ತುಳುನಾಡಿನ ಖ್ಯಾತ ನಟ ರೂಪೇಶ್ ಶೆಟ್ಟಿ ‘ಬಿಗ್ ಬಾಸ್ ಕನ್ನಡ ಒಟಿಟಿ’ ಶೋನ ವಿನ್ನರ್ ಆಗಿ ಹೊರ ಹೊಮ್ಮಿದ್ದಾರೆ.
ಕಿಚ್ಚ ಸುದೀಪ್ ರವರ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಕನ್ನಡದ ಓಟಿಟಿ ಬಿಗ್ ಬಾಸ್ ಮುಕ್ತಾಯ ಹಂತಕ್ಕೆ ಬಂದಿದೆ. ಓಟಿಟಿ ಯಲ್ಲಿ ಆಯ್ಕೆಯಾಗುವಂತಹ ನಾಲಕ್ಕು ಆಟಗಾರರು ಟೆಲಿವಿಷನ್ ಬಿಗ್ ಬಾಸ್ ಗೆ ಆಯ್ಕೆಯಾಗುತ್ತಾರೆ. ಆ ಪೈಕಿ ರೂಪೇಶ್ ಶೆಟ್ಟಿ ಅವರು ಟಾಪರ್ ಆಗಿದ್ದಾರೆ. ಅವರಿಗೆ ಫಿನಾಲೆ ವೇದಿಕೆಯಲ್ಲಿ 5 ಲಕ್ಷ ರೂಪಾಯಿ ಬಹುಮಾನ ನೀಡಲಾಯಿತು.
ಕೊನೇ ವಾರದಲ್ಲಿ ವಿಶೇಷ ಟಾಸ್ಕ್ಗಳನ್ನು ನೀಡಲಾಗಿತ್ತು. ಅವುಗಳಲ್ಲಿ ಬೆಸ್ಟ್ ಪರ್ಫಾರ್ಮೆನ್ಸ್ ನೀಡುವ ಮೂಲಕ ರೂಪೇಶ್ ಶೆಟ್ಟಿ ಅವರು ಈ ಬಹುಮಾನದ ಮೊತ್ತ ಪಡೆಯುವಲ್ಲಿ ಯಶಸ್ವಿ ಆಗಿದ್ದಾರೆ. ಅವರ ಜೊತೆಗೆ ರಾಕೇಶ್ ಅಡಿಗ, ಸಾನ್ಯಾ ಐಯ್ಯರ್ ಹಾಗೂ ಆರ್ಯವರ್ಧನ್ ಗುರೂಜಿ ಕೂಡ ಟಿವಿ ಸೀಸನ್ಗೆ ನೇರ ಟಿಕೆಟ್ ಪಡೆದುಕೊಂಡಿದ್ದಾರೆ.
ತಮ್ಮದೇ ರೀತಿಯಲ್ಲಿ ರೂಪೇಶ್ ಶೆಟ್ಟಿ ಅವರು ಗುರುತಿಸಿಕೊಂಡಿದ್ದರು. ಸಾನ್ಯಾ ಐಯ್ಯರ್ ಜೊತೆಗೆ ಅವರು ಹೆಚ್ಚು ಆಪ್ತವಾಗಿದ್ದರು. ದೊಡ್ಮನೆಯಲ್ಲಿ ಅವರು ಕಿರಿಕ್ ಮಾಡಿಕೊಂಡಿದ್ದು ಕಡಿಮೆ. ಸಾಧ್ಯವಾದಷ್ಟು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಗುಣ ಅವರದ್ದಾಗಿತ್ತು. ಈ ಎಲ್ಲ ಕಾರಣದಿಂದಾಗಿ ಅವರು ಜನಮನ ಗೆದ್ದಿದ್ದಾರೆ. ಹೆಚ್ಚು ವೋಟ್ ಪಡೆಯುವ ಮೂಲಕ ಟಾಪರ್ ಸ್ಥಾನ ಗಳಿಸಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 9’ ಶೋ ಸೆಪ್ಟೆಂಬರ್ 24ರಿಂದ ಆರಂಭ ಆಗಲಿದೆ. ಅದನ್ನು ಕೂಡ ಕಿಚ್ಚ ಸುದೀಪ್ ಅವರು ನಡೆಸಿಕೊಡಲಿದ್ದಾರೆ. ಬಿಗ್ ಬಾಸ್ ಕನ್ನಡ ಒಟಿಟಿ ಫಿನಾಲೆಯಲ್ಲಿ ಗೆದ್ದ ರೂಪೇಶ್ ಶೆಟ್ಟಿ, ಸಾನ್ಯಾ ಐಯ್ಯರ್, ಆರ್ಯವರ್ಧನ್ ಗುರೂಜಿ ಹಾಗೂ ರಾಕೇಶ್ ಅಡಿಗ ಜೊತೆಯಲ್ಲಿ ಹಳೇ ಸೀಸನ್ನ 5 ಸ್ಪರ್ಧಿಗಳು ಕೂಡ 9ನೇ ಸೀಸನ್ಗೆ ಎಂಟ್ರಿ ನೀಡಲಿದ್ದಾರೆ. ಅವರ ಜೊತೆ 9 ಹೊಸ ಸ್ಪರ್ಧಿಗಳಿಗೆ ಅವಕಾಶ ಸಿಗುತ್ತಿದೆ. ಅವರೆಲ್ಲರ ನಡುವೆ ರೂಪೇಶ್ ಶೆಟ್ಟಿ ಅವರು ಯಾವ ರೀತಿ ಗುರುತಿಸಿಕೊಳ್ಳಲಿದ್ದಾರೆ ಅಂತಾ ಕಾದು ನೋಡಬೇಕು.