ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಅಲೆಗಳ ರಭಸಕ್ಕೆ ಬೋಟ್ ಅಲುಗಾಡಿದ ಪರಿಣಾಮ ಆಕಸ್ಮಿಕವಾಗಿವಾಗಿ ಬೋಟ್ ಗೆ ಬಿದ್ದು ಗಂಭೀರ ಗಾಯಗೊಂಡ ಮೀನುಗಾರರೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಮೂಲದ ನಾಗರಾಜನ್(27) ಮೃತಪಟ್ಟ ಮೀನುಗಾರ. ಮಲ್ಪೆಯ ಪ್ರತಾಪ್ ಸುವರ್ಣ ರವರ ಮಾಲಕತ್ವದ ಶ್ರೀಕೃಷ್ಣ ಚಕ್ರ ಲೈಲ್ಯಾಂಡ್ ಮೀನುಗಾರಿಕಾ ಬೋಟ್ ನಲ್ಲಿ ಕಲಾಸಿಯಾಗಿದ್ದ ನಾಗರಾಜನ್ ಅವರು ಫೆ. 5 ರಂದು ರಾತ್ರಿ ಇತರ ಮೀನುಗಾರರೊಂದಿಗೆ 10 ಗಂಟೆಗೆ ಮೀನುಗಾರಿಕೆ ನಡೆಸಲು ಮಲ್ಪೆ ಬಂದರಿನಿಂದ ಹೊರಟಿದ್ದರು. ಈ ವೇಳೆ ಫೆ.11 ರಂದು ಅರಬ್ಬೀ ಸಮುದ್ರದ 200 ನಾಟಿಕಲ್ ದೂರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಮುಂಜಾನೆ 5:45 ಗಂಟೆಗೆ ಸಮುದ್ರದ ಅಲೆಗಳ ಅಬ್ಬರಕ್ಕೆ ಬೋಟ್ ಅಲುಗಾಡಿದ ಪರಿಣಾಮ ನಾಗರಾಜನ್ ಆಕಸ್ಮಿಕವಾಗಿ ಆಯತಪ್ಪಿ ಬೋಟಿನ ಬಲೆ ಎಳೆಯುವ ಡ್ರಮ್ ವಿಂಚ್ ಗೆ ಬಿದ್ದಿದ್ದರು. ಇದರಿಂದ ಡ್ರಮ್ ವಿಂಚ್ ಆವರ ತಲೆಯ ಹಿಂಬದಿಗೆ ತಾಗಿ ಗಂಭೀರ ಗಾಯಗೊಂಡು ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಈ ಬಗ್ಗೆ ಮೃತರ ಮಾವ ಲೋಕೇಶ್ ನಾರಾಯಣ ಹರಿಕಾಂತ ಎಂಬವರು ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.