ಈಗಾಗಲೇ ಕೊರೊನಾ ಮಹಾಮಾರಿಯ ಸಂದರ್ಭದಲ್ಲಿ ಸುಮಾರು 6 ತಿಂಗಳ ಕಾಲ ಮೀನುಗಾರಿಕೆ ಸ್ಥಗಿತಗೊಂಡು ಮೀನುಗಾರರು ತೀರ ತೊಂದರೆಗೆ ಸಿಲುಕಿ ಸಂಕಷ್ಟದಿಂದ ಇನ್ನೂ ಹೊರಬರಲು ಸಾಧ್ಯವಾಗಿಲ್ಲ. ಡಿಸೇಲ್ ಬೆಲೆ ಏರಿಕೆ. ಮೀನುಗಾರಿಕೆ ಪರಿಕರಗಳ ದುಬಾರಿ ಬೆಲೆ, ಕಾರ್ಮಿಕರ ಸಮಸ್ಯೆ, ದುಬಾರಿ ನಿರ್ವಹಣಾ ವೆಚ್ಚ ಸಹಿತ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾ ಮೀನುಗಾರಿಕೆಯಲ್ಲಿ ತೊಡಗಿಕೊಂಡಿರುವ ಮೀನುಗಾರರು, ಪ್ರಾಕೃತಿಕ ವಿಕೋಪದಿಂದ ಹಾನಿಗೊಳಗಾದ ಬೋಟ್ ಹಾಗೂ ನಾಡದೋಣಿಗಳ ಕೋಟ್ಯಾಂತರ ರೂಪಾಯಿಗಳ ನಷ್ಟ ಮೀನುಗಾರರನ್ನು ಕಂಗೆಡಿಸಿದೆ.
ಈ ಎಲ್ಲಾ ಸಮಸ್ಯೆಗಳ ಗಂಭೀರತೆಯನ್ನು ಪರಿಗಣಿಸಿ ಮೀನುಗಾರರಿಗೆ ವಿಶೇಷ ಪ್ರಕರಣದಡಿ ಗರಿಷ್ಟ ಪ್ರಮಾಣದ ಪರಿಹಾರವನ್ನು ಮಂಜೂರು ಮಾಡಿ ಆತಂಕಕ್ಕೀಡಾಗಿರುವ ಮೀನುಗಾರರಲ್ಲಿ ಆತ್ಮವಿಶ್ವಾಸ ತುಂಬುವ ಕಾರ್ಯಕ್ಕೆ ಮುಂದಾಗುವಂತೆ ಸಚಿವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ. ಶಾಸಕರಾದ ಕೆ ರಘುಪತಿ ಭಟ್, ಶ್ರಸುನೀಲ್ ಕುಮಾರ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಉಪಸ್ಥಿತಿಯಲ್ಲಿ ನೀಡಿದ ಮನವಿಗೆ ಪೂರಕವಾಗಿ ಸ್ಪಂದಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಸೂಕ್ತ ಪರಿಹಾರ ಮಂಜೂರು ಮಾಡಲು ಶಿಫಾರಸ್ಸು ಮಾಡುವುದಾಗಿ ಭರವಸೆ ನೀಡಿದ್ದಾರೆ.