ಉಡುಪಿ: ವಿಶಾಲ ಗಾಣಿಗ(35) ರವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು, ಆಕೆಯ ಪತಿ ಬೀಜೂರು ಚಾರುಕೊಡ್ಲು ನಿವಾಸಿ ರಾಮಕೃಷ್ಣ ಗಾಣಿಗರವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪತ್ನಿಯ ಕೊಲೆಯ ನಂತರ ದುಬೈಯಿಂದ ಊರಿಗೆ ಮರಳಿದ್ದ ಪತಿ ರಾಮಕೃಷ್ಣ ಅವರನ್ನು ಪೊಲೀಸರು ಈಗಾಗಲೇ ಎರಡು ಮೂರು ಬಾರಿ ವಿಚಾರಣೆ ನಡೆಸಿದ್ದರು. ಇದೀಗ ಸಂಶಯದ ಮೇರೆಗೆ ಕೆಲವೊಂದು ಮಾಹಿತಿಗಾಗಿ ರಾಮಕೃಷ್ಣ ಅವರನ್ನು ಪೊಲೀಸರು ಮತ್ತೆ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.
ರಾಮಕೃಷ್ಣ ಅವರೇ ಸುಪಾರಿ ನೀಡಿ ವಿಶಾಲ ಗಾಣಿಗ ಅವರನ್ನು ಕೊಲೆಗೈದಿರುವ ಬಗ್ಗೆ ಬಲವಾದ ಸಂಶಯ ವ್ಯಕ್ತವಾಗಿದೆ. ಈ ಸಂಬಂಧ ಇಬ್ಬರು ಸುಪಾರಿ ಕಿಲ್ಲರ್ಗಳನ್ನು ಪೊಲೀಸರು ಹೊರ ರಾಜ್ಯದಲ್ಲಿ ವಶಕ್ಕೆ ಪಡೆದಿದ್ದಾರೆಂದು ತಿಳಿದು ಬಂದಿದೆ.
ಪೊಲೀಸರಿಂದ ತನಿಖೆ ಮುಂದುವರೆದಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರ ಬೇಕಾಗಿದೆ. ಪ್ರಕರಣ ಇನ್ನೂ ವಿಚಾರಣೆಯ ಹಂತದಲ್ಲಿರುವ ಕಾರಣ ನಾಳೆ ಪತ್ರಿಕಾ ಹೇಳಿಕೆ ನೀಡುವುದಾಗಿ ಎಸ್ ಪಿ ವಿಷ್ಣುವರ್ಧನ್ ತಿಳಿಸಿದ್ದಾರೆ.