ಭಗವಂತನ ಭಜನೆ ಎಂದರೆ ಮಂಗಳಾರತಿ ಅಲ್ಲ ಬದಲಾಗಿ ಭಗವಂತ ಹೇಳಿದ ಹಾಗೆ ನಡೆದುಕೊಳ್ಳಬೇಕು.~    ಪೇಜಾವರ ಶ್ರೀಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು 

ಭಾರತ ಸಾಂಸ್ಕೃತಿಕವಾಗಿ ಶ್ರೀಮಂತ ರಾಷ್ಟ್ರ, ಹಲವು ಧರ್ಮ, ಹಲವು ಭಾಷೆ ಹೀಗೆ ವಿಭಿನ್ನ ಸಂಸ್ಕೃತಿಯನ್ನು ತನ್ನೊಡಲ ಒಳಗೆ ಮಕ್ಕಳಂತೆ ಸಾಕಿ ಬೆಳೆಸಿರುವ ವೈವಿಧ್ಯತೆಯಲ್ಲಿ ಏಕತೆಯನ್ನು ಸಾಧಿಸಿರುವ ರಾಷ್ಟ್ರ . ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ ದ.ರಾ. ಬೇಂದ್ರೆರವರ ಈ ಗೀತೆಯ ಸಾಲುಗಳು ಸದಾ ನಮ್ಮ ನಿಮ್ಮಲ್ಲಿ ಮನದಲ್ಲಿ ಮೂಡಿ ಬರುವುದು ಮಾತ್ರವಲ್ಲ ಹಾಡುವಂತೆ ಮಾಡುತ್ತದೆ.
ಚೈತ್ರ ಮಾಸದ ಮೊದಲ ದಿನವನ್ನು ಭಾರತದಲ್ಲಿ ಯುಗಾದಿ ಅಂದರೆ ಹೊಸ ವರ್ಷದ ಮೊದಲ ದಿನವೆಂದು ಆಚರಿಸಲಾಗುತ್ತದೆ. ಕೇವಲ ಹಿಂದೂಗಳಷ್ಟೇ ಅಲ್ಲದೇ ಇಡೀ ಪ್ರಕೃತಿಯೇ ಯುಗಾದಿಯ ಆಗಮನಕ್ಕಾಗಿ ತನ್ನನ್ನೆ ತಾನು ಶೃಂಗಾರ ಮಾಡಿಕೊಳ್ಳುತ್ತದೆ. ಯುಗಾದಿ ಎಂದರೆ ಜನರು ಹರ್ಷದಿಂದ ಸಂಭ್ರಮ ಸಡಗರದಿಂದ ಆಚÀರಣೆ ಮಾಡುತ್ತಾರೆ. ಸಾಂಪ್ರಾದಾಯಿಕವಾಗಿ ಸೂರ್ಯ ನಮಸ್ಕಾರ, ಪಂಚಾಂಗ ಪೂಜೆ ಹಾಗೂ ಬೇವು ಬೆಲ್ಲವನ್ನು ತಿನ್ನುವುದರ ಮೂಲಕ ಜೀವನದಲ್ಲಿ ಕಹಿ-ಸಿಹಿಗಳೆರಡನ್ನು ಸಮಾನವಾಗಿ ಸ್ವೀಕಾರ ಮಾಡಬೇಕೆನ್ನುವ ಸಂದೇಶವನ್ನು ಸಾರುವುದರ ಮೂಲಕ ಆಚರಿಸಲಾಗುತ್ತದೆ. 
   
ಕಳೆದ ಒಂದು ವರ್ಷದಿಂದ ಯುಗಾದಿಯನ್ನು ಭಾರತದಲ್ಲಿ ಸಂಭ್ರಮಿಸಲು ಸಡಗರದಿಂದ ಆಚರಿಸಲು ಸಾಧ್ಯ ವಾಗುತ್ತಿಲ್ಲ ಅದಕ್ಕೆ ಕಾರಣ ಕೋವಿಡ್-೧೯ ಎಂಬ ಕೊರೊನಾ ಹಾವಳಿ. ಜನರ ಜೀವನ ಶೈಲಿಯ ಮೇಲೆ ಹಿಡಿತ ಸಾಧಿಸಿರುವ ಕೋವಿಡ್-೧೯ನ ಕಾಟದಿಂದಾಗಿ ಹಬ್ಬದ ಸಂತೋಷ ಮಂಕಾಗಿದೆ. ಕೋವಿಡ್-೧೯ ಎಂಬ ಮಹಾ ಮಾರಿಯ ವಿರುದ್ಧ ಸಾರಿರುವ ಯುದ್ಧದಲ್ಲಿ ಮುಂಚೂಣಿ ಸೈನಿಕರಾಗಿ ಹೋರಾಡುತ್ತಿರುವ ಶುಶ್ರುಷಾ ಅಧಿಕಾರಿಗಳು ತಮ್ಮನ್ನು ತಾವು ಹುರಿದುಂಬಿಸಿಕೊಳ್ಳಲು ದೇವರ ಆಶೀರ್ವಾದ ಸದಾ ತಮ್ಮ ಮೇಲಿರಲೆಂದು ಆಶಿಸುತ್ತಾ ಈ ಬಾರಿಯ ಯುಗಾದಿಯನ್ನು ಅಂತರ್ಜಾಲದ ಮೂಲಕ ಒಬ್ಬರಿಗೊಬ್ಬರು ಶುಭ ಕೋರಿ, ಸಂಭ್ರಮದಿಂದ ಆಚರಿಸಿದರು.
ವಿಶ್ವಕನ್ನಡ ಶುಶ್ರುಷಾಧಿಕಾರಿಗಳು ಕ್ಷೇಮಾಭಿವೃದ್ಧಿ ಸಂಘವು ಲಂಡನ್‌ನಲ್ಲಿರುವ ರಾಘವೇಂದ್ರ ಕಾಂಬ್ಳುರವರ ಅಧ್ಯಕ್ಷತೆಯಲ್ಲಿ  ಶನಿವಾರದಂದು ವಿಶ್ವದ ಮೂಲೆಯಲ್ಲಿರುವ ಕನ್ನಡ ಶುಶ್ರುಷಕರನ್ನು ಒಂದುಗೂಡಿಸುವ ಮೂಲಕ ಅಂತರ್ಜಾಲದಲ್ಲಿ ಯುಗಾದಿ ಸಂಭ್ರಮವನ್ನು ಆಚರಿಸಿತು.
ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಉಡುಪಿಯ ಪೇಜಾವರ ಮಠದ ಶ್ರೀಶ್ರೀಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಗಳು ಭಗವಂತ ಶ್ರೀಕೃಷ್ಣನ ಪ್ರತಿಮೆ ಉಡುಪಿಯಲ್ಲಿ ಪ್ರತಿಷ್ಠಾಪನೆಯಾಯಿತು. ಮಧ್ವಾಚಾರ್ಯರು ಹೇಗೆ ಕೃಷ್ಣ ಸೇವೆಯನ್ನು ಮಾಡಿದರು ಎಂಬುದರ ಬಗ್ಗೆ ತಿಳಿಸಿದರು. ಭಗವಂತನ ಅನುಗ್ರಹದ ಜೊತೆಗೆ ನಮ್ಮ ಪ್ರಯತ್ನವೂ ಇರಬೇಕು. 
ಅನನ್ಯ ಭಕ್ತಿಯಿಂದ ಭಗವಂತನ ಪ್ರಾರ್ಥನೆ ಮಾಡಬೇಕು. ಭಗವಂತನ ಭಜನೆ ಎಂದರೆ ಮಂಗಳಾರತಿ ಅಲ್ಲ ಬದಲಾಗಿ ಭಗವಂತ ಹೇಳಿದ ಹಾಗೆ ನಡೆದುಕೊಳ್ಳಬೇಕು. ಬದುಕನ್ನು ಎಂಜಾಯ್‌ಮೆಂಟ್ ಅಂದು ಕೊಳ್ಳದೇ ಬದುಕನ್ನು ತಪ್ಪಸ್ಸು ಅಂದುಕೊಳ್ಳಬೇಕು. ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು. ಕೋವಿಡ್-೧೯ ಎಂಬ ಭಾದೆ ನಮ್ಮನ್ನು ಕಾಡುತ್ತಿದೆ.
ಇದನ್ನು ಹೋಗಲಾಡಿಸಲು ಭಗವಂತ ಕೃಷ್ಣನ ಕೃಪೆಯಿರಬೇಕು. ಹಾಗೂ ನಮ್ಮೆಲ್ಲರ ಸಂಪೂರ್ಣ ಪ್ರಯತ್ನವನ್ನು ಮಾಡಬೇಕು. ಎಲ್ಲ ಸಮಸ್ಯೆಗಳೂ ದೂರವಾಗಿ ಸರ್ವರೂ ಸುಖದಿಂದ ಜೀವಿಸುವಂತಾಗಲಿ ಎಂದು ಆಶಿರ್ವಚನ ವನ್ನು ನೀಡಿದರು. ಸಂಸ್ಕೃತ ವಿದ್ವಾನ್ ಶ್ರೀ ಮಾಧವ ಅಡಿಗರವರು ಯುಗಾದಿ ಹಬ್ಬದ ಆಚರಣೆ ಯಾಕೆೆ ಮಾಡ ಲಾಗುತ್ತದೆ, ಹೇಗೆ ಮಾಡಲಾಗುತ್ತದೆ ಎಂಬುದರ ಬಗ್ಗೆ ಸವಿಸ್ತಾರವಾಗಿ ಸಂಸ್ಕೃತ ಶ್ಲೋಕದ ಜೊತೆಜೊತೆಗೆ ಕನ್ನಡದಲ್ಲಿ ವಿವರಣೆಯನ್ನು ನೀಡುವುದರ ಮೂಲಕ ಎಲ್ಲರ ಮನದಟ್ಟಾಗುವಂತೆ ತಿಳಿಸಿದರು.
 ಪಂಚಾಂಗದ ಮಹತ್ವದ ಬಗ್ಗೆ ಈ ವರ್ಷದ ಪಂಚಾಂಗ ಹೇಗಿದೆ ಎಂಬುದರ ಬಗ್ಗೆ ಹಾಗೂ ಈ ವರ್ಷದ ದ್ವಾದಶ ರಾಶಿಫಲಗಳನ್ನು ಸಹ ಮಾಧವ ಅಡಿಗರವರು ಅಲ್ಪ ಸಮಯದಲ್ಲಿ ವಿವರಿಸಿದರು. ಕನ್ನಡ ಶುಶ್ರುಷಾ ಅಧಿಕಾರಿ ಗಳನ್ನು ಉತ್ತೇಜಿಸುವ ಸಲುವಾಗಿ ಹುಟ್ಟಿಕೊಂಡಿರುವ ಈ ಸಂಘವು ಈಗಾಗಲೇ ಹಲವು ಕಾರ್ಯಕ್ರಮಗಳನ್ನು
ಅಂತರ್ಜಾಲದ ಮೂಲಕ ನಡೆಸಿದೆ.
ಲಂಡನ್‌ನಲ್ಲಿರುವ ವಿಶ್ವಕನ್ನಡ ಶುಶ್ರುಷಾಧಿಕಾರಿಗಳು ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಘವೇಂದ್ರ ಕಾಂಬ್ಳು ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಾಗಚಂದ್ರಿಕಾ ಭಟ್, ಜಯಲಕ್ಷ್ಮೀ  ಸವಿತಾ ರಾಮಯ್ಯ ವಿವಿಧ ಗೀತೆ ಗಳನ್ನು ಹಾಡಿದರು. ವಿದ್ಯಾ ಸಾಲಿಯಾನ್ ಸ್ವಾಗತಿಸಿದರು. ವಿಶ್ವ ಆರೋಗ್ಯ ದಿನಾಚರಣೆಯ ಅಂಗವಾಗಿ ನಡೆಸಿದ ಸ್ಪರ್ಧೆಯ ಬಹುಮಾನ ವಿಜೇತರ ಪಟ್ಟಿಯನ್ನು ಡಾ| ಕಾತ್ಯಾಯಿನಿ ವಾಚಿಸಿದರು. ಲೀಲಾ ಗಣೇಶ್ ವಂದಿಸಿದರು.
 
 
 
 
 
 
 
 
 
 
 

Leave a Reply