ಅಥ್ಲೆಟಿಕ್ಸ್ನಲ್ಲಿ ಭಾರತಕ್ಕೆ ಮೊದಲ ಒಲಿಂಪಿಕ್ಸ್ ಚಿನ್ನದ ಪದಕ ಗೆದ್ದ 23 ವರ್ಷದ ನೀರಜ್ ಚೋಪ್ರಾ ಅವರಿಗೆ ಮೊದಲು ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ 6 ಕೋಟಿ ರೂ. ನಗದು ಬಹುಮಾನ ಘೋಷಿಸಿದ್ದಾರೆ. ಜೊತೆಗೆ ಕ್ಲಾಸ್-1 ಸರ್ಕಾರಿ ಉದ್ಯೋಗ ನೀಡುವುದಾಗಿ ಹೇಳಿದ್ದಾರೆ.
ಚಿನ್ನದ ಪದಕ ಗೆದ್ದ ನೀರಜ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಒಂದು ಕೋಟಿ ರೂ. ಬಹುಮಾನ ಘೋಷಿಸಿದೆ. ಈ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ 2 ಕೋಟಿ ರೂ. ಬಹುಮಾನ ಘೋಷಿಸಿದ್ದಾರೆ. ಚೋಪ್ರಾ ಕುಟುಂಬವು ಪಂಜಾಬ್ ಮೂಲದ್ದಾಗಿದ್ದು, ಇದು ಪಂಜಾಬ್ ರಾಜ್ಯಕ್ಕೆ ಹೆಮ್ಮೆಯ ವಿಚಾರ ಎಂದು ಹೇಳಿದ್ದಾರೆ. ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ನ ತಂಡ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯೂ 1 ಕೋಟಿ ರೂ. ಬಹುಮಾನ ನೀಡುವುದಾಗಿ ತಿಳಿಸಿದೆ.
ವಿಮಾನಯಾನ ಸಂಸ್ಥೆ ಇಂಡಿಗೋ ಭಾರತದ ಯಾವುದೇ ಸ್ಥಳಕ್ಕೆ ಪ್ರಯಾಣಿಸಲು ನೀರಜ್ಗೆ ಒಂದು ವರ್ಷಗಳ ಕಾಲ ಉಚಿತ ಸೇವೆ ನೀಡುವುದಾಗಿ ತಿಳಿಸಿದೆ. ಭಾರತದ ಕಾರು ತಯಾರಿಕಾ ಮಹಿಂದ್ರಾ ಸಂಸ್ಥೆಯ ಮುಖ್ಯಸ್ಥರಾದ ಆನಂದ್ ಮಹಿಂದ್ರಾ ಅವರು ನೂತನ ಎಕ್ಸ್ಯುವಿ 700 ಐಶಾರಾಮಿ ಕಾರನ್ನು ನೀರಜ್ಗೆ ಉಡುಗೊರೆಯಾಗಿ ನೀಡುವುದಾಗಿ ಘೋಷಿಸಿದ್ದಾರೆ.
ನೀರಜ್ ಮಾಡಿದ ಐತಿಹಾಸಿಕ ಸಾಧನೆಗೆ ಒಡಿಶಾ ಸರಕಾರ 1 ಕೋಟಿ ರೂ. ಮಣಿಪುರ ಸರಕಾರ ಕೂಡ 1 ಕೋಟಿ ರೂ. ಘೋಷಿಸಿದೆ. ಈ ಮೂಲಕ ಚಿಕ್ಕ ರಾಜ್ಯಗಳಾದರೂ ಬಹುಮಾನ ಘೋಷಿಸುವ ಮೂಲಕ ಕ್ರೀಡಾಸ್ಫೂರ್ತಿ ಮೆರೆದಿದ್ದಾರೆ. ಚಿನ್ನದ ಪದಕ ಮುಡಿಗೇರಿಸಿಕೊಂಡ ನೀರಜ್ ಜೀವಿತಾವಧಿವರೆಗೆ ದೇಶದ ಯಾವುದೇ ಸ್ಥಳದಿಂದ ನಿಗಮದ ಎಲ್ಲಾ ಬಸ್ನಿಂದಲೂ ಉಚಿತವಾಗಿ ಪ್ರಯಾಣಿಸಬಹುದು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹೇಳಿದೆ.
ಈ ನಡುವೆ ರಿಯಾಲಿಟಿ ಸಂಸ್ಥೆ ಎಲಾನ್ ಗ್ರೂಪ್ನ ಮುಖ್ಯಸ್ಥ ರಾಕೇಶ್ ಕಪೂರ್ ಕೂಡ 25 ಲಕ್ಷ ರೂ.ಗಳ ಬಹುಮಾನ ನೀಡಲು ಮುಂದಾಗಿದ್ದಾರೆ. ಒಟ್ಟಾರೆ ವಿವಿಧ ಮೂಲಗಳಿಂದ ನೀರಜ್ಗೆ ಈವರೆಗೆ ಒಟ್ಟು 12 ಕೋಟಿ 25 ಲಕ್ಷ ರೂ. ಬಹುಮಾನ ಮೊತ್ತ ಹರಿದು ಬಂದಿದೆ.