ಉಕ್ರೇನ್ ನಿಂದ ಭಾರತೀಯರ ರಕ್ಷಣೆಗೆ ಮೋದಿ ಸರಕಾರದ ದಿಟ್ಟ ಕ್ರಮ ಶ್ಲಾಘನೀಯ: ಉಡುಪಿ ಜಿಲ್ಲಾ ಬಿಜೆಪಿ

ಯುದ್ದ ಪೀಡಿತ ದೇಶ ಉಕ್ರೇನ್ ನಲ್ಲಿ ಉನ್ನತ ವ್ಯಾಸಂಗಕ್ಕಾಗಿ ತೆರಳಿರುವ ಭಾರತೀಯ ವಿದ್ಯಾರ್ಥಿಗಳ ಸಹಿತ ಭಾರತೀಯ ನಾಗರಿಕರರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆ ತರಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕೈಗೊಂಡಿರುವ ದಿಟ್ಟ ಕ್ರಮ ಶ್ಲಾಘನೀಯ ಎಂದು ಉಡುಪಿ ಜಿಲ್ಲಾ ಬಿಜೆಪಿ ತಿಳಿಸಿದೆ.

ವಿಶ್ವದ ಮಹಾನ್ ರಾಷ್ಟ್ರಗಳು ಉಕ್ರೇನ್ ನಲ್ಲಿ ಸಿಲುಕಿರುವ ತಮ್ಮ ನಾಗರಿಕರನ್ನು ರಕ್ಷಿಸಲಾಗದೇ ಪರದಾಡುತ್ತಿದ್ದ ಸನ್ನಿವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾರತೀಯರನ್ನು ರಕ್ಷಿಸಿ ಸ್ವದೇಶಕ್ಕೆ ಕರೆ ತರುವ ನಿಟ್ಟಿನಲ್ಲಿ ರಷ್ಯಾ ಜೊತೆ ನಡೆಸಿರುವ ಮಾತುಕತೆಯ ಫಲವಾಗಿ ಕೆಲವು ಗಂಟೆಗಳ ಕಾಲ ಯುದ್ಧವೇ ಸ್ಥಗಿತಗೊಂಡ ಪ್ರಕ್ರಿಯೆ ಹಾಗೂ ಭಾರತೀಯ ರಾಯಭಾರಿ ಕಛೇರಿಯ ತ್ವರಿತ ಸೇವೆಯ ಜೊತೆಗೆ ನಾಲ್ಕು ಪ್ರಭಾವಿ ಕೇಂದ್ರ ಸಚಿವರನ್ನು ನಿಯೋಜಿಸಿ, ಸಶಕ್ತ ತಂಡದೊಂದಿಗೆ ಭಾರತೀಯ ವಿದ್ಯಾರ್ಥಿಗಳ ಹಾಗೂ ನಾಗರಿಕರ ರಕ್ಷಣಾ ಕಾರ್ಯದಲ್ಲಿ ಸಮರೋಪಾದಿಯಲ್ಲಿ ತೊಡಗಿರುವುದು ದೇಶವಾಸಿಗಳಿಗೆ ಹೆಮ್ಮೆ ತಂದಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ ಮತ್ತು ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ ತಿಳಿಸಿದ್ದಾರೆ.

ಉಕ್ರೇನ್ ನ ನೆರೆಹೊರೆಯ ದೇಶಗಳಿಂದ ಇದುವರೆಗೆ ಸುಮಾರು 15,000 ಮಂದಿ ಭಾರತೀಯರನ್ನು ಅಪರೇಷನ್ ಗಂಗಾ ಕಾರ್ಯಾಚರಣೆಯ ಮೂಲಕ ಸುರಕ್ಷಿತವಾಗಿ ತಾಯ್ನಾಡಿಗೆ ಕರೆ ತಂದಿರುವುದು ಜಾಗತಿಕ ಮಟ್ಟದಲ್ಲಿ ಭಾರತದ ಪ್ರಭಾವ ಹೆಚ್ಚುತ್ತಿರುವುದಕ್ಕೆ ಜ್ವಲಂತ ನಿದರ್ಶನವಾಗಿದೆ.

ಯುದ್ಧ ಪೀಡಿತ ದೇಶ ಉಕ್ರೇನ್ ನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳು ಮುಂದಕ್ಕೆ ಭಾರತದಲ್ಲೇ ಇಂಟರ್ನ್ಶಿಪ್ ಮಾಡಬಹುದು ಎಂಬ ರಾಷ್ಟ್ರೀಯ ವೈದ್ಯಕೀಯ ಆಯೋಗದ ನಿರ್ಧಾರ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಪೂರಕವಾಗಲಿದೆ.

ಈ ನಡುವೆ ತಮ್ಮ ಬದುಕನ್ನು ರೂಪಿಸುವ ನಿಟ್ಟಿನಲ್ಲಿ ಸ್ವಯಂ ನಿರ್ಧಾರವನ್ನು ಕೈಗೊಂಡು ಉಕ್ರೇನ್ ನಲ್ಲಿ ವೈದ್ಯಕೀಯ ಶಿಕ್ಷಣಕ್ಕಾಗಿ ತೆರಳಿ, ಯುದ್ಧದ ಸಂದರ್ಭದಲ್ಲಿ ಸಿಲುಕಿಕೊಂಡು ಸರಕಾರದ ಸಹಾಯದಿಂದ ಭಾರತಕ್ಕೆ ಮರಳಿರುವ ಬೆರಳೆಣಿಕೆಯ ಕೆಲವು ವಿದ್ಯಾರ್ಥಿಗಳು ದೇಶದ ವಿರುದ್ಧವೇ ಅವಹೇಳನಕಾರಿ ಹೇಳಿಕೆ ನೀಡಿರುವುದು ಅರ್ಥಹೀನವಾಗಿದೆ. ಇದರ ಜೊತೆಗೆ ಆಡಳಿತ ಪಕ್ಷವನ್ನು ದೂಷಿಸಲೆಂದೇ ಕಾದು ಕುಳಿತಿರುವ ವಿರೋಧ ಪಕ್ಷಗಳ ನಾಯಕರ ಸಂಕುಚಿತ ಮನಸ್ಥಿತಿಯೂ ಕೈಲಾಗದವನು ಮೈ ಪರಚಿಕೊಂಡಂತೆ ಎಂಬಂತಾಗಿದೆ.

ಉಕ್ರೇನ್ ಯುದ್ಧ ಪೀಡಿತ ಪ್ರದೇಶದಿಂದ ವಿವಿಧ ಮಾರ್ಗಗಳಲ್ಲಿ ನಿಗದಿತ ತಾಣವನ್ನು ತಲುಪಿರುವ ಭಾರತೀಯ ವಿಧ್ಯಾರ್ಥಿಗಳು ಮತ್ತು ನಾಗರಿಕರನ್ನು ಭಾರತಕ್ಕೆ ಕರೆ ತರುತ್ತಿರುವ ಕೇಂದ್ರ ಸರಕಾರದ ಪ್ರಕ್ರಿಯೆಗೆ ಸ್ವತಃ ಉಚ್ಛ ನ್ಯಾಯಾಲಯವೇ ಪ್ರಶಂಸೆ ವ್ಯಕ್ತಪಡಿಸಿದೆ. ಭಾರತದ ರಾಷ್ಟ್ರ ಧ್ವಜದ ಅಸರೆಯಿಂದ ಸಾಗಿಬಂದು ಸರಕಾರದ ಸಹಾಯದಿಂದ ಸುರಕ್ಷಿತವಾಗಿ ತಾಯ್ನಾಡನ್ನು ತಲುಪಿರುವ ಭಾರತೀಯ ವಿದ್ಯಾರ್ಥಿಗಳು ಭಾರತೀಯ ರಾಯಭಾರಿ ಕಛೇರಿ, ವ್ಯವಸ್ಥೆಗಳು ಮತ್ತು ಭಾರತದ ಬಗ್ಗೆ ಹೆಮ್ಮೆಯ ಮಾತನಾಡುತ್ತಿರುವುದು ಶ್ಲಾಘನೀಯ. ಉಕ್ರೇನ್ ನಲ್ಲಿ ಯುದ್ಧದ ವಿಷಮ ಪರಿಸ್ಥಿತಿಯ ನಡುವೆಯೂ ಭಾರತೀಯರನ್ನು ಸುರಕ್ಷಿತವಾಗಿ ದೇಶಕ್ಕೆ ಕರೆ ತರುವಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಹಗಲಿರುಳು ಶ್ರಮಿಸುತ್ತಿರುವ ಇಡೀ ತಂಡದ ಅವಿರತ ಸೇವೆ ಅಭಿನಂದನೀಯ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply