ತಮ್ಮ ಭಾವಪೂರ್ಣ ಅರ್ಥಗಾರಿಕೆಯಿಂದ ಕಲಾರಸಿಕರ ಮನ ಗೆದ್ದಿದ್ದ ಹೊನ್ನಾವರದ ಎಸ್. ಎಂ. ಹೆಗಡೆ ಮುಡಾರೆ ಅಲ್ಪ ಕಾಲದ ಅಸೌಖ್ಯದಿಂದ ಇಂದು (೦೬-೦೪-೨೦೨೨) ನಿಧನ ಹೊಂದಿದರು. ಅವರಿಗೆ ೭೪ ವರ್ಷ ವಯಸ್ಸಾಗಿತ್ತು. ಪತ್ನಿ, ಪುತ್ರಿಯನ್ನು ಅಗಲಿದ್ದಾರೆ. ಹವ್ಯಾಸಿ ವೇಷಧಾರಿ ಮತ್ತು ನಾಟಕದ ಕಲಾವಿದರಾಗಿ ಕಲಾಕ್ಷೇತ್ರಕ್ಕೆ ಸೇವೆಸಲ್ಲಿಸಿದ್ದರು. ಸಂಪ್ರದಾಯ ಬದ್ಧ ಭಜನೆ ಹಾಡುವುದರಲ್ಲಿ ಪ್ರಸಿದ್ಧರಾಗಿದ್ದರು. ಹೊಸಾಕುಳಿಯ ಉಮಾಮಹೇಶ್ವರ ಕಲಾರ್ಧಕ ಸಂಗದ ಕಾರ್ಯದರ್ಶಿಯಾಗಿ ೪೨ ವರ್ಷಗಳಿಂದ ಅದನ್ನು ಮುನ್ನಡೆಸಿಕೊಂಡು ಬಂದಿದ್ದರು. ತಾಳಮದ್ದಲೆಯನ್ನು ಉಳಿಸಿ ಬೆಳೆಸುವಲ್ಲಿ ವಿಶಿಷ್ಟ ಕೊಡುಗೆ ನೀಡಿದ್ದರು. ತಾಳಮದ್ದಲೆ ಕ್ಷೇತ್ರಕ್ಕೆ ಅವರು ಸಲ್ಲಿಸಿದ ಸೇವೆಯನ್ನು ಅನುಲಕ್ಷಿಸಿ ಉಡುಪಿಯ ಯಕ್ಷಗಾನ ಕಲಾರಂಗ ಅವರಿಗೆ ಈ ಬಾರಿಯ ಮಟ್ಟಿ ಮುರಲಿಧರ ರಾವ್ ಪ್ರಶಸ್ತಿಗೆ ಆಯ್ಕೆ ಮಾಡಿತ್ತು. ಇವರ ನಿಧನಕ್ಕೆ ಕಲಾರಂಗದ ಅಧ್ಯಕ್ಷ ಎಮ್. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.