ಗಿಡಗಳ ಪೋಷಣೆಯಿಂದ ನೀರಿನ ಸಮಸ್ಯೆ ತಡೆಗಟ್ಟಲು ಸಾಧ್ಯ :ಸಿವಿಲ್ ನ್ಯಾಯಾಧೀಶೆ ಶರ್ಮಿಳಾ ಎಸ್

ಅಭಿವೃದ್ಧಿ ಹೆಸರಲ್ಲಿ ಮರಗಳನ್ನು ಕಡಿಯುತ್ತಿರುವುದರಿಂದ ಇತ್ತೀಚಿನ ವರುಷಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬರು ತಮ್ಮ ಮನೆಯಲ್ಲಿ ಗಿಡಗಳನ್ನು ನೆಟ್ಟು ಪೋಷಿಸುವುದರಿಂದ ಭವಿಷ್ಯದಲ್ಲಿ ಉದ್ಭವಿಸುವ ನೀರಿನ ಸಮಸ್ಯೆ ತಡೆಗಟ್ಟಲು ಸಾಧ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್ ಹೇಳಿದರು.

ಅವರು ಇತ್ತೀಚೆಗೆ ನಗರದ ಪೂರ್ಣ ಪ್ರಜ್ಞಾ ಕಾಲೇಜಿನ ಸಭಾಂಗಣದಲ್ಲಿ ಜಿಲ್ಲಾಡಳಿತ, ನಗರಸಭೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಪೂರ್ಣ ಪ್ರಜ್ಞ ಕಾಲೇಜು ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಮನೆಯಲ್ಲಿ ಅನಗತ್ಯವಾಗಿ ನೀರನ್ನು ಪೋಲು ಮಾಡದೆ ಮಿತವಾಗಿ ನೀರನ್ನು ಬಳಸಬೇಕು ಎಂದ ಅವರು, ಅತೀ ಹೆಚ್ಚು ನೀರಿನಿಂದ ಆವೃತವಾಗಿದ್ದ ನಮ್ಮ ಪರ್ಯಾವರಣ ಇಂದು ನೀರಿನ ಅಭಾವವನ್ನು ಅನುಭವಿಸುತ್ತಿದೆ. ಇದು ಹೀಗೇ ಮುಂದುವರೆದರೆ ಮುಂದೊoದು ದಿನ ತೀವ್ರತರವಾದ ನೀರಿನ ಅಭಾವ ಎದುರಿಸಬೇಕಾಗುತ್ತದೆ. ಹಾಗಾಗಿ ಇಂದಿನಿAದಲೇ ನೀರಿನ ಮಿತವಾದ ಬಳಕೆಯನ್ನು ನಾವು ರೂಢಿಸಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ನಗರಸಭಾ ಪೌರಾಯುಕ್ತ ರಾಯಪ್ಪ ಮಾತನಾಡಿ, ಉಡುಪಿ ನಗರಸಭೆಗೆ ದೂರದ ಬಜೆ ಡ್ಯಾಂ ನಿಂದ ನೀರನ್ನು ಪಂಪ್ ಮಾಡುವ ಮೂಲಕ ನೀರು ಸರಬರಾಜು ಮಾಡಲಾಗುತ್ತದೆ. ನೀರನ್ನು ಮಿತವಾಗಿ ಬಳಕೆ ಮಾಡದೇ ಕಾರು, ಬೈಕ್‌ಗಳನ್ನು ತೊಳೆಯಲು ಬಳಸಲಾಗುತ್ತಿದೆ.

ಮುಂದಿನ ದಿನಗಳಲ್ಲಿ ನೀರನ್ನು ಮಿತವಾಗಿ ಬಳಸದೇ ಅನಗತ್ಯವಾಗಿ ಪೋಲು ಮಾಡುವುದು ಕಂಡುಬoದಲ್ಲಿ ಅಂತವರಿಗೆ ದಂಡ ವಿಧಿಸಿ, ನೀರಿನ ಸಂಪರ್ಕವನ್ನು ಕಡಿತಗೊಳಸಲಾಗುವುದು ಎಂದರು.

ಪೂರ್ಣ ಪ್ರಜ್ಞ ಕಾಲೇಜು ಪ್ರಾಂಶುಪಾಲ ಡಾ. ರಾಮು ಎಲ್ ಅವರು ಮಾತನಾಡಿ, ಪ್ರಕೃತಿಯಲ್ಲಿ ಪ್ರತಿಯೊಂದು ಜೀವಿಯೂ ಒಂದನ್ನೊoದು ಅವಲಂಬಿಸಿಕೊoಡಿದ್ದು, ಇಂದು ಪ್ರಾಣಿ ಪಕ್ಷಿಗಳು ಹೇಗೆ ನಶಿಸುತ್ತಿವೆಯೋ ಮುಂದೊoದು ದಿನ ಮಾನವರೂ ನಶಿಸುತ್ತಾರೆ. ಹಾಗಾಗಿ ನಾವು ಹಾಗೂ ನಮ್ಮ ಮುಂದಿನ ಪೀಳಿಗೆ ಪರಿಶುದ್ಧವಾದ ಗಾಳಿ, ಬೆಳಕು ಪಡೆಯಬೇಕಾದರೆ ನಮ್ಮ ಸುತ್ತಮುತ್ತ ಗಿಡ ಮರಗಳನ್ನು ಬೆಳೆಸುವ ಮೂಲಕ ಪರಿಸರವನ್ನು ಕಾಪಾಡಿಕೊಳ್ಳಬೇಕು ಎಂದರು.

ಮಣಿಪಾಲದ ಎಂ.ಐ.ಟಿ ಜಿಯೋಲಜಿ ಪ್ರೊಫೆಸರ್ ಕೆ. ಬಾಲಕೃಷ್ಣ ಅವರು ವಿಶ್ವ ಜಲ ದಿನಾಚರಣೆಯ ಕುರಿತು ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ನಗರಸಭೆಯ ಎಇಇ ಯಶವಂತ್ ಪ್ರಭು, ಇಂಜಿನಿಯರ್ ಗಳಾದ ಚೇತನ್, ಸತ್ಯ, ಕಾರ್ತಿಕ್, ಕಾಲೇಜು ಆಡಳಿತಾಧಿಕಾರಿ ಡಾ. ಎ.ಪಿ.ಭಟ್, ಉಡುಪಿ ನಗರಸಭೆಯ ಪ್ರಭಾರ ಆರೋಗ್ಯ ನಿರೀಕ್ಷಕರಾದ ಮನೋಹರ್, ಹರೀಶ್ ಬಿಲ್ಲವ ಹಾಗೂ ಸುರೇಂದ್ರ ಹೋಬಳಿಕರ್, ಪೂರ್ಣ ಪ್ರಜ್ಞ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ನಗರಸಭೆಯ ಪರಿಸರ ಅಭಿಯಂತರರಾದ ಸ್ನೇಹ ಕೆ.ಎಸ್ ನಿರೂಪಿಸಿದರು.

 
 
 
 
 
 
 
 
 
 
 

Leave a Reply