ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭಾ (ರಿ.), ಮಂಗಳೂರು ಇವರ ಆಶ್ರಯದಲ್ಲಿ ಮಹಾಸಭಾದ ಅಮೃತ ಮಹೋತ್ಸವ ಸಡಗರದ 29 ನೇ ಪದ್ಮಶಾಲಿ ಕ್ರೀಡೋತ್ಸವವನ್ನು ಭಾನುವಾರ ದಿನಾಂಕ 20.03.2022 ರಂದು ಬೆಳಿಗ್ಗೆ
9.00 ಗಂಟೆಯಿಂದ ಸಾಯಂಕಾಲ 6.00 ಗಂಟೆಯ ವರೆಗೆ ಉಡುಪಿ ಅಜ್ಜರಕಾಡಿನ ಮಹಾತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
ಪದ್ಮಶಾಲಿ ನೇಕಾರ ಪ್ರತಿಷ್ಠಾನ ಉಡುಪಿ ಈ ಕ್ರೀಡೋತ್ಸವದ ಆತಿಥ್ಯವನ್ನು ವಹಿಸಲಿದೆ.
ಈ ಕ್ರೀಡೋತ್ಸವವು ಪದ್ಮಶಾಲಿ ಸಮಾಜಕ್ಕೆ ಸಂಬಂಧ ಪಟ್ಟ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಈ ಮೂರು ಜಿಲ್ಲೆಗಳ ಹದಿನಾರು ದೇವಸ್ಥಾನಗಳ ಕೂಡುಕಟ್ಟಿನ ತಂಡಗಳ ನಡುವೆ ನಡೆಯಲಿದ್ದು ಸ್ಪರ್ಧಾಳುಗಳು ಸೇರಿ ಸುಮಾರು
ಮೂರು ಸಾವಿರ ಸಮಾಜ ಭಾಂದವರು ಸೇರುವ ನಿರೀಕ್ಷೆ ಇದೆ.
ಕ್ರೀಡೋತ್ಸವದಲ್ಲಿ ಹನ್ನೊಂದು ವರ್ಷ ಮೇಲ್ಪಟ್ಟ ಎಲ್ಲ ವಯೋಮಿತಿಯವರಿಗೆ ಪುರುಷರು ಮತ್ತು ಮಹಿಳೆಯರ ಪ್ರತ್ಯೇಕ ವಿಭಾಗಗಳಲ್ಲಿ ಮತ್ತು ಪ್ರತ್ಯೇಕ ವಯೋಮಿತಿಯ ವಿವಿಧ ವಿಭಾಗಗಳಲ್ಲಿ 50, 100, 200, 400 ಮೀಟರ್
ಓಟದ ಸ್ಪರ್ಧೆಗಳು, ಉದ್ದ ಜಿಗಿತ, ಗುಂಡೆಸತ, ಅದ್ರಷ್ಟ ವೃತ್ತ, ವಾಲಿಬಾಲ್,ತ್ರೋ ಬಾಲ್, ರಿಲೇ ಇತ್ಯಾದಿ ಸ್ಪರ್ಧೆಗಳು ನಡೆಯಲಿವೆ.
ಈ ಕ್ರೀಡಾಕೂಟದ ನಿರ್ಣಾಯಕರಾಗಿ ರಾಜ್ಯ ಕ್ರೀಡಾ ಸಂಸ್ಥೆಯ ಮಾನ್ಯತೆ ಪಡೆದ ಇಪ್ಪತ್ತು ಕ್ರೀಡಾ ಮತ್ತು ದೈಹಿಕ ನಿರ್ದೇಶಕರು ಭಾಗವಹಿಸಲಿದ್ದಾರೆ.
ವಿಶೇಷ ಆಕರ್ಷಣೆಗಳು:
1.ಕ್ರೀಡೋತ್ಸವದಲ್ಲಿ ಕ್ರೀಡಾಕೂಟದ ಜೊತೆಗೆ ಉಭಯ ಜಿಲ್ಲೆಗಳ ಪ್ರ್ರಾಥಮಿಕ ನೇಕಾರರ ಸಂಘಗಳ ಆಶಯದಲ್ಲಿ ನವೀನ ಮಾದರಿಯ ಕೈಮಗ್ಗದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟವನ್ನು ಆಯೋಜಿಸಲಾಗಿದೆ.
2.ವಾಮಪದವು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ಶ್ರೀ ಅಶೋಕ್ ಕುಮಾರ್ ಭಾವಿಕಟ್ಟಿ ಹಾಗು ಮಣಿಪಾಲ ಡಾಟ್ ನೆಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ತಾಂತ್ರಿಕ ನಿರ್ದೇಶಕರಾದ ಶ್ರೀ ನಾಗರಾಜ್ ಶೆಟ್ಟಿಗಾರ್ ಕಟೀಲ್
ಇವರ ನಿರ್ದೇಶನದಲ್ಲಿ ಉದ್ಯೋಗ ಮಾಹಿತಿ ಶಿಬಿರವನ್ನು ಕೂಡ ಆಯೋಜಿಸಲಾಗಿದೆ.
3.ವಿವಾಹ ಅಪೇಕ್ಷಿತ ವಧು-ವರರ ಮೊಬೈಲ್ ಆಪ್ ಮಾಹಿತಿ ಕೇಂದ್ರವನ್ನು ಕೂಡ ತೆರೆಯಲಾಗುತ್ತದೆ,
ಸಭಾ ಕಾರ್ಯಕ್ರಮಗಳು:
ಬೆಳಿಗ್ಗೆ 9.00 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭಾ ಇದರ ಅಧ್ಯಕ್ಶರಾದ ಜಯರಾಮ್ ಮಂಗಳೂರು ಇವರ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದ್ದು ಕರ್ನಾಟಕ ಸರಕಾರದ ಸಮಾಜ ಕಲ್ಯಾಣ ಮತ್ತು
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿಯವರು ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಕೆ ರಘುಪತಿ ಭಟ್ ಕ್ರೀಡಾ ಜ್ಯೋತಿಯನ್ನು ಹಸ್ತಾಂತರಿಸಲಿದ್ದಾರೆ
ಮತ್ತು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರು ರತ್ನಾಕರ್ ಹೆಗ್ಡೆಯವರು ಧ್ವಜಾರೋಹಣ ನೆರವೇರಿಸಲಿದ್ದಾರೆ. ಮಾಜಿ ಮಹಾಸಭಾ ಅಧ್ಯಕ್ಷರಾದ ಸದಾನಂದ ಶೆಟ್ಟಿಗಾರ್ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ
ಉದ್ಘಾಟಿಸಲಿದ್ದಾರೆ.
ಬೆಳಿಗ್ಗೆ 10.30 ಗಂಟೆಗೆ ಕ್ರೀಡೋತ್ಸವದ ಗೌರವ ಸಮರ್ಪಣಾ ಕಾರ್ಯಕ್ರಮ ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭಾ ಇದರ ಉಪಾಧ್ಯಕ್ಷರಾದ ಶ್ರೀ ರಾಮದಾಸ್ ಶೆಟ್ಟಿಗಾರ್ ರವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ರಾಜ್ಯ ಬಸ್ ಮಾಲಕರ ಸಂಘದ ಅಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಾಯಂಕಾಲ 4.00 ಗಂಟೆಗೆ ನಡೆಯುವ ಸಮಾರೋಪ ಸಮಾರಂಭವು ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಓಂಪ್ರಕಾಶ್ ಡಿ ಶೆಟ್ಟಿಗಾರ್ ರವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು ಈ ಸಮಾರಂಭದಲ್ಲಿ
ಕ್ರೀಡಾಕೂಟದ ಬಹುಮಾನ ವಿತರಣೆ ಕೂಡ ನಡೆಯಲಿದೆ.
ಗಣ್ಯರ ಪಾಲ್ಗೊಳ್ಳುವಿಕೆ:
ಈ ಎಲ್ಲ ಕಾರ್ಯಕ್ರಮಗಳಲ್ಲಿ ಹದಿನಾರು ದೇವಸ್ಥಾನದ ಮೊಕ್ತೇಸರರು/ಅಧ್ಯಕ್ಷರು, ಪದ್ಮಶಾಲಿ ಸಮಾಜಕ್ಕೆ ಸಂಬಂಧ ಪಟ್ಟ ಹದಿಮೂರು ಸಂಸ್ಥೆಗಳ ಅಧ್ಯಕ್ಷರು, ಸ್ಥಳೀಯ ಮತ್ತು ರಾಜ್ಯಮಟ್ಟದ ಜನಪ್ರತಿನಿದಿಗಳು, ಸಮಾಜದ ವಿವಿಧ ಗಣ್ಯ
ವ್ಯಕ್ತಿಗಳು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭಾ ಇದರ ಅಧ್ಯಕ್ಶರಾದ ಜಯರಾಮ್ ಶೆಟ್ಟಿಗಾರ್ ಮಂಗಳೂರು ರವರ ಅಧ್ಯಕ್ಷತೆಯಲ್ಲಿ ಪತ್ರಿಕಾ ಗೋಷ್ಠಿ ನಡೆಯಿತು. ಉಪಾಧ್ಯಕ್ಷರಾದ ರಾಮದಾಸ್ ಶೆಟ್ಟಿಗಾರ್, ಪದ್ಮಶಾಲಿ ನೇಕಾರ
ಪ್ರತಿಷ್ಠಾನದ ಅಧ್ಯಕ್ಷರಾದ ರತ್ನಾಕರ್ ಇಂದ್ರಾಳಿ, ಉಪಾಧ್ಯಕ್ಷರಾದ ಸರೋಜಾ ಯಶವಂತ್ ಶೆಟ್ಟಿಗಾರ್, ಕ್ರೀಡಾ ನಿರ್ದೇಶಕರಾದ ಸದಾಶಿವ ಗೋಳಿಜೋರ, ನಗರಸಭಾ ಸದಸ್ಯ ಮಂಜುನಾಥ್ ಮಣಿಪಾಲ ಉಪಸ್ಥಿತರಿದ್ದರು.