ವಂದೇ ಭಾರತ್ ರೈಲಿಗೆ ಕಲ್ಲು ಹೊಡೆದ ಮಕ್ಕಳಿಬ್ಬರು ಪೊಲೀಸರ ವಶಕ್ಕೆ

ವಂದೇ ಭಾರತ್ ರೈಲಿಗೆ ಕಲ್ಲು ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ 12 ವರ್ಷದ ಇಬ್ಬರು ಮಕ್ಕಳನ್ನು ರೈಲ್ವೆ ಪೊಲೀಸರು ದಾವಣಗೆರೆಯಲ್ಲಿ ವಶಕ್ಕೆ ಪಡೆದಿದ್ದಾರೆ.

ವಂದೇ ಭಾರತ್ ರೈಲು ಧಾರವಾಡದಿಂದ ದಾವಣಗೆರೆಗೆ ಆಗಮಿಸುತ್ತಿದ್ದ ಸಂದರ್ಭ ಇಬ್ಬರು ಮಕ್ಕಳು ರೈಲಿಗೆ ಕಲ್ಲು ಹೊಡೆದಿದ್ದು, ಕಲ್ಲಿನ ಹೊಡೆತಕ್ಕೆ ರೈಲಿನ ಕಿಟಕಿ ಗಾಜು ಬಿರುಕು ಬಿಟ್ಟಿತ್ತು. ಈ ಹಿನ್ನೆಲೆ ಇಬ್ಬರು ಮಕ್ಕಳನ್ನು ಆರ್‌ಪಿಎಫ್ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇವರಿಬ್ಬರು ದಾವಣಗೆರೆಯ ಎಸ್‌ಎಸ್ ನಗರ ಹಾಗೂ ಭಾಷಾ ನಗರದವರಾಗಿದ್ದು, ದಾವಣಗೆರೆ ರೈಲ್ವೆ ಪೊಲೀಸರು ಹಾಗೂ ಆರ್‌ಪಿಎಫ್ ಪೊಲೀಸರ ನೇತೃತ್ವದಲ್ಲಿ ಇವರಿಬ್ಬರನ್ನು ವಶಕ್ಕೆ ಪಡೆದು ಚಿತ್ರದುರ್ಗದ ಬಾಲಮಂದಿರದಲ್ಲಿ ಇರಿಸಿದ್ದಾರೆ.

ಜೂನ್ 26ರಂದು ಪ್ರಧಾನಿ ನರೇಂದ್ರ ಮೋದಿ ಈ ವಂದೇ ಭಾರತ್ ರೈಲನ್ನು ಲೋಕಾರ್ಪಣೆಗೊಳಿಸಿದ್ದರು. ಜುಲೈ 1ರ ಶನಿವಾರ 3:30ಕ್ಕೆ ಇಬ್ಬರು ಮಕ್ಕಳು ಈ ಕೃತ್ಯವೆಸಗಿದ್ದಾರೆ. ಘಟನೆಯ ಹಿನ್ನೆಲೆ ಆರ್‌ಪಿಎಫ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

 
 
 
 
 
 
 
 
 
 
 

Leave a Reply