ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ವಾರ್ಷಿಕ ಪರೀಕ್ಷೆ ಆರಂಭದ ದಿನವೇ ಪರೀಕ್ಷೆಗೆ ತೆರಳದೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲ್ಲಡ್ಕ ಬಾಳ್ತಿಲದಲ್ಲಿ ನಡೆದಿದೆ.
ಕಡಬ ರಾಮಕುಂಜ ಶಾಲೆಯಲ್ಲಿ ಪ್ರಿನ್ಸಿಪಾಲ್ ಆಗಿರುವ ಬಾಳ್ತಿಲ ಚಂದ್ರಶೇಖರ ಗೌಡ ಮತ್ತು ಶಿಕ್ಷಕಿ ಸೌಮ್ಯಾ ದಂಪತಿಯ ಪುತ್ರಿ ವೈಷ್ಣವಿ ಕೆ.ಸಿ.(17) ಆತ್ಮಹತ್ಯೆ ಮಾಡಿಕೊಂಡ ಬಾಲಕಿ.
ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದ ವೈಷ್ಣವಿ ಇಂದು ಬೆಳಗ್ಗೆ ಪರೀಕ್ಷೆಗೆಂದು ಕಲ್ಲಡ್ಕದ ಕಾಲೇಜಿಗೆ ತೆರಳಿದ್ದಳು. ತಾಯಿ ಅದೇ ಶಾಲೆಯಲ್ಲಿ ಶಿಕ್ಷಕಿಯಾಗಿದ್ದು ಶಾಲೆಯಿಂದ ಬೆಳಗ್ಗೆ 9.30ರ ಸುಮಾರಿಗೆ ಏನೋ ಮರೆತು ಬಂದಿದ್ದೇನೆಂದು ಹೇಳಿ ಮನೆಗೆ ಹಿಂತಿರುಗಿದ್ದಳು. ಮಗಳು ಶಾಲೆಯಿಂದ ಮನೆಗೆ ತೆರಳಿದ ಬಗ್ಗೆ ತಿಳಿದ ತಾಯಿ ಪಕ್ಕದ ಮನೆಯವರಿಗೆ ತಿಳಿಸಿದ್ದು ಒಮ್ಮೆ ನೋಡಿ ಬರುವಂತೆ ಹೇಳಿದ್ದರು.
ಪಕ್ಕದ ಮನೆಯ ಮಹಿಳೆ ಮನೆ ಕಡೆ ನೋಡಿದಾಗ ಬಾಗಿಲು ಹಾಕಿದ ರೀತಿಯಲ್ಲೇ ಇತ್ತು. ಬೀಗ ಹಾಕಿದ್ದರಿಂದ ತಾಯಿಗೆ ತಿಳಿಸಿದ್ದು ಆನಂತರ ಅವರು ಬಂದು ನೋಡಿದಾಗ ಮಗಳು ವೈಷ್ಣವಿ ಮನೆ ಹಾಲ್ ನಲ್ಲೇ ಫ್ಯಾನಿಗೆ ನೇಣು ಬಿಗಿದುಕೊಂಡಿರುವುದು ಪತ್ತೆಯಾಗಿದೆ. ಮಗಳಿಗೆ ಬೇರೆ ಯಾವುದೇ ಸಮಸ್ಯೆ ಇರಲಿಲ್ಲ. ಯಾಕಾಗಿ ಈ ಕೃತ್ಯ ಎಸಗಿದ್ದಾರೆಂದು ತಿಳಿದಿಲ್ಲ ಎಂದು ತಾಯಿ ಅಳುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ದಂಪತಿಗೆ ಮೂವರು ಹೆಣ್ಮಕ್ಕಳಿದ್ದು ಹಿರಿಯಾಕೆ ವೈಷ್ಣವಿ.