ಡಿಸೆಂಬರ್ 3 ರಂದು ರಾತ್ರಿ 08-30 ರಿಂದ 10:00 ಗಂಟೆಯ ಮದ್ಯೆ ಕಾರ್ಕಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕಲ್ಯಾ ಗ್ರಾಮದ ಉಷಾ ಜಗದೀಶ್ ಅಂಚನ್ ಎಂಬವರ ಮನೆಯ ಬಾಗಿಲನ್ನು ಯಾರೋ ಕಳ್ಳರು ಮುರಿದು ಒಳ ಪ್ರವೇಶಿಸಿ ಕೊಠಡಿಯಲ್ಲಿದ್ದ ಗೋದ್ರೇಜ್ನ ಬೀಗ ಮುರಿದು ಒಳಗಿದ್ದ ರೂ 9,75,000/-ಬೆಲೆಬಾಳುವ ಬಂಗಾರದ ಆಭರಣಗಳನ್ನು ಕಳವು ಮಾಡಿಕೊಂಡು ಹೋದ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆಯನ್ನು ಕೈಗೆತ್ತಿಕೊಂಡ ಕಾರ್ಕಳ ವೃತ್ತ ನಿರೀಕ್ಷಕರಾದ ಟಿ.ಡಿ ನಾಗರಾಜ್ರವರ ತಂಡವು ದಿನಾಂಕ 21/12/2022 ರಂದು ಪ್ರಕರಣದ ಆರೋಪಿ ಪ್ರಸಾದ್ @ ಪಚ್ಚು ಮತ್ತು ಆತನಿಗೆ ಕಳ್ಳತನ ಮಾಡಲು ಮಾಹಿತಿ ನೀಡಿ ಸಹಕರಿಸಿದ ಇನ್ನೊರ್ವ ಆರೋಪಿತೆ ಶಿಬಾ ಎಂಬಾಕೆಯನ್ನು ಬಂಧಿಸಿ, ಇಬ್ಬರು ಆರೋಪಿಗಳಿಂದ ಕಳ್ಳತನವಾಗಿದ್ದ ರೂ 9,75,000/- ರೂ ,ಮೌಲ್ಯದ 216 ಗ್ರಾಂ ಬಂಗಾರದ ಒಡವೆ ಗಳು ಮತ್ತು 77 ಗ್ರಾಂ ತೂಕದ ಬೆಳ್ಳಿಯ ಒಡವೆಗಳನ್ನು ವಶಪಡಿಸಲಾಗಿದೆ.
ಆರೋಪಿ ಪ್ರಸಾದ್ @ ಪಚ್ಚು ಎಂಬವನ ಮೇಲೆ ಈ ಹಿಂದೆ ಬಂಟ್ವಾಳ ಗ್ರಾಮಾಂತರ, ಮೂಡಬಿದ್ರಿ, ಕಾರ್ಕಳ ನಗರ ಠಾಣೆಗಳಲ್ಲಿ ಕಳ್ಳತನ ಪ್ರಕರಣಗಳು ಮತ್ತು ಮೂಡಬಿದ್ರೆ ಠಾಣೆಯಲ್ಲಿ ಸುದರ್ಶನ ಜೈನ್ ಎಂಬವರ ಕೊಲೆ ಹಾಗೂ ವೇಣೂರು ಠಾಣಾ ವ್ಯಾಪ್ತಿಯಲ್ಲಿ ಫೋಕ್ಸೋ ಪ್ರಕರಣಗಳು ದಾಖಲಾಗಿದ್ದವು. ಆರೋಪಿತರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಕ್ಷಯ ಹಾಕೆ ಮಚ್ಚೀಂದ್ರ, ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸಿದ್ದಲಿಂಗಪ್ಪ,ರವರ ನಿರ್ದೇಶನದಂತೆ ಕಾರ್ಕಳ ಉಪವೀಬಾಗದ ಡಿ.ವೈ,ಎಸ್.ಪಿ ವಿಜಯಪ್ರಸಾದ್ ರವರ ಮಾರ್ಗದರ್ಶನದಲ್ಲಿ, ಕಾರ್ಕಳ ವೃತ್ತ ನಿರೀಕ್ಷಕರಾದ ಟಿ.ಡಿ ನಾಗರಾಜ್ ರವರ ನೇತೃತ್ವದಲ್ಲಿ ಕಾರ್ಕಳ ಗ್ರಾಮಾಂತರ ಠಾಣಾ ಪಿಎಸ್ಐ ತೇಜಸ್ವಿ ಟಿ ಐ ಮತ್ತು ಸಿಬ್ಬಂದಿಯವರಾದ ಗಿರೀಶ್, ಪ್ರಶಾಂತ್, ವಿಶ್ವನಾಥ್, ಸುಂದರ್, ವಿದ್ಯಾ, ಗಣೇಶ್ ರೆಡ್ಡಿ, ರುಕ್ಮಿಣಿ, ಶ್ಯಾಮ್, ಮಹಂತೇಶ, ಈರಣ್ಣ, ಆಶೋಕ್ ಪಡುಬಿದ್ರೆ ಮತ್ತು ಸತೀಶ್ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿರುತ್ತಾರೆ. ಹಾಗೂ ಎಸ್.ಪಿ ರವರ ಕಛೇರಿಯ ಸಿಬ್ಬಂದಿಯವರಾದ ಶಿವಾನಂದ ಹಾಗೂ ದಿನೇಶ್ರವರು ಸಹಕರಿಸಿರುತ್ತಾರೆ.