ಇಂಡಿಯನ್‌ ಐಡಲ್‌ ಫೈನಲಿಸ್ಟ್‌ ನಿಹಾಲ್‌ ತಾವ್ರೋಗೆ ಅಭಿನಂದನೆ

ಉಡುಪಿ: ನಿಹಾಲ್‌ ತಾವ್ರೋ ತಮಗೆ ಲಭಿಸಿದ ಅವಕಾಶವನ್ನು ಉಪಯೋಗಿಸಿಕೊಂಡು ಇಂದು ಇಂಡಿಯನ್‌ ಐಡಲ್‌ ನ ಫೈನಲ್‌ ಹಂತಕ್ಕೆ ತಲುಪುವ ಮೂಲಕ ಇಡೀ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ ಎಂದು ಉಡುಪಿ ಕೆಥೊಲಿಕ್‌ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ ಡಾ ಜೆರಾಲ್ಡ್‌ ಐಸಾಕ್‌ ಲೋಬೊ ಹೇಳಿದರು.

ಭಾನುವಾರ ಉಡುಪಿಯಲ್ಲಿ ಉಡುಪಿ ಧರ್ಮಪ್ರಾಂತ್ಯದ ವತಿಯಿಂದ ಇಂಡಿಯನ್‌ ಐಡಲ್‌ ಫೈನಲಿಸ್ಟ್‌ ನಿಹಾಲ್‌ ತಾವ್ರೋಗೆ ಅಭಿನಂಧಿಸಿ ಮಾತನಾಡಿದರು.ನಿಹಾಲ್‌ ಅವರು ಏಕಾ ಏಕಿಯಾಗಿ ಈ ಹಂತಕ್ಕೆ ತಲುಪಿಲ್ಲ ಬದಲಾಗಿ ತಮಗೆ ಸಿಕ್ಕಿದ ಸಣ್ಣ ಪುಟ್ಟ ಅವಕಾಶಗಳನ್ನು ಬಳಸಿಕೊಂಡು ಮುಂದುವರೆದು ಈ ಹಂತ ತಲುಪಿದ್ದಾರೆ. ನಮಗೆ ಸಿಕ್ಕಿದ ಅವಕಾಶವನ್ನು ಬಳಸಿಕೊಳ್ಳದೆ ಇದ್ದಾಗ ನಾವು ಮುಂದುವರೆಯಲು ಅಸಾಧ್ಯವಾಗಿದೆ. 

ಕೆಲವೊಮ್ಮೆ ನಾವು ಒಂದು ಹಂತಕ್ಕೆ ತಲುಪಿ ಅಲ್ಲಿಗೆ ನಿಲ್ಲುವುದು ಸಾಮಾನ್ಯ ಆದರೆ ನಿಹಾಲ್‌ ಪ್ರತಿಬಾರಿ ಒಂದು ಹಂತ ತಲುಪಿದಾಗ ಮುಂದೆ ಇರುವ ಉನ್ನತ ಹಂತ ಯಾವುದು ಎನ್ನುವುದು ಅರಿತು ಮುಂದುವರೆದಾಗ ಇನ್ನಷ್ಟು ಸಾಧನೆ ಮಾಡಲು ಸಾಧ್ಯವಿದೆ. ಕಠಿಣ ಪರಿಶ್ರಮ ಮನುಷ್ಯನಿಗೆ ಸ್ಥಾನ ನೀಡುವುದರಲ್ಲಿ ಎರಡು ಮಾತಿಲ್ಲ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ನಿಹಾಲ್‌ ತಾವ್ರೋ ತಾನು ನನ್ನ ಸಂಗೀತದ ಯಾತ್ರೆ ಆರಂಭಿಸಿದ್ದು ಚರ್ಚ್‌ ಹಂತದಿಂದ. ಚರ್ಚಿನ ಗಾಯನ ಪಂಗಡದಲ್ಲಿ ತನಗೆ ಸಿಕ್ಕಿದ ಅವಕಾಶವನ್ನೇ ಬಳಸಿಕೊಂಡು ಮುಂದುವರೆದು ಇಂದು ಈ ಹಂತಕ್ಕೆ ಬರಲು ಸಾಧ್ಯವಾಗಿದೆ. ಮನುಷ್ಯನಿಗೆ ಅವಕಾಶಗಳು ಲಭಿಸುತ್ತವೆ ಆದರೆ ಅದನ್ನು ಬಳಸಿಕೊಳ್ಳಬೇಕು ಈ ಮೂಲಕ ಸಾಧನೆ ಮಾಡಲು ಸಾಧ್ಯವಾಗುತ್ತದೆ. ತಾನು ಸ್ಪರ್ಧೇಯಲ್ಲಿ ಭಾಗವಹಿಸಿದಾಗ ತನ್ನನ್ನು ಪ್ರತಿಯೊಬ್ಬರು ಬೆಂಬಲಿಸಿದ್ದರ ಪರಿಣಾಮ ಇಂದು ನನಗೆ ಈ ಹಂತದಲ್ಲಿ ಗೌರವ ಲಭಿಸಲು ಸಾಧ್ಯವಾಗಿದೆ ಎಂದರು.

ಇದೇ ವೇಳೆ ಧರ್ಮಪ್ರಾಂತ್ಯದ ವಿವಿಧ ಸಂಘಟನೆಗಳು, ಧರ್ಮಗುರುಗಳು ನಿಹಾಲ್‌ ಅವರನ್ನು ಗೌರವಿಸಿದರು. ನಿಹಾಲ್‌ ತಂದೆ ಹೆರಾಲ್ಡ್‌ ತಾವ್ರೋ, ತಾಯಿ ಪ್ರೆಸಿಲ್ಲಾ ತಾವ್ರೋ, ಸಹೋದರ ನಿಶಾನ್‌ ತಾವ್ರೋ, ಕೆಥೊಲಿಕ್‌ ಸಭಾ ಉಡುಪಿ ಪ್ರದೇಶದ ಆಧ್ಯಾತ್ಮಿಕ ನಿರ್ದೇಶಕ ವಂ.ಫರ್ಡಿನಾಂಡ್‌ ಗೊನ್ಸಾಲ್ವಿಸ್‌, ನಿವೃತ್ತ ಧರ್ಮಗುರು ವಂ.ವಿಲಿಯಂ ಮಾರ್ಟಿಸ್ ಉಪಸ್ಥಿತರಿದ್ದರು. 

ಉಡುಪಿ ಶೋಕಮಾತಾ ಇಗರ್ಜಿಯ ಧರ್ಮಗುರು ವಂ.ಚಾರ್ಲ್ಸ್‌ ಮಿನೇಜಸ್‌ ಸ್ವಾಗತಿಸಿ, ವಂದಿಸಿ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply