನೀಡುವಂತೆ ನಿರಂತರ ಕಿರುಕುಳ ನೀಡಿದ್ದಲ್ಲದೆ, ಇದಕ್ಕೆ ಒಪ್ಪದಿದ್ದ ಅವರ ಮೇಲೆ ಸುಳ್ಳು ಕೇಸು ದಾಖಲಿಸಿ ಜೈಲಿಗೆ ಹಾಕಿದ್ದಾರೆಮ ಇದರಿಂದಾಗಿ ಎಸ್ಸೈ ನಂಜ ನಾಯ್ಕಿ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಹೇಳಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿದ ಸಂತ್ರಸ್ತ ಅಲ್ಮೇಡಾ, ಇಬ್ರಾಹಿಂಗೆ ಕಳೆದ ಡಿಸೆಂಬರ್ ತಿಂಗಳಲ್ಲಿ ನಾನು ಸಾಕಲು ದನದ ಕರುವನ್ನು ನೀಡಿದ್ದೆ. ಅವರು ಅದನ್ನು ಹಟ್ಟಿ ರಚಿಸಿ ಸಾಕುತ್ತಿದ್ದರು. ಮೂರು ದಿನಗಳ ಬಳಿಕ ಅಂದರೆ ಡಿ.26ರಂದು ಗಂಗೊಳ್ಳಿ ಪೊಲೀಸ್ ಠಾಣೆಯ ಎಸ್ಸೈ ನಂಜ ನಾಯ್ಕ ಹಾಗೂ ಸಿಬ್ಬಂದಿ, ಇಬ್ರಾಹಿಂ ಮನೆಗೆ ಹೋಗಿ, ಕರು ಬಗ್ಗೆ ವಿಚಾರಿಸಿದ್ದರು. ಬಳಿಕ ಸಂಜೆ ಇಬ್ರಾಹಿಂ ಮತ್ತು ನನ್ನನು ಪೊಲೀಸರು ಠಾಣೆಗೆ ಕರೆಸಿ ವಿಚಾರಿಸಿದ್ದಾರೆ.

ನನ್ನ ಹತ್ತಿರ ಕರು ನೀಡಿರುವ ಬಗ್ಗೆ ಪೊಲೀಸರು ಪ್ರಶ್ನಿಸಿದ್ದು, ಇಬ್ರಾಹಿಂಗೆ ನಾನೇ ಉಚಿತವಾಗಿ ನೀಡಿದ್ದೇನೆ ಎಂದು ಹೇಳಿದೆ. ಬಳಿಕ ರಾತ್ರಿ 11 ಗಂಟೆ ವೇಳೆ ಇಬ್ರಾಹಿಂ ಮನೆಗೆ ಪೊಲೀಸರು ಹೋಗಿ ಅಲ್ಲಿದ್ದ ಕರುವನ್ನು ಗಾಡಿಯಲ್ಲಿ ಹಾಕಿ ಠಾಣೆಗೆ ತಂದರು. ಬಳಿಕ ನನ್ನನ್ನು ರಾತ್ರಿ 2 ಗಂಟೆಗೆ ಮನೆಗೆ ಕಳುಹಿಸಿದರು.

ಮರುದಿನ ಮಂಕಿ ಕ್ರಾಸ್ ಬಳಿ ಇಬ್ರಾಹಿಂನನ್ನು ಕರೆದೊಯ್ದ ಪೊಲೀಸರು, ಅವರಿಗೆ ಜೀಪಿನಿಂದ ಇಳಿದು ಓಡಲು ಸೂಚಿಸಿದರು. ರಿವಾಲ್ವರನ್ನು ಅವರ ತಲೆಗೆ ಇಟ್ಟು ಓಡುವಂತೆ ಗದರಿಸಿ ನಕಲಿ ಎನ್‌ಕೌಂಟರ್‌ಗೆ ಯತ್ನಿಸಿದರು. ಆದರೆ ಅವರು ಓಡಿಲ್ಲ ಎಂದು ಫ್ರಾನ್ಸಿಸ್ ತಿಳಿಸಿದ್ದಾರೆ. ಠಾಣೆಯಲ್ಲಿದ್ದ ಕರುವನ್ನು ಹಿಡಿದುಕೊಂಡು ಬರುವಂತೆ ನನ್ನಲ್ಲಿ ಪೊಲೀಸರು ತಿಳಿಸಿದರು. ನಾನು ಕರುವಿನೊಂದಿಗೆ ಹೋದಾಗ, ಬಜರಂಗದಳದ ಕಾರ್ಯಕರ್ತರು ಇದ್ದರು. ಅಲ್ಲಿ ಕರುವಿನ ಫೋಟೋವನ್ನು ತೆಗೆದು ಈ ಕರುವನ್ನು ಇಬ್ರಾಹಿಂ ಕದ್ದು ತಂದಿರುವ ರೀತಿಯಲ್ಲಿ ಬಿಂಬಿಸಿದರು. ಬಳಿಕ ಅವರನ್ನು ಪೊಲೀಸರು ಬಂಧಿಸಿದ್ದರು ಎಂದು ಹೇಳಿದ್ದಾರೆ.

 
 
 
 
 
 
 
 
 
 
 

Leave a Reply