ಉಡುಪಿ: ಯುವಕನ ಆತ್ಮಹತ್ಯೆ ಪ್ರಕರಣಕ್ಕೆ ತಿರುವು!

ಕುಕ್ಕೆಹಳ್ಳಿಯ ಯುವಕನೋರ್ವನ ಆತ್ಮಹತ್ಯೆ ಪ್ರಕರಣ ತಿರುವು ಪಡೆದುಕೊಂಡಿದ್ದು ಸಂಬಂಧಿಕನಿಂದಲೇ ಹಣಕ್ಕಾಗಿ ಆತ್ಮಹತ್ಯೆ ನಾಟಕವಾಡುವಂತೆ ಬಿಂಬಿಸಿ ಹತ್ಯೆಗೈದರುವುದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ. 

ಕಳೆದ ಸೆ.14 ರಂದು ಕುಕ್ಕೆಹಳ್ಳಿಯ ಕೃತಿಕ್ J.ಸಾಲಿಯಾನ್ ಮೃತದೇಹ ತನ್ನ ಮನೆಯ ಅನತಿ ದೂರದ ಹಾಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸಾವಿನ ಬಗ್ಗೆ ಸಂಶಯವ್ಯಕ್ತಪಡಿಸಿ ಕೃತಿಕ್ ಅತ್ತೆ ಶೈಲಜಾ ಕರ್ಕೇರಾ ಹಿರಿಯಡ್ಕ ಠಾಣೆಗೆ ದೂರು ನೀಡಿದ್ದರು.

ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆ ನಡೆಸಿದಾಗ ಕೃತಿಕ್ ನ ದೂರದ ಸಂಬಂಧಿ ಬ್ರಹ್ಮಾವರದ ಹೋಟೇಲ್ ಉದ್ಯಮಿ ದಿನೇಶ್ ಸಫಲಿಗಾ ಕೃತಿಕ್ ನನ್ನು ಹತ್ಯೆಗೈದಿರುವುದು ಬೆಳಕಿಗೆ ಬಂದಿದೆ.

ಈ ಬಗ್ಗೆ ದಿನೇಶ್ ಸಫಲಿಗಾ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ದಿನೇಶನು ಕೃತಿಕ್ ನಿಂದ 9 ಲಕ್ಷ ಹಣದ ಪಡೆದಿದ್ದ. ಈ ನಡುವೆ ಹಣವನ್ನು ವಾಪಸ್ಸು ನೀಡಬೇಕಾಗುತ್ತದೆ ಎಂಬ ಉದ್ದೇಶದಿಂದ  ದಿನೇಶ್ ಕೃತಿಕ್ ನನ್ನು ಕೊಲೆ ಮಾಡುವ ಉದ್ದೇಶದಿಂದ ಮಹಿಳೆಯನ್ನು ಪರಿಚಯಿಸುವುದಾಗಿ ಕೃತಿಕ್ ನನ್ನು ಹಾಡಿಗೆ ಕರೆದುಕೊಂಡು ಹೋಗಿ ಮಹಿಳೆಯೊಂದಿಗೆ ವಿಡಿಯೋ ಕಾಲ್ ನಲ್ಲಿ ಆತ್ಮಹತ್ಯೆ ನಾಟಕವಾಡುವ ನೆಪದಲ್ಲಿ ಕೃತಿಕ್ ನ್ನು ಹತ್ಯೆ ಗೈದಿದ್ದಾನೆ ಎಂದು ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಹೆಚ್ಚಿನ ಮಾಹಿತಿ ಪೊಲೀಸ್ ತನಿಖೆಯಿಂದ ಇನ್ನಷ್ಟೇ ಲಭ್ಯವಾಗಬೇಕಿದ್ದು, ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 
 
 
 
 
 
 
 
 
 
 

Leave a Reply