ಸಾವಿನಲ್ಲೂ ಒಂದಾದ ಭಗ್ನಪ್ರೇಮಿಗಳು~ ಪ್ರಿಯತಮೆಯನ್ನು ಚೂರಿ ಇರಿದು ಕೊಂದ ಪ್ರಿಯಕರ ಸಾವು.

ಉಡುಪಿ: ಪ್ರೇಯಸಿಗೆ ಚೂರಿ ಇರಿದು ಬಳಿಕ ತಾನೂ ಕೂಡ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಮುಂದಾಗಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಬೆಳಿಗ್ಗೆ ಮೃತಪಟ್ಟಿದ್ದಾನೆ. ಮೃತಪಟ್ಟ ಯುವಕನನ್ನು ಅಲೆವೂರು ರಾಂಪುರ ನಿವಾಸಿ ಸಂದೇಶ್ ಕುಲಾಲ್(26) ಎಂದು ಗುರುತಿಸಲಾಗಿದೆ. 
ಸಾವಿನಲ್ಲಿ ಒಂದಾದ ಪ್ರೇಮಿಗಳ ದುರಂತ ಕಥೆ: ಮೃತ ಯುವಕ ಸಂದೇಶ್‌ ಕುಲಾಲ್‌ ಮತ್ತು ಅಂಬಾಗಿಲು ಸಮೀಪದ ಸೌಮಶ್ರೀ ಭಂಡಾರಿ ಪರಸ್ಪರ ಕಳೆದ ಏಳೆಂಟು ವರ್ಷಗಳಿಂದ ಪ್ರೀತಿಸುತ್ತಿದ್ದರು.  ಕೆಲ ದಿನಗಳ ಹಿಂದೆ ಸೌಮ್ಯಶ್ರೀಗೆ ಬೇರೆಯವರೊಂದಿಗೆ ನಿಶ್ಚಿತಾರ್ಥ ಆಗಿತ್ತೆಂದು ತಿಳಿದುಬಂದಿದೆ. ಇದರಿಂದ ಸಂದೇಶ ಕುಲಾಲ್ ಕುಪಿತಗೊಂಡಿದ್ದು, ಇದೇ ವಿಚಾರದಲ್ಲಿ ಇಬ್ಬರಿಗೂ ಜಗಳ ಆಗುತ್ತಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬ್ಯಾಂಕಿನಿಂದ ಆಕೆ ಮನೆಗೆ ವಾಪಸ್ ಆಗುತ್ತಿದ್ದ ಸಂದರ್ಭ ಯುವಕ ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿ ಬಳಿ ಅಡ್ಡಗಟ್ಟಿ ನಿಂತಿದ್ದಾನೆ. ಯುವಕ ಯುವತಿಗೆ ಚಾಕುವಿನಿಂದ ಇರಿದಿದ್ದಾನೆ. ಪಾಗಲ್ ಪ್ರಿಯಕರ ನಂತರ ಅದೇ ಚಾಕುವಿನಿಂದ ಕುತ್ತಿಗೆ ಕೊಯ್ದುಕೊಂಡಿದ್ದಾನೆ. 

ಗಂಭೀರ ಗಾಯಗೊಂಡ ಯುವತಿ ಹಾಗೂ ಯುವಕ ಸಂದೇಶ್‌ ಕುಲಾಲ್‌ ನನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಯುವತಿ ಅತೀವ ರಕ್ತಸ್ರಾವದಿಂದ ಸೋಮವಾರ ರಾತ್ರಿ ಮೃತಪಟ್ಟಿದ್ದಳು. ಯುವಕ ಸಂದೇಶ್‌ ಕುಲಾಲ್‌ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಬೆಳಿಗ್ಗೆ ಮೃತಪಟ್ಟಿದ್ದಾನೆ ಎಂದು ಎಸ್ಪಿ ವಿಷ್ಣುವರ್ಧನ್‌ ತಿಳಿಸಿದ್ದಾರೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಣಿಪಾಲದ ಕೆಎಂಸಿಯ ಶವಾಗಾರದಲ್ಲಿ ಯುವಕ ಹಾಗೂ ಯುವತಿಯ ಮರಣೋತ್ತರ ಪರೀಕ್ಷೆ ನಡೆಯಲಿದೆ 

 
 
 
 
 
 
 
 
 
 
 

Leave a Reply