ಉಡುಪಿ : ರಾಮನವಮಿಯ ಸ್ಮರಣೆಯಲ್ಲಿ ಕುಂದಾಪುರ ತಾಲೂಕಿನ ಮೊಳಹಳ್ಳಿ ನಿವಾಸಿ ಉಮೇಶ್ ಆಚಾರ್ ದಂಪತಿಗಳಿಗೆ ಪೇಜಾವರ ಶ್ರೀಗಳು ಮನೆ ಪೂರ್ಣಗೊಳಿಸಲು ನೆರವು ನೀಡಿದ್ದು, ಇಂದು ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಗಳು ಜ್ಯೋತಿ ಬೆಳಗಿಸಿ ಹರಸಿದರು.
ಶ್ರೀಗಳು ಮಾತನಾಡಿ, ದೇವರಲ್ಲಿ ಪ್ರಾರ್ಥನೆ ಮಾಡುವ ಪೂರ್ವದಲ್ಲಿ ನಮಗಿಂತ ಕಷ್ಟದಲ್ಲಿರುವ ವ್ಯಕ್ತಿಗಳಿಗೆ ಯಾ ಜೀವಿಗಳಿಗೆ ನೆರವು ನೀಡಿ, ನಮ್ಮ ಬೇಡಿಕೆ ಮಂಡಿಸಿದರೆ ದೇವರು ಶೀಘ್ರ ಪ್ರಸನ್ನರಾಗುತ್ತಾರೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದೊಂದಿಗೆ, ನಾಡು ರಾಮರಾಜ್ಯವಾಗಬೇಕಾದರೆ ಪ್ರಜೆಗಳು ಸಂತೃಪ್ತಿಯಿಂದಿರಬೇಕು. ಈ ಹಿನ್ನಲೆಯಲ್ಲಿ ಭಾಗಶಃ ನಿರ್ಮಾಣಗೊಂಡ ಈ ಮನೆಗೆ ಶ್ರೀ ಮಠದಿಂದ ನೆರವು ನೀಡಿದ್ದೇವೆ. ಉಮೇಶ ಆಚಾರ್ಯರ ಕುಟುಂಬದ ಕಷ್ಟ ದೂರವಾಗಿ ಸಂತಸದಿಂದ ನೂತನ ಮನೆಯಲ್ಲಿ ಬಾಳುವಂತಾಗಲೆಂದು ಹರಸಿ, ಅನುಗ್ರಹಿಸಿದರು.
ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್, ಶ್ರೀಗಳ ಆಪ್ತ ಕಾರ್ಯದರ್ಶಿ ವಿಷ್ಣುಮೂರ್ತಿ ಆಚಾರ್ ಹಾಗೂ ಕೃಷ್ಣ ಆಚಾರ್ ಜತೆಗಿದ್ದರು.