ಗ್ರಾಹಕರು ತಮ್ಮ ಹಕ್ಕಿನ ಬಗ್ಗೆ ಅರಿವನ್ನು ಹೊಂದಿದಾಗ ತಮಗಾದ ಅನ್ಯಾಯದ ಬಗ್ಗೆ ಪ್ರಶ್ನಿಸಲು ಸಾಧ್ಯ: ನ್ಯಾ. ಶರ್ಮಿಳಾ ಎಸ್

ಉಡುಪಿ, ಮಾರ್ಚ್ 15 (ಕವಾ) : ಗ್ರಾಹಕರು ವಸ್ತುಗಳನ್ನು ಖರೀದಿಸುವಾಗ ಅಥವಾ ಸೇವೆಗಳನ್ನು ಪಡೆಯುವಾಗ ತಮಗಾಗುವ ಶೋಷಣೆಯನ್ನು
ಪ್ರಶ್ನಿಸಲು, ಗ್ರಾಹಕರ ಹಿತರಕ್ಷಣೆಗೆ ಇರುವ ಕಾನೂನುಗಳನ್ನು ತಿಳಿದುಕೊಂಡಾಗ ಮಾತ್ರ ಸಾಧ್ಯ ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ
ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್ ತಿಳಿಸಿದರು. ಅವರು ಇಂದು ನಗರದ ವಳಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆಯ ಸಭಾಂಗಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಬಳಕೆದಾರರ
ವೇದಿಕೆ (ರಿ), ಜಿಲ್ಲಾ ಮಾಹಿತಿ ಕೇಂದ್ರ, ಜಿಲ್ಲಾ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕ

ವ್ಯಾಜ್ಯಗಳ ಪರಿಹಾರ ಆಯೋಗ ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಗ್ರಾಹಕರ
ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸರಕಾರ ಗ್ರಾಹಕರ ಹಿತರಕ್ಷಣೆಗಾಗಿ ಅನೇಕ ಕಾನೂನುಗಳನ್ನು ಜಾರಿಗೆ ತಂದಿದೆ. ಇವುಗಳ ಬಗ್ಗೆ ಗ್ರಾಹಕರು ಅರಿವು ಹೊಂದಿದಾಗ ತಮಗಾದ
ಅನ್ಯಾಯದ ಬಗ್ಗೆ ಪ್ರಶ್ನಿಸಲು ಅನುಕೂಲವಾಗುತ್ತದೆ ಎಂದರು.
ಪ್ರಥಮವಾಗಿ 1962 ರ ಮಾರ್ಚ್ 15 ರಂದು ಅಮೇರಿಕಾದ ಅಧ್ಯಕ್ಷ ಜಾನ್ ಎಫ್ ಕೆನಡಿ ಯವರು ಗ್ರಾಹಕರ ರಕ್ಷಣೆಗಾಗಿ ಕಾನೂನುಗಳನ್ನು ಜಾರಿಗೆ
ತಂದರು. ಈ ದಿನವನ್ನು ವಿಶ್ವ ಗ್ರಾಹಕರ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ. ಭಾರತದಲ್ಲಿ 1986 ರಲ್ಲಿ ಗ್ರಾಹಕರ ರಕ್ಷಣೆಗಾಗಿ
ಕಾಯಿದೆಯನ್ನು ರೂಪಿಸಲಾಯಿತು. ಮುಂದಿನ ದಿನಗಳಲ್ಲಿ ಅಗತ್ಯಕ್ಕನುಗುಣವಾಗಿ ಕೆಲವು ತಿದ್ದುಪಡಿಗಳನ್ನು ಸಹ ಮಾಡಲಾಗಿದೆ ಎಂದರು.
ಗ್ರಾಹಕ ಉತ್ಪನ್ನಗಳನ್ನು ಖರೀದಿಸುವ ಮೊದಲು, ಖರೀದಿಸುವ ಸಮಯದಲ್ಲಿ ಹಾಗೂ ನಂತರದಲ್ಲಿ ಉತ್ಪನ್ನಗಳನ್ನು ಪರೀಕ್ಷಿಸಬಹುದಾಗಿದೆ.
ಇಂತಹ ಉತ್ಪನ್ನಗಳಲ್ಲಿ ಯಾವುದೇ ದೋಷಪೂರಿತವಾಗಿ ತೊಂದರೆಗೊಳಗಾದಾಗ ದೋಷರಹಿತ ಸೇವೆಯನ್ನು ಹಾಗೂ ನಷ್ಟ ಪರಿಹಾರ
ಪಡೆಯಲು ಈ ಕಾಯಿದೆಯಲ್ಲಿ ಅವಕಾಶ ಮಾಡಿಕೊಡಲಾಗಿದೆ ಎಂದರು.
ಕಾರ್ಮಿಕ ಅಧಿಕಾರಿ ಕುಮಾರ್ ಮಾತನಾಡಿ, ಸರಕುಗಳು ಹಾಗೂ ಸೇವೆಗಳನ್ನು ಒದಗಿಸುವ ಸಂಸ್ಥೆಗಳು ಗ್ರಾಹಕ ಹಿತರಕ್ಷಣಾ ಕಾನೂನುಗಳನ್ನು
ಸರಿಯಾಗಿ ಪಾಲನೆ ಮಾಡುವುದರ ಜೊತೆಗೆ ಜನಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು ಎಂದರು.
ಸರಕು ಹಾಗೂ ಸೇವೆಗಳನ್ನು ಪಡೆಯುವ ಗ್ರಾಹಕ ತನಗಾದ ಶೋಷಣೆಯ ಬಗ್ಗೆ ಪ್ರಶ್ನಿಸುವ ಬದಲು ತನಗೆ ಅನ್ಯಾಯವಾಗದಂತೆ ಜಾಗೃತಿ
ವಹಿಸಬೇಕು. ಒಂದೊಮ್ಮೆ ಇದನ್ನು ಮೀರಿ ತೊಂದರೆಗೊಳಗಾದಲ್ಲಿ ಕಾನೂನಿನ ಉಪಯೋಗ ಪಡೆದುಕೊಳ್ಳಬೇಕು ಎಂದರು.
ಉಡುಪಿ ಬಳಕೆದಾರರ ವೇದಿಕೆಯ ಸಂಚಾಲಕ ಎ.ಪಿ ಕೊಡಂಚ ರವರು ಮಾತನಾಡಿ, ವ್ಯಾಪಾರಸ್ಥರು ತಮಗೆ ಹೆಚ್ಚು ಲಾಭ ಬರಬೇಕೆಂಬ
ಉದ್ದೇಶದಿಂದ ಮೋಸ ಮಾಡಲು ಮುಂದಾಗುತ್ತಾರೆ. ಇಂತಹ ಸಂದರ್ಭದಲ್ಲಿ ನ್ಯಾಯ ಕೊಡಿಸಲು ಗ್ರಾಹಕರ ಕಾನೂನು ಜಾರಿಗೆ ಬಂದಿದೆ ಎಂದರು.
ಆಧುನಿಕ ಈ ಯುಗದಲ್ಲಿ ಗ್ರಾಹಕನು ತಂತ್ರಾoಶದ ಸಹಾಯದಿಂದ ತನ್ನ ದೈನಂದಿಕ ವ್ಯವಹಾರಗಳನ್ನು ಮಾಡುತ್ತಿದ್ದಾನೆ. ಇವುಗಳ ಬಳಕೆ
ಮಾಡುವಾಗ ಸರಿಯಾದ ತಂತ್ರಾoಶಗಳ ಕರಗತ ಮಾಡಿಕೊಂಡು ಬಳಕೆ ಮಾಡಿಕೊಳ್ಳುವುದು ಒಳಿತು ಎಂದ ಅವರು, ಮೊಬೈಲ್, ಲ್ಯಾಪ್‌ಟಾಪ್
ಅಥವಾ ಎ.ಟಿ.ಎಮ್ ಗಳ ಬಳಕೆಯೊಂದಿಗೆ ಡಿಜಿಟಲ್ ವ್ಯವಹಾರಗಳನ್ನು ನಡೆಸುವಾಗ ಜಾಗೃತಿ ವಹಿಸುವುದು ಅವಶ್ಯ ಎಂದರು.
ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗದ ಅಧ್ಯಕ್ಷ ಸುನಿಲ್ ಟಿ ಮಾಸಾರೆಡ್ಡಿ ಮಾತನಾಡಿ, ಗ್ರಾಹಕರ ಹಿತರಕ್ಷಣಾ ಕಾಯಿದೆಗಳ
ತಿದ್ದುಪಡಿಯಿಂದ ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗಿದೆ. ಹೊಸ ಕಾಯಿದೆ ಅನ್ವಯ ಗ್ರಾಹಕ ತಾನು ವಾಸಿಸುವ ವ್ಯಾಪ್ತಿಯಲ್ಲಿ ವ್ಯಾಜ್ಯಗಳನ್ನು
ಹೂಡಬಹುದು. ಮೋಸ ಅಥವಾ ವಂಚಿಸುವoತಹ ಜಾಹೀರಾತು ನೀಡುವಂತಹ ರೂಪದರ್ಶಿಗಳ ಮೇಲೂ ಸಹ ವ್ಯಾಜ್ಯ ಹೂಡಲು ಅವಕಾಶವಿದೆ
ಎಂದರು.

ಆನ್‌ಲೈನ್ ಅಥವಾ ಇ-ಕಾಮರ್ಸ್ ಗಳ ಮೂಲಕ ಪಡೆಯುವ ವಸ್ತು ಅಥವಾ ಸೇವೆಗಳ ಗುಣಮಟ್ಟದಲ್ಲಿ ದೋಷವಿದ್ದಾಗ ಸಹ ವ್ಯಾಜ್ಯಗಳನ್ನು
ಹೂಡಲು ತಿದ್ದುಪಡಿ ಕಾನೂನು ಅವಕಾಶ ಮಾಡಿಕೊಟ್ಟಿದೆ ಎಂದ ಅವರು, ಗ್ರಾಹಕರ ವ್ಯಾಜ್ಯಗಳನ್ನು ಮಧ್ಯಸ್ಥಿಕೆಗಳ ಮೂಲಕ ಶೀಘ್ರವಾಗಿ
ಇತ್ಯರ್ಥಪಡಿಸಲು ಅವಕಾಶವಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯರಾದ ಪ್ರೇಮಾ ಹಾಗೂ ಸುಜಾತ ಬಿ ರವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಮಹಮದ್ ಇಸಾಕ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು, ಶಾಲಾ
ವಿದ್ಯಾರ್ಥಿಗಳು ಪ್ರಾರ್ಥಿಸಿದರು, ವಾದಿರಾಜ ಆಚಾರ್ಯ ವಂದಿಸಿದರೆ, ಲಕ್ಷ್ಮೀಬಾಯಿ ನಿರೂಪಿಸಿದರು.

 
 
 
 
 
 
 
 
 
 
 

Leave a Reply