ಆರಂಭಿಕ ಹಂತದಲ್ಲಿ ಗುರುತಿಸಿ, ಚಿಕಿತ್ಸೆ ಪಡೆದರೆ ಕ್ಯಾನ್ಸರ್ ರೋಗದಿಂದ ಮುಕ್ತಿ ಹೊಂದಲು ಸಾಧ್ಯ: ಅಶೋಕ್ ಕುಮಾರ್ ವೈ.ಜಿ

ಉಡುಪಿ, ಮಾರ್ಚ್ 15 (ಕವಾ) : ಮಾರಣಾಂತಿಕ ಕಾಯಿಲೆಯಾದ ಕ್ಯಾನ್ಸರ್ ರೋಗವನ್ನು ಆರಂಭಿಕ ಹಂತದಲ್ಲಿ ಗುರುತಿಸಿ, ಚಿಕಿತ್ಸೆ
ಪಡೆಯುವುದರಿಂದ ರೋಗದಿಂದ ಮುಕ್ತಿ ಹೊಂದಲು ಸಾಧ್ಯ ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕದ ಉಪಸಭಾಪತಿ
ಅಶೋಕ್ ಕುಮಾರ್ ವೈ.ಜಿ ತಿಳಿಸಿದರು.

ಅವರು ಸೋಮವಾರ, ಉಡುಪಿಯ ಡಾ. ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಯು.ಜಿ.ಎ.ವಿ ಹಾಲ್‌ನಲ್ಲಿ, ಭಾರತೀಯ
ರೆಡ್‌ಕ್ರಾಸ್ ಸಂಸ್ಥೆ ಹಾಗೂ ಯುವ ರೆಡ್‌ಕ್ರಾಸ್ ಘಟಕ ಡಾ. ಜಿ.ಶಂಕರ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಉಡುಪಿ ಇವರ ಸಂಯುಕ್ತ
ಆಶ್ರಯದಲ್ಲಿ ಆಯೋಜಿಸಿದ್ದ ಉಚಿತ ಕ್ಯಾನ್ಸರ್ ತಪಾಸಣೆ ಹಾಗೂ ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಮಾಜದಲ್ಲಿ ಕ್ಯಾನ್ಸರ್ ರೋಗವು ಒಂದು ಮಾರಣಾಂತಿಕ ರೋಗವಾಗಿದೆ. ಜನಸಾಮಾನ್ಯರು ಕ್ಯಾನ್ಸರ್ ರೋಗದ ಗುಣ ಲಕ್ಷಣಗಳ ಬಗ್ಗೆ
ಅರಿವು ಹೊಂದಿದ್ದಲ್ಲಿ ಪ್ರಾರಂಭಿಕ ಹಂತದಲ್ಲಿ ಗುರುತಿಸಿ, ಸೂಕ್ತ ಚಿಕಿತ್ಸೆಯನ್ನು ಪಡೆದುಕೊಂಡಲ್ಲಿ ಗುಣಪಡಿಸಿಕೊಳ್ಳಬಹುದಾಗಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ರೋಗವು ಸಣ್ಣ ಮಕ್ಕಳಿಂದ ಹಿಡಿದು ವಯೋವೃದ್ಧರ ತನಕ ಈ ಮಾರಣಾಂತಿಕ ಕಾಯಿಲೆಯು ಕಾಡುತ್ತಿದೆ.
ಈ ರೋಗ ಹೊಂದಿದವರು ಉತ್ತಮ ಮನೋಬಲವನ್ನು ಹೊಂದುವುದರ ಜೊತೆಗೆ ಆತ್ಮಸ್ಥೈರ್ಯವನ್ನು ಹೊಂದಿ, ಸೂಕ್ತ ಬದಲಾವಣೆ
ಕ್ರಮಗಳನ್ನು ಅನುಸರಿಸುವ ಮೂಲಕ ರೋಗದ ಭಯಾನಕತೆಯಿಂದ ಬಿಡುಗಡೆ ಪಡೆಯಬಹುದಾಗಿದೆ ಎಂದರು.

ಚಲನಚಿತ್ರ ನಟಿ ಮನಿಷಾ ಕೊಯಿಲಾರಾ, ಯುವರಾಜ್ ಸಿಂಗ್ ಅಲ್ಲದೇ ಅಂಡಾಶಯ ಕ್ಯಾನ್ಸರ್‌ನ್ನು ಹೊಂದಿದ ಮಾಯಾ ತಿವಾರಿಯವರು
ಕ್ಯಾನ್ಸರ್ ಪೀಡಿತರಾಗಿದ್ದರೂ ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆದ ಹಿನ್ನೆಲೆಯಲ್ಲಿ ಗುಣಮುಖರಾಗಿರುವುದು ನಾವು ಕಾಣಬಹುದಾಗಿದೆ
ಎಂದರು.

ಸಾಮಾನ್ಯವಾಗಿ ರಕ್ತದೊತ್ತಡ, ಮಧುಮೇಹದಂತೆ ಕ್ಯಾನ್ಸರ್ ರೋಗವೂ ಕೂಡ ಒಂದಾಗಿದೆ ಎಂದ ಅವರು, ನಮ್ಮ ಆರೋಗ್ಯ ನಮ್ಮ
ಕೈಯಲ್ಲಿ ಎನ್ನುವಂತೆ ಪ್ರತಿಯೊಬ್ಬರೂ ಉತ್ತಮ ಅಭ್ಯಾಸ, ಹವ್ಯಾಸ ಹಾಗೂ ಉತ್ತಮ ಜೀವನಶೈಲಿಯಿಂದ ಕ್ಯಾನ್ಸರ್ ರೋಗದಿಂದ ದೂರ
ಇರಲು ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಭಾಸ್ಕರ್ ಶೆಟ್ಟಿ ಎಸ್
ಅವರು ಮಾತನಾಡಿ, ಮಹಿಳೆಯರಿಗೆ ಕ್ಯಾನ್ಸರ್ ಬಗ್ಗೆ ಮಾಹಿತಿ ಹಾಗೂ ಆರೋಗ್ಯ ಶಿಕ್ಷಣವನ್ನು ನೀಡುವುದು ಒಳಿತು ಎಂದ ಅವರು, ಮಹಿಳೆಯರು
ಎಂತಹ ಸಂದರ್ಭದಲ್ಲಿಯೂ ಮನೋಧೈರ್ಯವನ್ನು ಕಳೆದುಕೊಳ್ಳದೇ, ಕಾಯಿಲೆಗಳ ವಿರುದ್ಧ ಹೋರಾಡುವ ಶಕ್ತಿ ಅವರಲ್ಲಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಉಡುಪಿ ಜಿಲ್ಲಾ ಘಟಕದ ಪೋಷಕ ಸದಸ್ಯ, ಪ್ರಥಮ ಚಿಕಿತ್ಸಾ ತರಬೇತುದಾರ ಹಾಗೂ
ಎಲುಬು ಮತ್ತು ಮೂಳೆ ತಜ್ಞ ಡಾ. ಸುರೇಶ್ ಶೆಣೈರವರು ವಿದ್ಯಾರ್ಥಿಗಳಿಗೆ ಕ್ಯಾನ್ಸರ್ ಎಂದರೇನು, ಅದರ ಚಿಹ್ನೆ ಮತ್ತು ರೋಗಲಕ್ಷಣಗಳು,
ತಡೆಗಟ್ಟುವ ವಿಧಾನ ಮತ್ತು ಮುಂಜಾಗೃತಾ ಕ್ರಮಗಳ ಬಗ್ಗೆ ಸವಿವರವಾಗಿ ದ್ಯಶ್ಯಾವಳಿಗಳ ಮೂಲಕ ವಿವರಿಸಿದರು.
ಕಾರ್ಯಕ್ರಮದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಬಿ. ರತ್ನಾಕರ ಶೆಟ್ಟಿ ಮತ್ತು ಪ್ರೋ.
ಜಯಲಕ್ಷೀ ಉಪಸ್ಥಿತರಿದ್ದರು.

ಯುವ ರೆಡ್ ಕ್ರಾಸ್ ಘಟಕದ ಪ್ರೋಗ್ರಾಮ್ ಆಫೀಸರ್. ಪ್ರೋ. ಶೋಭಾ ಎಂ. ಸ್ವಾಗತಿಸಿದರು.

 
 
 
 
 
 
 
 
 
 
 

Leave a Reply