ಆದಿತ್ಯ ಟ್ರಸ್ಟ್ (ರಿ.)ನಕ್ರೆ ಕಾರ್ಕಳ, ಪ್ರಸಾದ ನೇತ್ರಾಲಯ ಉಡುಪಿ, ಪ್ರಾಥಮಿಕ ಅರೋಗ್ಯ ಕೇಂದ್ರ ಕುಕ್ಕುಂದೂರು, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಇವರ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣಾ ಮತ್ತು ಪೊರೆ ಶಸ್ತ್ರ ಚಿಕಿತ್ಸೆ ಶಿಬಿರವು ಕಾರ್ಕಳ ಕುಕ್ಕುಂದೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಿನಾಂಕ 23-08-2022ರಂದು ಜರಗಿತು. ಶಿಬಿರವನ್ನು ಕುಕ್ಕುಂದೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಶಿಮಣಿ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ಇವರು ಮಾತನಾಡುತ್ತ, ಮಾನವ ದೇಹದ ಪಂಚೇದ್ರಿಯಗಳಲ್ಲಿ ಕಣ್ಣು ಮುಖ್ಯವಾದ ಅಂಗ. ಕಣ್ಣಿನ ರಕ್ಷಣೆ, ಆರೈಕೆ ಪ್ರತಿಯೊಬ್ಬನ ಕರ್ತವ್ಯವಾಗಿದೆ. ಶಿಬಿರದ ಪ್ರಯೋಜನವನ್ನು ಪ್ರತಿಯೊಬ್ಬರೂ ಪಡೆದುಕೊಂಡು ತಮ್ಮ ಬಾಳಿನಲ್ಲಿ ಬೆಳಕನ್ನು ಬೆಳಗುವಂತಾಗಲಿ ಎಂದು ಹಾರೈಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಕುಕ್ಕುಂದೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀ ಅನಿಲ್ ಪೂಜಾರಿ ಇವರು ಮಾತನಾಡುತ್ತ, ಆದಿತ್ಯ ಟ್ರಸ್ಟ್ ವಿಕಲ ಚೇತನರಿಗಾಗಿ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಶಿಬಿರಗಳನ್ನು ಏರ್ಪಡಿಸುವುದು ಉತ್ತಮ ಕಾರ್ಯ ಎಂದರು. ಕುಕ್ಕುಂದೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ! ಪ್ರತೀಕ್ಷಾ ಇವರು ಮಾತನಾಡುತ್ತ, ಆರೋಗ್ಯ ರಕ್ಷಣೆ ಮಾಡಿಕೊಳ್ಳುವುದು ಪ್ರತಿಯೊಬ್ಬನ ಆದ್ಯ ಕರ್ತವ್ಯವಾಗಿದೆ. ಇದಕ್ಕಾಗಿ ಕರ್ನಾಟಕ ಸರಕಾರವು ಗ್ರಾಮೀಣ ಪ್ರದೇಶದ ಜನರಿಗಾಗಿ ಔಷಧ, ಚಿಕಿತ್ಸೆಯನ್ನು ದೊರಕಿಸಿ ಕೊಡುವಲ್ಲಿ ಉತ್ತಮವಾದ ಕೆಲಸವನ್ನು ಮಾಡುತ್ತಿದೆ. ಪ್ರತಿಯೊಬ್ಬರೂ ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದರು. ಡಾ!ಅರ್ಚನಾ, ಪ್ರಸಾದ ನೇತ್ರಾಲಯದ ನೇತ್ರ ವೈದ್ಯೆ ಇವರು ಕಣ್ಣಿನ ಆರೈಕೆ ಬಗ್ಗೆ ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳ ಸಮಗ್ರ ಮಾಹಿತಿ ನೀಡಿದರು. ಆದಿತ್ಯ ಟ್ರಸ್ಟಿನ ಅಧ್ಯಕ್ಷ ಶ್ರೀ ಮಂಜುನಾಥ ತೆಂಕಿಲ್ಲಾಯ ಇವರು ಮಾತನಾಡುತ್ತ, ವಿಕಲ ಚೇತನರ ಅಧಿನಿಯಮದಲ್ಲಿ ಇಪ್ಪತೊಂದು ಬಗೆಯ ವಿಕಲತೆಯನ್ನು ವಿಂಗಡಿಸಿದ್ದಾರೆ. ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಟ್ರಸ್ಟ್ ಶ್ರಮಿಸುತ್ತಿದೆ, ಇದಕ್ಕಾಗಿ ಗ್ರಾಮ ಪಂಚಾಯತ್ ಗಳ ಸಹಕಾರ ಅತೀ ಅಗತ್ಯ ಎಂದರು. ಕಳೆದ ಅವಧಿಯಲ್ಲಿ ನೇತ್ರ ಚಿಕಿತ್ಸೆ ಶಿಬಿರಕ್ಕೆ ಸಂಪೂರ್ಣ ಸಹಕಾರ ನೀಡಿದ ಕುಕ್ಕುಂದೂರು ಗ್ರಾಮ ಪಂಚಾಯತ್ ಸದಸ್ಯ ಶ್ರೀ ಪ್ರಾಣೇಶ್ ಶೆಟ್ಟಿ ಇವರನ್ನು ಆದಿತ್ಯ ಟ್ರಸ್ಟಿನ ವತಿಯಿಂದ ಶಾಲು, ಫಲ ಪುಷ್ಪಗಳನ್ನಿತ್ತು ಗೌರವಿಸಲಾಯಿತು. ಶ್ರೀ ರಮೇಶ್ ಇವರು ಕಾರ್ಯಕ್ರಮ ನಿರ್ವಹಿಸಿ ಕೊನೆಯಲ್ಲಿ ಧನ್ಯವಾದವಿತ್ತರು.