ದೇವರ ದಾಸಿಮಯ್ಯ ಜಯಂತಿ ಆಚರಣೆ

ಉಡುಪಿ, ಏಪ್ರಿಲ್ 6 (ಕವಾ): ಮಠದೊಳಗಣ ಬೆಕ್ಕು ಇಲಿಯ ಕಂಡು ಪುಟನೆಗೆದಂತಾಯಿತು ಕಾಣಾ ರಾಮನಾಥ ಎಂಬ ಜೇಡರ ದಾಸಿಮಯ್ಯರ ವಚನದಂತೆ ಮಾನವನು ಅರಿಷಡ್ವರ್ಗಗಳ ಆಸೆಗೆ ಒಳಗಾದರೆ ಹೀನ ಸ್ಥಿತಿಗೆ ತಲುಪುತ್ತಾನೆ ಎಂದು ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್ ಹೇಳಿದರು.

ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ, ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉಡುಪಿ ಇದರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ದೇವರ ದಾಸಿಮಯ್ಯ ಜಯಂತಿ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

ದೇವರ ದಾಸಿಮಯ್ಯ ಪ್ರಪ್ರಥಮ ವಚನಕಾರರಾಗಿದ್ದು, ವಿಶ್ವ ಸಾಹಿತ್ಯಕ್ಕೆ ಅವರು ನೀಡಿದ ಕೊಡುಗೆ ಅಪಾರವಾದದ್ದು, ಡಂಭಾಚಾರದ ಭಕ್ತಿಯನ್ನು ಬಿಟ್ಟು, ಅರಿಷಡ್ವರ್ಗಗಳ ಆಸೆಗಳನ್ನು ತ್ಯಜಿಸಿ, ಸತ್ಯ ದಾರಿಯಲ್ಲಿ ನಡೆಯುವುದು ಮುಖ್ಯವಾಗಿದೆ ಎಂದು ತಿಳಿಸಿದರು.

ಅಂಧಕಾರದಿoದ ಅಜ್ಞಾನದ ಕಡೆಗೆ ಅಂದಿನ ಶತಮಾನದಲ್ಲಿಯೇ ಹೋರಾಡಿದ ಹಿರಿಮೆ ದೇವರ ದಾಸಿಮಯ್ಯರದ್ದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜೇಡರ ದಾಸಿಮಯ್ಯರ ಬಗ್ಗೆ ಉಪನ್ಯಾಸ ನೀಡಿದ ಗಿರೀಶ್ ಶೆಟ್ಟಿಗಾರ್ ಮಾತನಾಡಿ, ಪರೋಪಕಾರವನ್ನೇ ಜೀವನವನ್ನಾಗಿಟ್ಟುಕೊಂಡು ಬದುಕುವ ಮಹಾನ್ ಆದರ್ಶ ಪುರುಷರಲ್ಲಿ ಜೇಡರ ದಾಸಿಮಯ್ಯ ಕೂಡ ಪ್ರಮುಖರಾಗಿದ್ದಾರೆ. ಮಹಿಳಾ ಸಮಾನತೆ, ಅಸ್ಮಿತೆಯ ಬಗ್ಗೆ ತನ್ನ ವಚನದ ಮೂಲಕವೇ ತಿಳಿಸಿದ ಶ್ರೇಷ್ಠ ವಚನಕಾರರಾಗಿದ್ದು, ಆತ್ಮಕ್ಕೆ ಯಾವುದೇ ಜಾತಿ, ಲಿಂಗ ಭೇದವಿಲ್ಲವೆಂದು ಅಂದಿನ ಕಾಲದಲ್ಲಿಯೇ ತಿಳಿಸಿದ ವಚನಕಾರ ಎಂದು ಹೇಳಿದರು.

ನಗರಸಭೆ ಸದಸ್ಯ ಮಂಜುನಾಥ್ ಶೆಟ್ಟಿಗಾರ್ ಹಾಗೂ ಜಯರಾಂ ಶೆಟ್ಟಿಗಾರ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಎಸಿಪಿ ಬಾಲಕೃಷ್ಣ, ಡಿವೈಎಸ್ಪಿ ಸುಧಾಕರ ನಾಯ್ಕ್, ಜಿಲ್ಲೆಯ ಎಲ್ಲಾ ಇಲಾಖೆಯ ಮುಖ್ಯಸ್ಥರು, ನೇಕಾರ ಸಮಾಜದ ಮುಖಂಡರು ಹಾಗೂ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

 
 
 
 
 
 
 
 
 
 
 

Leave a Reply