ರಾಜ್ಯಮಟ್ಟದ ಯಕ್ಷಗಾನ ಸಮ್ಮೇಳನ~ ಸುರೇಂದ್ರ ಪಣಿಯೂರು

ಭಾರತೀಯರ ರಂಗ ಕಲೆಗಳಲ್ಲಿ ಯಕ್ಷಗಾನ ಕರೆಗೆ ವಿಶಿಷ್ಟವಾದ ಅಸ್ತಿತ್ವ ಹಾಗೂ ಆತ್ಮೀಯತೆ ಇದೆ ಇದರ ಮೂಲವನ್ನು ನೋಡಲು ಹೊರಟಾಗಯಕ್ಷಗಾನ ಎಂಬ ನಾಟಕದ ಒಂದು ಪ್ರಕಾರ ತೆಲುಗು ದೇಶದಲ್ಲಿದೆ. ಇದು ತಂಜಾವೂರಿಗೆ ಹೋಯಿತು.
ಈ ನಾಟಕದಲ್ಲಿ ಯಕ್ಷಗಾನ ಸಂಗೀತವನ್ನು ಬಳಸಿ ಆಡುತ್ತಿದ್ದರು ಎನ್ನಲಾಗುತ್ತಿದೆ. ಈ ರೀತಿಯ ಯಕ್ಷಗಾನ ಸಂಗೀತವನ್ನು ಹಾಡುವವರನ್ನು ಎಕ್ಕಡಿಗರು ಅನ್ನುತ್ತಾರೆ ಆಂಧ್ರದಲ್ಲಿ ಇವರನ್ನು ಜಕ್ಕುಲು ಅನ್ನುತ್ತಾರೆ ಇವರು ಆಡುವ ಕಥಾನಕವೇ ಜಕ್ಕುಲು ಕಥಾ. ಇದು  ಒಂದು ಜಾತಿ ಸೂಚಕವಲ್ಲ  ವೃತ್ತಿ ಸೂಚಕ  ಅನ್ನುತ್ತಾರೆ, ಕಾರಂತರು( ಯಕ್ಷಗಾನ 59)
ಕ್ರಿ ಶ 1620 ರಲ್ಲಿ ಗೋವಿಂದ ದೀಕ್ಷಿತರು  ಯಕ್ಷಗಾನದ ಕುರಿತು ಈ ರೀತಿ ಹೇಳಿದ್ದಾರೆ ಯಕ್ಷೌ ಘ  ಗೀತಮಪಿ ಗಾನ ಶೈಲಿ ಗೋವಿಂದ ದೀಕ್ಷಿತನಿಗಿಂತಲೂ ಹಿಂದಿನವನಾದ.ಸಾರ್ಙದೇವನಿಂದ ವಿರಚಿತವಾದ ಸಂಗೀತ ರತ್ನಾಕರದಲ್ಲಿ ಜಕ್ಕ , ಎಕ್ಕ , ಜಕ್ಕಲು, ಯಕ್ಷ ಎಂಬುದು ಒಂದು ಸಂಗೀತದ ಶೈಲಿ ಎಂದು ಹೇಳುವ ದೆಸೆಯಿಂದ ಏಕಲ ಎಂಬುದರಿಂದ ‘ ಯಕ್ಷ ‘ ಪದ ಬಂತೆನ್ನುವುದು ಸರಿಯಲ್ಲ ಹಾಗೆಯೇ ಆದರೇ ಒಬ್ಬನೇ ಹಾಡುವ ಗಾನ ಪದ್ಧತಿಗಳೂ ಯಕ್ಷಗಾನವೇ ಆಗಲು ಸಾಧ್ಯತೆ ಇದೆ ಎನ್ನುತ್ತಾರೆ ಕಾರಂತರು. (ಯಕ್ಷಗಾನದ 59)
ಯಕ್ಷಗಾನವು ನಾಟಕ ರೂಪದಲ್ಲಿ ಕರ್ನಾಟಕ ಹಾಗೂ ಆಂಧ್ರದಲ್ಲಿ ಮೇಲತ್ತೂರು ಎಂಬಲ್ಲಿಯೂ ಇತ್ತು. ಪೋಲು ಘಂಟಿ ಚೆನ್ನಶೌರಿ ಎಂಬಾತ ಯಕ್ಷಗಾನದಲ್ಲಿ ಹಾಡಲು ಅನುಕೂಲವಾದ ಸೌಭರಿ ಚರಿತಮು  ಎಂಬ ಹಾಡಲು ಅನುಕೂಲವಾದ ಜಕ್ಕಲು ಕಥೆಯನ್ನು ಬರೆದಿರುವನಂತೆ  ಈತ ಸಾಳುವ ನರಸಿಂಗ ರಾಯನ ಕಾಲದವನು ಎನ್ನಲಾಗುತ್ತದೆ .(ಯಕ್ಷಗಾನದ 59)
ಶಿಷ್ಯಾ ರಾಮಶಾಸ್ತ್ರಿಗಳು ತೆಲುಗು ವಾರ್ತಾಭಾರತಿಯಲ್ಲಿ ಬರೆದ (ಮಾರ್ಚ್ 1960) ಕೃಷ್ಣದೇವರಾಯನ ಅಷ್ಟ ದಿಗ್ಗಜರಲ್ಲಿ ಒಬ್ಬನಾದ ಆಂಧ್ರದ  ಕವಿ ಕಂದುಕೂರಿ ರುದ್ರಯ್ಯ ‘ ನೆಂಬಾತ ‘ ಸುಗ್ರೀವ ವಿಜಯ ‘  ಪ್ರಸಂಗ ಬರೆದಿರುವನು ಎಂದೂ , ಈತ ಬಹುಮನಿ ಸುಲ್ತಾನನಿಂದ ಗೌರವ  ಪಡೆದಿರುವ ಬಗ್ಗೆ  ಉಲ್ಲೇಖವಿದೆ.
ಅಪ್ಪಾರಾವ್ ಪ್ರಕಾರ ಮೆಚ್ಚುಪಲ್ಲಿ ಕೈಪಿಯತ್ತು ಪ್ರಕಾರ  ಕೂಚಿಪುಡಿಯ ಬ್ರಾಹ್ಮಣ ಭಾಗವತ  ವಿಜಯನಗರ ದೊರೆಯ ಮುಂದೆ ಆಡಿದ ಕೇಳಿಕಾ ರೂಪದ ನಾಟಕ ಕ್ರಿ ಶ  1502 ವಿಜಯ ನಗರದ ಪತನವಾದ ಬಳಿಕ ತಂಜಾವೂರ ನಾಯಕ ದೊರೆಗಳ ಆಶ್ರಯಕ್ಕೆ ಪಡೆದ ಇದೇ ಕೂಚಿಪುಡಿ ಬ್ರಾಹ್ಮಣರು, ಮುಂದೆ ಮೇಲತ್ತೂರು ಸೇರಿ ತೆಲುಗು ಯಕ್ಷಗಾನ ಪ್ರಚಾರ ಮಾಡಿದರಂತೆ ( 1561-1614) 
ಹೀಗೆ ಹೋದವರ ಪೈಕಿ ತೀರ್ಥನಾರಾಯಣ ಯತಿಯವರು ‘ ಶ್ರೀಕೃಷ್ಣ ಲೀಲಾ ತರಂಗಿಣಿ ‘   ಹಾಗೂ {ಅಚ್ಯುತಪುರ ನಿವಾಸಿ =ಮೇಲಾತ್ತೂರು} ‘ ಪಾರಿಜಾತ ಹರಣ ‘ ನಾಟಕ ಯಕ್ಷಗಾನವನ್ನು ರಚಿಸಿದ .
ಇದೇ ಸಮಯದಲ್ಲಿ ಸಿದ್ಧೇಂದ್ರ ಯತಿ ಪಾರಿಜಾತ ಹರಣ  ನೃತ್ಯ ನಾಟಕ ರಚಿಸಿ ಕೂಚಿಪುಡಿ ಬ್ರಾಹ್ಮಣರಿಗೆ ಕಲಿಸಿದ ಇವರಿಗೆ ಗೋಲ್ಕೊಂಡ ನವಾಬ ಅಬ್ದುಲ್ ಹಸನ್ ಕುತುಬ್ ಶಹಾ( 1672- 1687) ಒಂದು ಅಗ್ರಹಾರವನ್ನು ದಾನ ಕೊಟ್ಟ ತಾಮ್ರಶಾಸನವಿದೆ. 
ಇದೇ ಕೂಚಿಪುಡಿ ಮೇಲತ್ತೂರು ಕಲಾವಿದರು ಆಡುವ  ಆಟಗಳ ಪ್ರಸಂಗಗಳು ತೆಲುಗು ಭಾಷೆಯಲ್ಲಿದೆ ಇದನ್ನು ಬರೆದವರು  ವೆಂಕಟರಾಮ ಶಾಸ್ತ್ರಿಗಳು 1700-1800 ಕೂಚಿಪುಡಿ ಪ್ರಭಂದವು  ಕರ್ನಾಟಕ ಸಂಗೀತ ಪದ್ಧತಿಯಲ್ಲಿದೆ. ಇದರ ಸಂಗೀತವು ಮಾರ್ಗಸಂಗೀತ ಪದ್ಧತಿಯದು.
ಭರತಖಂಡದಲ್ಲಿರುವ i ರೀತಿಯ ನೂರಾರು ಸಾಂಪ್ರದಾಯಿಕ  ರಂಗಕಲೆಗಳಲ್ಲಿ ,ಜನಪದರಿಂದ ,ಕರ್ನಾಟಕ ದಾದ್ಯಂತ ದೊಡ್ಡಾಟ , ಸಣ್ಣಾಟ , ಘಟ್ಟದಕೋರೆ , ಮೂಡಲಪಾಯ , ಕೇಳಿಕೆ , ಮುಂತಾದ ಹತ್ತುಹಲವು ಪ್ರಕಾರಗಳು ಯಕ್ಷಗಾನ ಕಲೆಯಾಗಿ ಗುರುತಿಸಿಕೊಂಡಿವೆ. ಈ ಎಲ್ಲಾ ಕಲೆಗಳ ಮೂಲಗುಣವೇ ಆರಾಧನಾಗುಣ. 
ಇದರಲ್ಲಿ ಜನಪದರಿಗಾಗಿ ಹುಟ್ಟಿಕೊಂಡು ನಿತ್ಯನೂತನವಾಗಿ ಆರಾಧನಾಯುಕ್ತವಾಗಿ  ಆಚರಿಸಿಕೊಂಡು ಬಂದು ರಂಜಿಸುತ್ತಿರುವ ಅದ್ಭುತವಾದ ರಮ್ಯಕಲೆಯೇ ಕರ್ನಾಟಕ ಕರಾವಳಿ ತೀರದ ಯಕ್ಷಗಾನ (ಪಡುವಲಪಾಯ) ಕಲೆ.
ಆ ಪ್ರಕಾರದಲ್ಲಿ ಪ್ರಥಮ ಸ್ಥಾನದಲ್ಲಿ ನಿಲ್ಲುವ ಕರಾವಳಿ ತೀರದ ಗಂಡು ಕಲೆಯಾದ ಯಕ್ಷಗಾನ ಕಲೆಯು ಸಾಮಾಜಿಕರ ಜೀವನ ಸೆಲೆಯಾಗಿದೆ.ಕಲಾ ರಂಗದಲ್ಲಿ . ದುಡಿಯುವ ಸಾವಿರಾರು ಕಲಾವಿದರ ಬದುಕಿಗೆ ನೆಲೆಕೊಟ್ಟಿದೆ . ಜಿಜ್ಞಾಸುಗಳಿಗೆ ವಿದ್ವಾಂಸರಿಗೆ ಗ್ರಾಸವಾಗಿದೆ.
ಕರಾವಳಿಯಲ್ಲಿ ಯಕ್ಷಗಾನ ಕಲೆಗೆ ದೊರೆತ ಪ್ರೋತ್ಸಾಹದಲ್ಲಿ ಅಷ್ಟಮಠಗಳ  ಪಾತ್ರ ಹಿರಿದು ಇಲ್ಲಿಯ ಯತಿವರ್ಯ ರಾದ ಶ್ರೀ ನರಹರಿ ತೀರ್ಥರು  ಯಕ್ಷಗಾನ ಕಲೆಯನ್ನು ಆರಾಧನೆಯ ನೆಲೆಯಲ್ಲಿ ಗುರುತಿಸಿ ಪುನರುಜ್ಜೀವನ ಗೊಳಿಸಿ ಧರ್ಮ ಪ್ರಚಾರಕ್ಕಾಗಿ ಬಳಸಿಕೊಂಡು  ವಿಶೇಷವಾದ ಆಶ್ರಯ ಹಾಗೂ ಪ್ರೋತ್ಸಾಹವನ್ನು ನೀಡುರುವ ಬಗ್ಗೆ ವಿದ್ವಾಂಸರಾದ ಶ್ರೀಯುತ ಬನ್ನಂಜೆ ಗೋವಿಂದಾಚಾರ್ಯರು ಉಲ್ಲೇಖ ಪಡಿಸಿರುತ್ತಾರೆ
ಈ ರೀತಿಯಲ್ಲಿ ಸಮೃದ್ಧಗೊಂಡ ಯಕ್ಷಗಾನ ಕಲೆಯ ಕುರಿತಾಗಿ ಪ್ರಪ್ರಥಮವಾಗಿ ರಾಜ್ಯ ಮಟ್ಟದ ಸಮಗ್ರ ಯಕ್ಷ ಗಾನ ಸಮ್ಮೇಳನವು 2023  ಫೆಬ್ರವರಿ ತಿಂಗಳ 11,12 ರಂದು ಉಡುಪಿ ಜಿಲ್ಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯಕ್ಷಗಾನ ಅಕಾಡೆಮಿ ಹಾಗೂ ಜಿಲ್ಲಾಡಳಿತ ಉಡುಪಿ ಜಿಲ್ಲೆ ಇದರ ಆಯೋಜನೆಯಲ್ಲಿ ಎಂ.ಜಿ ಎಂ ಕಾಲೇಜಿನ ಆವರಣದ ಸಭಾಂಗಣದಲ್ಲಿ  ನೆರವೇರುತ್ತಿರುವುದು ಹೆಮ್ಮೆಯ ಹಾಗೂ ಸಂತಸದ ವಿಚಾರವಾಗಿದೆ.
ಈ ಸಮ್ಮೇಳನವನ್ನು ಕರ್ನಾಟಕ ಸರಕಾರದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಯವರಿಂದ ಉದ್ಘಾಟನೆಗೊಂಡು , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ  ಸನ್ಮಾನ್ಯ ಶ್ರೀ ವಿ . ಸುನಿಲ್ ಕುಮಾರ್  ಹಾಗೂ ಉಡುಪಿ ಶಾಸಕರಾದ ಶ್ರೀ ಕೆ .ರಘುಪತಿ ಭಟ್ಟರ ನೇತೃತ್ವದಲ್ಲಿ , ಡಾ ಎಂ.ಪ್ರಭಾಕರ್ ಜೋಷಿಯವರ ಸಮ್ಮೇಳನಾಧ್ಯಕ್ಷತೆಯಲ್ಲಿ, ವೈಭವೋಪೇತವಾಗಿ ಸಂಪನ್ನಗೊಳ್ಳಲಿದೆ.
ಕರ್ನಾಟಕ ಯಕ್ಷಗಾನ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷರಾದ ಡಾ . ಜಿ .ಎಲ್  ಹೆಗಡೆಯವರು ಕಾರ್ಯಾಧ್ಯ ಕ್ಷರಾಗಿ, ಪ್ರಧಾನ ಸಂಚಾಲಕರಾಗಿ ಶ್ರೀ  ಪಿ.ಕಿಶನ್ ಹೆಗ್ಡೆ, ಯಜಮಾನರು, ಸಾಲಿಗ್ರಾಮ ಮೇಳ ಇವರು ಸಮಿತಿಯ ಸರ್ವ ಸದಸ್ಯರ ಜೊತೆ ಸೇರಿಕೊಂಡು ಸಮ್ಮೇಳನದ ಕಾರ್ಯ ನಿರ್ವಹಿಸಲಿದ್ದಾರೆ  
ಈ ಸಮ್ಮೇಳನವು ಸಮಗ್ರವಾಗಿ ಯಕ್ಷಗಾನ ಕಲೆಯ ಎಲ್ಲ ಮಜಲುಗಳನ್ನು ಒಳಗೊಂಡು, ಯಕ್ಷಗಾನ ಆಧಾರಿತ ಘಟ್ಟದ ಕೋರೆ, ಬೊಂಬೆಯಾಟ ,ಮೂಡಲಪಾಯ, ಪಡುವಲಪಾಯ, ಕೇಳಿಕೆ, ಮುಂತಾದ ಎಲ್ಲಾ ಪ್ರಕಾರದ ಕಲಾತಂಡಗಳ ಪ್ರದರ್ಶನಗಳನ್ನು ಒಳಗೊಂಡಿರುತ್ತದೆ. ಯಕ್ಷಗಾನ ಪ್ರದರ್ಶನ, ಯಕ್ಷಗಾನ ತಾಳಮದ್ದಳೆ,   ಕಿಶೋರ ಯಕ್ಷಗಾನ, ಪ್ರದರ್ಶನ ಮಹಿಳಾ ಯಕ್ಷಗಾನ ಪ್ರದರ್ಶನಗಳು , ಅಹೋರಾತ್ರಿ ಪ್ರದರ್ಶನಗೊಳ್ಳಲಿದೆ.
 ಯಕ್ಷಗಾನದ ಸಮಸ್ಯೆಗಳು ಕಲೆ ಎದುರಿಸುತ್ತಿರುವ ಸವಾಲುಗಳು ಯಕ್ಷಗಾನ ಮೂಲ ಸ್ವರೂಪ, ಕಲಾವಿದರ ಸಮಸ್ಯೆಗಳ ಕುರಿತು ವಿದ್ವಾಂಸರ ಗೋಷ್ಠಿಗಳು ನಡೆಯಲಿದೆ. ಹೆಸರಾಂತ ಹಿರಿಯ ಯಕ್ಷಗಾನ ಕಲಾವಿದರ ನಾಮಫಲಕಗಳು ಉಳ್ಳ ಸುಮಾರು 50 ದ್ವಾರಗಳನ್ನು ರಚಿಸಿ ಸಮ್ಮೇಳನದ ಮೆರುಗು ಹೆಚ್ಚಿಸಲಾಗುವುದು.
 ಭಾರತ ಸ್ವಾತಂತ್ರ 75ನೇ ಮಹೋತ್ಸವದ ವರ್ಷದಲ್ಲಿ ಪ್ರಥಮ ಬಾರಿಗೆ ನಡೆಯುತ್ತಿರುವ ಈ ಯಕ್ಷಗಾನ ಸಮ್ಮೇಳನದಲ್ಲಿ ಯಕ್ಷಗಾನ ಎಲ್ಲ ಪ್ರಕಾರದ ಕಲೆಯಲ್ಲಿ ಅಪ್ರತಿಮ ಸಾಧನೆಗೈದ 75 ಜನ ಹಿರಿಯ  ಕಲಾವಿದ ರನ್ನು ಗುರುತಿಸಿ ಸನ್ಮಾನಿಸಲಾಗುವುದು. ಜೊತೆಗೆ ಕಲೆಯಲ್ಲಿ ಸಹಾಯಕರಾಗಿ ದುಡಿದ ಕಲಾವಿದರಿಗೂ, ಮೇಳದ ಯಜಮಾನರುಗಳಿಗೆ, ಮಹಿಳಾ ಕಲಾವಿದರಿಗೆ, ಸಂಶೋಧಕರಿಗೆ , ಯಕ್ಷಗಾನ ಕೇಂದ್ರಗಳಿಗೆ , ಸೇವಾ ಸಂಸ್ಥೆಗಳಿಗೆ , ಯಕ್ಷಗಾನ ಪತ್ರಿಕೋದ್ಯಮಗಳಿಗೆ , ಈ ಸಮ್ಮೇಳನದಲ್ಲಿ ಸನ್ಮಾನಿಸಲಾಗುವುದು .
ಯಕ್ಷಗಾನ ಕ್ಷೇತ್ರದಲ್ಲಿ ಸೇವೆಗೈದ ದೈವಾಧೀನರಾದ ಹಿರಿಯ ಕಲಾವಿದರ ಭಾವಚಿತ್ರ ಹಾಗೂ ವೇಷದ ಚಿತ್ರಗಳನ್ನು ಪ್ರದರ್ಶಿಸಲಾಗುವುದು. ಯಕ್ಷಗಾನ ಕಲೆಯ ಎಲ್ಲಾ ಪ್ರಕಾರಗಳ ಎಲ್ಲ ವಿಭಾಗಗಳ ವಿವರಗಳನ್ನು ಒಳಗೊಂಡ ಪುಸ್ತಕ ಪ್ರದರ್ಶನ , ವೇಷಭೂಷಣ ,  ಹಾಗೂ  ಪುಸ್ತಕ ಮಾರಾಟ ,  ಮುಂತಾದ ವಿವಿಧ ಮಳಿಗೆಗಳನ್ನು ನಿರ್ಮಿಸಲಾಗುವುದು.
ಸುರೇಂದ್ರ ಪಣಿಯೂರು
ಯಕ್ಷಗಾನ ಭಾಗವತರು, ವಿದ್ವಾಂಸರು
 
 
 
 
 
 
 
 
 
 
 

Leave a Reply