ತಾಜಾ ಬೆಣ್ಣೆಯನ್ನು ಕದ್ದು ತಿನ್ನುವ ನವನೀತನೀತ…
ವಸುದೇವ ದೇವಕಿಯ ಮಗ ವಾಸುದೇವ ನಾಮದಿ ಪ್ರಖ್ಯಾತ…
ನಂದಗೋಪ ಯಶೋದಾನಂದನನಾಗಿ ಗೋಪ ಗೋಪಿ ಪ್ರಿಯನೀತ…
ದುಷ್ಟ ಶಿಕ್ಷಣ ಶಿಷ್ಟ ರಕ್ಷಣೆಯೊಂದಿಗೆ ರಾಕ್ಷಸರಿಗೆ ಸದಾ ಶತ್ರುವಾದ ಅಸುರಾರಿ ಈತ..
ತಪ್ಪುಗಳ ಮನ್ನಿಸಿ ಪಾಪಿಗಳನ್ನುದ್ಧರಿಸುವ ಪತಿತಪಾವನನೀತ..
ಕೊಳಲನ್ನು ಸದಾ ತನ್ನೊಂದಿಗಿರಿಸಿಕೊಂಡಿರುವ ವೇಣುನಾದ ಪ್ರಿಯ ಮುರಳೀಧರನೀತ…
ಮೋಡದಂತೆ ಕಪ್ಪು ಮೈಬಣ್ಣ ಹೊತ್ತ ಘನಶ್ಯಾಮನೀತ..
ನಾಮಜಪದಿಂದಲೇ ಎಲ್ಲ ಕ್ಲೇಶ ಕಳೆವ ಕೇಶವನೀತ..
ಗೋವರ್ಧನ ಗಿರಿಯನ್ನು ಕಿರುಬೆರಳಲ್ಲಿ ಎತ್ತಿದ ಗಿರಿಧರನೀತ…
ರಕ್ಷಣೆಯ ಹೊಣೆ ಹೊತ್ತ ರಾಕ್ಷಸ ಶತ್ರು ಅಸುರಾರಿ ಈತ..
ಗೋವುಗಳನ್ನು ಪ್ರೀತಿಸಿ ಪೊರೆವ ಗೋಪಾಲನೀತ…
ಮುಕ್ತಿ ನೀಡುವ ಮುಕುಂದನಾಗಿ ವೈಕುಂಠವಾಸಿಯಾಗಿರುವ ವಿಷ್ಣು ಈತ..
ಜಗತ್ತಿಗೇ ಪ್ರಭುವಾದ ಜಗನ್ನಾಥನೀತ…
ಸಕಲ ಲೋಕ ಪಾಲಕ, ಸರ್ವ ವ್ಯಾಪಿ, ವಿಶ್ವ ಚೈತನ್ಯ, ಜಗತ್ ರಕ್ಷಕ, ಗೋವಿಂದ,
ಮನೆಮನೆಗಳಲ್ಲಿ ಶ್ರೀ ಕೃಷ್ಣ ನ ಅನುಗ್ರಹವಿರಲಿ..
ಮನ ಮನಗಳಲ್ಲಿ ಅವನ ಚಿಂತನೆ, ಆದರ್ಶ, ವ್ಯಕ್ತಿತ್ವ ಅನುರಣಿಸುತಲಿರಲಿ…
ಮುದ್ದು ಕಂದಮ್ಮಗಳಲ್ಲಿ ಶ್ರೀ ಕೃಷ್ಣನ ಕಂಡು ಧನ್ಯತೆಯ ಭಾವ ಲಹರಿ ಹರಿಯಲೆಂಬ ಆಶಯದೊಂದಿಗೆ ಮನೆಯೊಳಗೇ ಕುಳಿತು ಜನ್ಮಾಷ್ಟಮಿಯ ಆಚರಣೆಯ ವೈಭವವನ್ನು ಸಂಭ್ರಮಿಸೋಣ.. ರಜತಪೀಠಪುರದೊಡೆಯ ಅನುಗ್ರಹಿಸಲಿ ಅನವರತ ಎಂದು ಪ್ರಾರ್ಥಿಸೋಣ…